ಐದು ವರ್ಷದ ಬಳಿಕ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ
ಮುಂಗಾರು ಋತು ಅಂತ್ಯ
Team Udayavani, Oct 4, 2019, 5:36 AM IST
ಮಂಗಳೂರು: ರಾಜ್ಯದಲ್ಲಿ ಮುಂಗಾರು ಋತು ಪೂರ್ಣಗೊಂಡಿದ್ದು, ಕಳೆದ ಐದು ವರ್ಷದ ಬಳಿಕ ರಾಜ್ಯದಲ್ಲಿ ಇದೇ ಮೊದಲ ಬಾರಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ.
ಜೂನ್ 1ರಿಂದ ಸೆಪ್ಟಂಬರ್ ಕೊನೆಯ ವರೆಗೆ ಆಯಾ ಜಿಲ್ಲೆಗಳಲ್ಲಿ ಸುರಿಯ ಮಳೆಯ ಆಧಾರದಲ್ಲಿ ಹವಾಮಾನ ಇಲಾಖೆಯು ಮುಂಗಾರಿನ ಲೆಕ್ಕಾಚಾರ ಹಾಕುತ್ತದೆ. ರಾಜ್ಯದಲ್ಲಿ 839 ಮಿ.ಮೀ. ಮಳೆಯಾಗಬೇಕು. ಈ ಬಾರಿ 977 ಮಿ.ಮೀ. ಸುರಿದು ಶೇ. 16ರಷ್ಟು ಹೆಚ್ಚಳವಾಗಿದೆ.
ಹವಾಮಾನ ಇಲಾಖೆಯ ಅಂಕಿ- ಅಂಶದ ಪ್ರಕಾರ ಕರಾವಳಿಯ ನಾಲ್ಕು ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 3,727 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದು, 3,577 ಮಿ.ಮೀ. (ಶೇ. 4ರಷ್ಟು ಕಡಿಮೆ), ಬಂಟ್ವಾಳದಲ್ಲಿ 3,400 ಮಿ.ಮೀ. ವಾಡಿಕೆ ಮಳೆಯಾಗ ಬೇಕಿದ್ದು, 3,381 ಮಿ.ಮೀ. (ಶೇ. 1ರಷ್ಟು ಕಡಿಮೆ), ಪುತ್ತೂರಿನಲ್ಲಿ 3,332 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದು 3,142 ಮಿ.ಮೀ. (ಶೇ. 6ರಷ್ಟು ಮಳೆ ಕಡಿಮೆ) ಮತ್ತು ಸುಳ್ಯದಲ್ಲಿ 3,188 ಮಿ.ಮೀ.ವಾಡಿಕೆ ಮಳೆಯಾಗ ಬೇಕಿದ್ದು, 3,088 ಮಿ.ಮೀ. (ಶೇ. 3ರಷ್ಟು ಮಳೆ ಕೊರತೆ) ಮಳೆಯಾಗಿದೆ.
ಉಡುಪಿ ಮುಂದೆ
ದ.ಕ. ಜಿಲ್ಲೆಯಲ್ಲಿ ಈ ಮುಂಗಾರಿನಲ್ಲಿ ವಾಡಿಕೆಯಂತೆ 3,441 ಮಿ.ಮೀ. ಮಳೆಯಾಗಬೇಕಿದ್ದು, 3,334 ಮಿ.ಮೀ. ಮಳೆಯಾಗಿದೆ. ಆ ಮೂಲಕ ಶೇ. 3ರಷ್ಟು ಕಡಿಮೆ ಮಳೆಯಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟಾರೆ ವಾಡಿಕೆಗಿಂತ ಶೇ. 3ರಷ್ಟು ಮಳೆ ಜಾಸ್ತಿಯಾಗಿತ್ತು. ಉಡುಪಿ ಜಿಲ್ಲೆಯಲ್ಲಿ ವಾಡಿಕೆಯಂತೆ ಒಟ್ಟು 4,071 ಮಿ.ಮೀ. ಮಳೆಯಾಗಬೇಕು. ಆದರೆ 4,466 ಮಿ.ಮೀ. ಮುಂಗಾರು ಮಳೆಯಾಗಿದ್ದು ವಾಡಿಕೆಗಿಂತ ಶೇ. 10ರಷ್ಟು ಜಾಸ್ತಿಯಾಗಿದೆ.
4 ತಾಲೂಕುಗಳಲ್ಲಿ ಅಧಿಕ ಮಳೆ
ದ.ಕ. ಜಿಲ್ಲೆಯಲ್ಲಿ ಬೇರೆ ತಾಲೂಕು ಗಳಿಗೆ ಹೋಲಿಸಿ ದರೆ ಮಂಗಳೂರು ತಾಲೂಕಿ ನಲ್ಲಿ ಶೇ. 3ರಷ್ಟು ವಾಡಿಕೆಗಿಂತ ಜಾಸ್ತಿ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಶೇ. 1, ಕುಂದಾಪುರ ತಾಲೂಕಿನಲ್ಲಿ ಶೇ. 19, ಉಡುಪಿ ತಾಲೂಕಿನಲ್ಲಿ ಶೇ. 11ರಷ್ಟು ಮಳೆ ಹೆಚ್ಚಳವಾಗಿದೆ.
ಸಾಮಾನ್ಯವಾಗಿ ಅಕ್ಟೋಬರ್ 2ನೇ ವಾರದಿಂದ ಹಿಂಗಾರು ಆರಂಭ ಗೊಳ್ಳುತ್ತದೆ. ಈ ಬಾರಿಯ ಹಿಂಗಾರು ಹೇಗಿರಬಹುದು ಎಂದು ಹವಾಮಾನ ಇಲಾಖೆ ಇನ್ನಷ್ಟೇ ಮಾಹಿತಿ ನೀಡಬೇಕಿದೆ. ಸಾಮಾನ್ಯವಾಗಿ ಸೆಪ್ಟಂಬರ್ನಲ್ಲಿ ಉತ್ತಮ ಮಳೆ ಬಂದರೆ ಹಿಂಗಾರು ಉತ್ತಮವಾಗಿರುತ್ತದೆ. ಆದರೆ ಮುಂಗಾರು ಪ್ರವೇಶ ಪಡೆದ ಬಳಿಕ ಆಗಸ್ಟ್ನಲ್ಲಿ ಭಾರೀ ಮಳೆಯಾಗಿತ್ತು. ಬಳಿಕ ಕ್ಷೀಣಿಸಿತ್ತು.
ಯಾವೆಲ್ಲ ಜಿಲ್ಲೆಗಳಲ್ಲಿ ಮುಂಗಾರು ಕ್ಷೀಣ
ರಾಜ್ಯದ ಒಟ್ಟು ಮಳೆ ಪ್ರಮಾಣ ಹೆಚ್ಚಳವಾಗಿದ್ದರೂ 11 ಜಿಲ್ಲೆಗಳಲ್ಲಿ ವಾಡಿಕೆಯಂತೆ ಮುಂಗಾರು ಸುರಿದಿಲ್ಲ. ದಕ್ಷಿಣ ಕನ್ನಡ ಶೇ. 3, ಬೆಂಗಳೂರು ನಗರ ಶೇ. 16, ಬೆಂಗಳೂರು ಗ್ರಾಮೀಣ ಶೇ. 7, ಕೋಲಾರ ಶೇ. 9, ಚಿಕ್ಕಬಳ್ಳಾಪುರ ಶೇ. 8, ಕೊಪ್ಪಳ ಶೇ. 6, ರಾಯಚೂರು ಶೇ. 16, ಕಲಬುರಗಿ ಶೇ. 22, ಯಾದಗಿರಿ 25, ಬೀದರ್ ಶೇ. 25, ವಿಜಯಪುರ ಶೇ. 27 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿಲ್ಲ.
ಕಳೆದ 5 ವರ್ಷಗಳ ಮುಂಗಾರು ಮಳೆ ವಿವರ
ವಾಡಿಕೆ ಮಳೆ 839 ಮಿ.ಮೀ.
2014ರಲ್ಲಿ 833 ಮಿ.ಮೀ.
(ಶೇ. 1ರಷ್ಟು ಕೊರತೆ)
2015ರಲ್ಲಿ 652 ಮಿ.ಮೀ.
(ಶೇ. 22ರಷ್ಟು ಕೊರತೆ)
2016ರಲ್ಲಿ 690 ಮಿ.ಮೀ.
(ಶೇ. 18ರಷ್ಟು ಕೊರತೆ)
2017ರಲ್ಲಿ 774 ಮಿ.ಮೀ.
(ಶೇ. 8ರಷ್ಟು ಕೊರತೆ)
2018ರಲ್ಲಿ 804 ಮಿ.ಮೀ.
(ಶೇ. 4ರಷ್ಟು ಕೊರತೆ)
2019ರಲ್ಲಿ 977 ಮಿ.ಮೀ.
(ಶೇ. 16ರಷ್ಟು ಹೆಚ್ಚಳ)
ಈ ಬಾರಿಯ ಮುಂಗಾರು ಪೂರ್ಣಗೊಂಡಿದೆ. ರಾಜ್ಯದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಸರಾಸರಿ ಮಳೆ ಪ್ರಮಾಣ ಹೆಚ್ಚಳವಾಗಿದೆ. ಮುಂಗಾರು ಮಾರುತ ಇನ್ನೂ ಉತ್ತರ ಭಾರತದಲ್ಲಿ ಉತ್ತಮವಾಗಿದ್ದು, ರಾಜ್ಯ ಕರಾವಳಿಗೆ ಹಿಂಗಾರು ಮಾರುತ ಅಪ್ಪಳಿಸಲು ಇನ್ನೂ ಕೆಲವು ವಾರಗಳು ಬೇಕಾಗಬಹುದು.
-ಸುನಿಲ್ ಗವಾಸ್ಕರ್, ಕೆಎಸ್ಟಿಡಿಎಂಸಿ ವಿಜ್ಞಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್