ಬದಿಹಿತ್ತಿಲು ಕೆರೆ ಪುನಶ್ಚೇತನಕ್ಕೆ ನಿರ್ಲಕ್ಷ್ಯ
Team Udayavani, Apr 9, 2018, 12:43 PM IST
ಉಪ್ಪಿನಂಗಡಿ : ಕೆರೆಗಳ ಪುನಶ್ಚೇತನಕ್ಕೆ ಎಲ್ಲೆಡೆ ಪ್ರಯತ್ನಗಳು ನಡೆಯುತ್ತಿದ್ದರೂ, ಬದಿಹಿತ್ತಿಲು ಕೆರೆಯ ಬಗ್ಗೆ ತೆಕ್ಕಾರು ಗ್ರಾ.ಪಂ. ಆಡಳಿತ ನಿರ್ಲಕ್ಷ್ಯ ತೋರಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ 20 ವರ್ಷಗಳ ಹಿಂದೆ ತೆಕ್ಕಾರು ಗ್ರಾಮ ಬಾರ್ಯ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿದ್ದು, ಆ ವೇಳೆ ಸರಕಾರಿ ಯೋಜನೆಯಡಿ ಈ ಕೆರೆಗೆ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಕೆರೆಯು ಮೈ ತುಂಬಿ ಗ್ರಾಮದ ಜನತೆಗೆ ನೀರುಣಿಸುತ್ತಿತ್ತು. ಬರಬರುತ್ತಾ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ಬರಿದಾಗುತ್ತಾ ಬಂದಿದೆ.
ಪುನಶ್ಚೇತನಕ್ಕೆ ಗಮನವಿಲ್ಲ
ಕಳೆದ ಬಾರಿಯ ಚುನಾವಣೆಯ ವೇಳೆ ಜನಸಂಖ್ಯಾ ಆಧಾರದಲ್ಲಿ ತೆಕ್ಕಾರು ಗ್ರಾಮವು ಸ್ವತಂತ್ರ ಗ್ರಾ.ಪಂ. ಆಗಿ ಮಾನ್ಯತೆ ಪಡೆದಿದ್ದು, ಮೂರು ವಾರ್ಡ್ಗಳನ್ನು ಒಳಗೊಂಡ 9 ಮಂದಿ ಪಂಚಾಯತ್ ಸದಸ್ಯರು ಇಲ್ಲಿದ್ದಾರೆ. ಆದರೆ ಗ್ರಾಮದ ಮೂಲ ಸೌಕರ್ಯವನ್ನು ರಕ್ಷಿಸಲು ಒಗ್ಗಟ್ಟಾಗಿಲ್ಲದಿರುವುದು ಕೆರೆಯ ದುಸ್ಥಿತಿಗೆ ಕಾರಣವಾಗಿದೆ. ಈ ಕೆರೆಯಲ್ಲಿ ನೀರಿನ ಲಭ್ಯತೆ ಹೆಚ್ಚಿದರೆ, ಗ್ರಾಮದ ನೀರಿನ ಬೇಡಿಕೆಗೆ ನೆರವಾಗುತ್ತದೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಕೆರೆ ಪುನಶ್ಚೇತನವಾಗಲಿ
ಅಂತರ್ಜಲ ಹೆಚ್ಚಿಸಲು ಕೆರೆ, ಬಾವಿಗಳು ಸುಸ್ಥಿತಿಯಲ್ಲಿರಬೇಕು. ಬದಿಹಿತ್ತಿಲು ಕೆರೆ ಪುನಶ್ಚೇತನದ ಬಗ್ಗೆ ಅಗತ್ಯ ಕ್ರಮ ಜರುಗಿಸಬೇಕಾಗಿದೆ.
– ಅಣ್ಣುಪೂಜಾರಿ,
ಗ್ರಾಮದ ಹಿರಿಯರು