ಉಕ್ಕಿ ಹರಿಯುತ್ತಿರುವ ನೇತ್ರಾವತಿ – ಕುಮಾರಧಾರ: ಸಂಗಮಕ್ಕೆ ಕ್ಷಣಗಣನೆ
Team Udayavani, Aug 14, 2018, 1:06 PM IST
ಪುತ್ತೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ವರ್ಷಧಾರೆಯಿಂದಾಗಿ ಕುಮಾರಧಾರ- ನೇತ್ರಾವತಿ ನದಿಗಳು ದಕ್ಷಿಣ ಕಾಶಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ಮೂಲಕ ಸಂಗಮಗೊಳ್ಳುವುದಕ್ಕೆ ಕ್ಷಣಗಣನೆ ಆರಂಭವಾಗಿದೆ.
ಕೆಲವು ದಿನಗಳ ಹಿಂದೆ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ನೇತ್ರಾವತಿ- ಕುಮಾರಧಾರ ನದಿಗಳ ನೀರಿನ ಹರಿವು ಪ್ರಮಾಣ ಹೆಚ್ಚಾಗಿ ಮಹಾಕಾಳಿ ದೇವಸ್ಥಾನದ ವರೆಗೆ ನೀರು ನುಗ್ಗಿ ಸಂಗಮವಾಗುವ ನಿರೀಕ್ಷೆ ಇತ್ತು. ಮಳೆಯ ಪ್ರಮಾಣ ಕಡಿಮೆಯಾದ ಪರಿಣಾಮ ಮತ್ತೆ ನೀರಿನ ಪ್ರಮಾಣ ತಗ್ಗಿತ್ತು.
ಇದೀಗ ಕಳೆದ ಮೂರು ನಾಲ್ಕು ದಿನಗಳಿಂದ ಎಡೆಬಿಡದೆ ಸುರಿದ ಮಳೆಗೆ ಮತ್ತೆ ನದಿಗಳು ನೀರಿನ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದು, ಆ.14 ರಂದು 12 ಗಂಟೆಯ ವೇಳೆಗೆ ಮಹಾಕಾಳಿ ದೇವಸ್ಥಾನದ ವರೆಗೆ ನೀರು ನುಗ್ಗಿದೆ.
ಕಳೆದ ಕೆಲವು ವರ್ಷಗಳಿಂದ ಇಲ್ಲಿ ಈ ನದಿಗಳ ಸಂಗಮ ನಡೆದಿರಲಿಲ್ಲ . ಹಾಗಾಗಿ ಇದು ಕುತೂಹಲ ಮೂಡಿಸಿದೆ. ನದಿಗಳ ಅಪೂರ್ವ ಸಂಗಮವನ್ನು ವೀಕ್ಷಿಸಲು ಸಾರ್ವಜನಿಕರು ತಂಡೋಪ ತಂಡವಾಗಿ ಜನರು ಉಪ್ಪಿನಂಗಡಿಗೆ ಆಗಮಿಸುತ್ತಿದ್ದಾರೆ.