ನಿಯಮ ಪಾಲನೆಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ಮನವಿ
Team Udayavani, May 11, 2022, 11:46 PM IST
ಮಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ಧ್ವನಿವರ್ಧಕ ಬಳಕೆ ಬಗ್ಗೆ ರಾಜ್ಯ ಸರಕಾರ ಹೊಸ ಆದೇಶ ಹೊರಡಿಸಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಸೀದಿಗಳಲ್ಲಿ ಈ ನಿಯಮ ಪಾಲಿಸಿ ಸೌಹಾರ್ದ ಕಾಪಾಡೋಣ ಎಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮೊಹಮ್ಮದ್ ಮಸೂದ್ ತಿಳಿಸಿದ್ದಾರೆ.
ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ನಿರ್ದಿಷ್ಟ ಮಿತಿಯಲ್ಲಿ ಧ್ವನಿವರ್ಧಕ ಬಳಸುವಂತೆ ಮಸೀದಿಗಳಿಗೆ ನಾವು ಸಮಿತಿ ವತಿ ಯಿಂದ ಮನವಿ ಮಾಡಿದ್ದು, ಸಕಾ ರಾತ್ಮಕವಾಗಿ ಸ್ಪಂದಿಸಿ ದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಧಾರ್ಮಿಕ ಕಾರ್ಯಕ್ರಮಕ್ಕೆ ಧ್ವನಿ ವರ್ಧಕ ಬಳಸಲು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿ ಅನುಮತಿ ಪಡೆಯಬೇಕು ಎಂಬ ನಿಯಮ ಸರಿಯಲ್ಲ. ನಾನು ಅಧ್ಯಕ್ಷನಾಗಿರುವ ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಯನ್ನೇ ತೆಗೆದು ಹಾಕಿದ್ದೇನೆ. ಬೇರೆ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ ಮಾಡಬೇಕಾದವರು ನಿಯಮ ಪ್ರಕಾರ ಮನವಿ ಸಲ್ಲಿಸಿ ಬಳಕೆ ಮಾಡಿ ಎಂದರು.
ಇದನ್ನೂ ಓದಿ:ಸಮಾಜದ ಚಾರಿತ್ರಿಕ ಹಿನ್ನೆಲೆಯನ್ನು ಬಿಂಬಿಸುವ ‘ಕಾನನ ಜನಾರ್ದನ’
ಮುತಾಲಿಕ್ರದು ರಾವಣ ಸೇನೆ!
ಸೌಹಾರ್ದದಿಂದ ಇದ್ದ ಸಮಾಜ ವನ್ನು ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಕದಡಿದ್ದಾರೆ. ಇವರಿಂದಾಗಿ ಇದೀಗ ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲ ಧರ್ಮದವರ ಧಾರ್ಮಿಕ ಆಚರಣೆಗಳಿಗೆ ಸಮಸ್ಯೆಯಾಗಿದೆ. ಅವರದ್ದು ರಾಮ ಸೇನೆ ಅಲ್ಲ ರಾವಣ ಸೇನೆ. ಅವರವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ ಎಂದರು.
ಮುಸ್ಲಿಂ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದ ಸಿ. ಮಹಮುದ್, ಬಿ.ಎಂ.ಮುಮ್ತಾಜ್ ಅಲಿ ಕೃಷ್ಣಾಪುರ, ಕೆ.ಅಶ್ರಫ್, ಪ್ರಮುಖರಾದ ಭಾಷಾ ತಂಗಳ್, ಡಿ.ಎಂ. ಅಸ್ಲಂ, ಸಿ.ಎಂ. ಮುಸ್ತಫ ಪತ್ರಿಕಾಗೋಷ್ಠಿಯಲ್ಲಿದ್ದರು.