ಶ್ರೀ ಕಾರಿಂಜೇಶ್ವರ ದೇಗುಲದ ಬಳಿ ಗಣಿಗಾರಿಕೆ ಸ್ಥಗಿತ: ಸಚಿವ ಸುನಿಲ್
Team Udayavani, Feb 14, 2022, 5:30 AM IST
ಮಂಗಳೂರು: ಕರಾವಳಿಯ ಅತ್ಯಂತ ಪ್ರಸಿದ್ಧ ಮತ್ತು ಪುರಾತನ ದೇವಸ್ಥಾನಗಳಲ್ಲಿ ಒಂದಾದ ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಆಸುಪಾಸಿನ ಕಾವಳ ಮೂಡೂರು ಮತ್ತು ಕಾವಳ ಪಡೂರು ಗ್ರಾಮಗಳಲ್ಲಿ ನಡೆಯುತ್ತಿದ್ದ ಮೂರು ಕಲ್ಲು ಗಣಿಗಾರಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕಾವಳ ಮೂಡೂರು ಗ್ರಾಮದ ಸರ್ವೆ ನಂ. 164/2ಪಿ1ರಲ್ಲಿ 0.50 ಎಕ್ರೆ ಮತ್ತು 172/2ಪಿ1 ರಲ್ಲಿ 0.50 ಎಕ್ರೆ ಸೇರಿ ಒಟ್ಟು 1ಎಕ್ರೆ ಪ್ರದೇಶದಲ್ಲಿ 2007ರಿಂದ ಗಣಿಗಾರಿಕೆ ನಡೆಯುತ್ತಿತ್ತು. ಪರವಾನಿಗೆಯ ವ್ಯಾಪ್ತಿ ಮೀರಿ ಸುಮಾರು 3.28 ಎಕ್ರೆಯಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಿರುವ ಹಿನ್ನೆಲೆಯಲ್ಲಿ 8,12,87,198 ರೂ. ದಂಡ ಪಾವತಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೂಚಿಸಲಾಗಿದೆ. ದಂಡ ಪಾವತಿಸದ ಕಾರಣ ಗಣಿಗಾರಿಕೆಯನ್ನು 2021ರ ಡಿಸೆಂಬರ್ನಲ್ಲಿ ಸ್ಥಗಿತಗೊಳಿಸಲಾಗಿದೆ ಹಾಗೂ ಅನಧಿಕೃತ ಗಣಿಗಾರಿಕೆ ನಡೆಸಿರುವ ಮಾಲಕರ ವಿರುದ್ಧ ಬಂಟ್ವಾಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.
ಕಾವಳ ಪಡೂರು ಗ್ರಾಮದ ಸ.ನಂ. 121/2ಪಿ1 ರಲ್ಲಿ 1 ಎಕ್ರೆಯಲ್ಲಿ 2016ರಿಂದ ಆರಂಭಗೊಂಡಿದ್ದ ಗಣಿಗಾರಿಕೆಗೆ 20 ವರ್ಷಗಳ ಅವಧಿಗೆ ಪರವಾನಿಗೆ ಇದ್ದರೂ ಗುತ್ತಿಗೆದಾರರು ಗೋಮಾಳ ಅತಿಕ್ರಮಿಸಿ ಗಣಿಗಾರಿಕೆ ನಡೆಸುತ್ತಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ. ಸ.ನಂ 122/3ಪಿ1ರ 1 ಎಕ್ರೆಯಲ್ಲಿ 2015ರಿಂದ ಆರಂಭಗೊಂಡಿದ್ದ ಗಣಿಗಾರಿಕೆಯನ್ನು ಅದರ ಗುತ್ತಿಗೆದಾರರು ಮೃತಪಟ್ಟದ್ದರಿಂದ ಅನಧಿಕೃತವಾಗಿ ಬೇರೆ ವ್ಯಕ್ತಿ ಮುಂದುವರಿಸಿರುವುದು ಕಂಡುಬಂದದ್ದರಿಂದ ಇದನ್ನೂ ಸ್ಥಗಿತಗೊಳಿಸಲಾಗಿದೆ.
ಕ್ಷೇತ್ರ ವ್ಯಾಪ್ತಿಯಲ್ಲಿ ಮುಂದೆ ಗಣಿಗಾರಿಕೆ ನಡೆಸದಂತೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಇಲಾಖಾ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ದೇಗುಲ ಪರಿಸರವನ್ನು ಅತೀ ಸೂಕ್ಷ್ಮ ವಲಯ ಎಂದು ಘೋಷಿಸುವ ಬಗ್ಗೆ ಸರಕಾರಿ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಮುಂದೆ ಭಕ್ತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.