ಮೋದಿ ಭೇಟಿಯಾದ ನಳಿನ್: ಯೋಜನೆಗಳ ಅನುಷ್ಠಾನಕ್ಕೆ ಪ್ರಧಾನಿ ಭರವಸೆ
Team Udayavani, Aug 3, 2019, 10:45 AM IST
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ಹೊಸ ದಿಲ್ಲಿಯಲ್ಲಿ ಭೇಟಿಯಾದ ಸಂಸದ ನಳಿನ್ಕುಮಾರ್ ಕಟೀಲು ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಧಾನಿಯವರ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ವರದಿಯನ್ನು ಹಸ್ತಾಂತರಿಸಿದರು.
ಮುದ್ರಾ ಮತ್ತು ಜನಧನ್ ಯೋಜನೆಗಳು ದಕ್ಷಿಣ ಕನ್ನಡದಲ್ಲಿ ಅತ್ಯುತ್ತಮವಾಗಿ ಅನುಷ್ಠಾನಗೊಂಡಿವೆ. ಸುಮಾರು 1.12 ಲಕ್ಷ ಜನರಿಗೆ 1,600 ಕೋಟಿ ರೂ. ಸಾಲ ನೀಡಿ ಉದ್ದಿಮೆದಾರರನ್ನಾಗಿ ಪ್ರೋತ್ಸಾಹಿಸಿದ ಯೋಜನೆಯ ವರದಿಯನ್ನು ಪ್ರಧಾನಿಗೆ ನಳಿನ್ ಹಸ್ತಾಂತರಿಸಿದರು. ಸಂಸದರ ಕಾರ್ಯಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇವೇಳೆ ಪ್ರಧಾನಿ ಮೋದಿ ಹಣಕಾಸು ಇಲಾಖೆಯ ಕಾರ್ಯದರ್ಶಿ ರಾಜೀವ್ ಕೆ.ಆರ್. ಅವರೊಂದಿಗೆ ಸಭೆ ನಡೆಸಿ, ದಕ್ಷಿಣ ಕನ್ನಡ ಜಿಲ್ಲೆಯು ಕೇಂದ್ರ ಸರಕಾರದ ಇನ್ನಿತರ ಯೋಜನೆಗಳನ್ನೂ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಂಪೂರ್ಣ ಸಹಕಾರ ನೀಡುವಂತೆ ಆದೇಶಿಸಿದರು.
ಜಿಲ್ಲೆಯ ಹೊಸ ಮತ್ತು ಬಾಕಿಯಿರುವ ಯೋಜನೆಗಳ ಕುರಿತು ಪ್ರಧಾನಿಗೆ ಸಂಸದರು ಮನವಿ ಸಲ್ಲಿಸಿದರು. ಸ್ಪಂದಿಸಿದ ಪ್ರಧಾನಿ, ತತ್ಕ್ಷಣ ಅಧಿಕಾರಿಗಳ ವಿಶೇಷ ಸಭೆ ಕರೆದು ಯೋಜನೆಗಳ ಅನುಷ್ಠಾನಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ.
ಬೇಡಿಕೆಗಳು
ಜಿಲ್ಲೆಗೆ ಕೇಂದ್ರೀಯ ವಿಶ್ವವಿದ್ಯಾಲಯ, ಐಟಿ ಪಾರ್ಕ್, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಅಥವಾ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಮಂಗಳೂರಿನ ಮೀನುಗಾರಿಕೆ ಕಾಲೇಜನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ಅನೇಕ ಯೋಜನೆಗಳಿಗೆ ವೇಗ ನೀಡುವಂತೆ ಸಂಸದರು ಮನವಿ ಮಾಡಿದ್ದಾರೆ.