ಟೋಲ್ ಮುಕ್ತಿ ಆಗ್ರಹಿಸಿ ಮೂಲ್ಕಿ ಬಂದ್; ಪ್ರತಿಭಟನೆ
Team Udayavani, Feb 6, 2019, 1:00 AM IST
ಮೂಲ್ಕಿ/ಪಡುಬಿದ್ರಿ: ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಸುಂಕ ಸಂಗ್ರಹ ಆರಂಭಿಸಿರುವುದು ಮತ್ತು ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡದೆ ದರ್ಪದ ಮಾತುಗಳನ್ನಾಡುವ ನವಯುಗ ಕಂಪೆನಿಯ ನಡೆಯನ್ನು ಖಂಡಿಸಿ ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿ ನೇತೃತ್ವದಲ್ಲಿ ಮಂಗಳವಾರ ಮೂಲ್ಕಿ ಬಂದ್ ಮತ್ತು ಹೆಜಮಾಡಿ ಟೋಲ್ಗೇಟ್ ವರೆಗೆ ಪ್ರತಿಭಟನ ರ್ಯಾಲಿ ನಡೆಯಿತು.
300ಕ್ಕೂ ಅಧಿಕ ಪ್ರತಿಭಟನಕಾರರು ಮೂಲ್ಕಿ ಬಸ್ ನಿಲ್ದಾಣದ ಬಳಿ ಸಭೆನಡೆಸಿ ಬಳಿಕ ಪಾದಯಾತ್ರೆ
ಯಲ್ಲಿ ಹೆಜಮಾಡಿಯ ಟೋಲ್ ಪ್ಲಾಝಾದ ಬಳಿಗಾಗಮಿಸಿದರು.
ಪ್ರತಿಭಟನ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಕೆ. ಅಭಯಚಂದ್ರ ಜೈನ್ ಮತ್ತು ಕೆ. ಅಮರನಾಥ ಶೆಟ್ಟಿ ಅವರು ಮಾತನಾಡಿ, ಜನರ ಸಹನೆಯನ್ನು ಪರೀಕ್ಷಿಸದೇ ಪರಿಸರದ 7 ಕಿ.ಮೀ. ವ್ಯಾಪ್ತಿಯ ವಾಹನಗಳಿಗೆ ವಿನಾಯಿತಿ ನೀಡುವುದು ಸೂಕ್ತ ಎಂದರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ ಮಾತ ನಾಡಿ, ಬಜೆಟ್ ಅಧಿವೇಶನದಲ್ಲಿ ತಾನು ಕರಾವಳಿ ಶಾಸಕರ ನೆರವಿ ನೊಂದಿಗೆ ವಿಧಾನ ಪರಿಷತ್, ವಿಧಾನ ಸಭೆಗಳಲ್ಲಿ ನವಯುಗ ಕಂಪೆನಿ ವಿರುದ್ಧ ನಿಲುವಳಿ ಸೂಚನೆಯನ್ನು ಮಂಡಿಸುವೆ ಎಂದರು.
ಸಂಪೂರ್ಣ ಬಂದ್
ಸರಕಾರಿ ಕಚೇರಿ, ಬ್ಯಾಂಕ್, ಅಂಚೆ ಕಚೇರಿ, ವಿಮಾ ಕಚೇರಿ ಮೂಲ್ಕಿ ಹಾಗೂ ಕಾರ್ನಾಡಿನ ಎಲ್ಲ ಕಾರು, ರಿಕ್ಷಾ ಚಾಲಕರು ಮತ್ತು ಎಲ್ಲ ವ್ಯಾಪಾರಿಗಳು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಮೂಲ್ಕಿಯನ್ನು ಸಂಪೂರ್ಣ ಬಂದ್ ಮಾಡಿದರು. ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಅಧಿಕಾರಿಗಳಿಗೆ ಇದೇ ಸಂದರ್ಭ ಮನವಿ ಸಲ್ಲಿಸಲಾಯಿತು.