ಹಲೇಜಿ ಬಳಿ ನೂತನ ತಡೆಗೋಡೆ ಪೂರ್ಣ
Team Udayavani, Apr 26, 2022, 9:12 AM IST
ಬೆಳ್ತಂಗಡಿ: ಗುರುವಾಯನಕೆರೆ- ಉಪ್ಪಿನಂಗಡಿ ಮುಖ್ಯ ರಸ್ತೆಯ ಹಲೇಜಿ ಸಮೀಪ ರಸ್ತೆ ಅಂಚಿನಲ್ಲಿ ಕುಸಿತ ಗೊಂಡಿದ್ದ ತಡೆಗೋಡೆ ಇದೀಗ ವ್ಯವಸ್ಥಿತವಾಗಿ ನಿರ್ಮಾಣವಾಗಿ ರಸ್ತೆ ಸಂಚಾರಕ್ಕೆ ದೊರೆತಿದೆ.
ಗುರುವಾಯನಕೆರೆಯಿಂದ ಉಪ್ಪಿನಂಗಡಿ ರಸ್ತೆಯಾಗಿ 15 ಕಿ.ಮೀ. ಸಾಗಿದಾಗ ಹಲೇಜಿ ಸುಧೀರ್ ಕುಮಾರ್ ಎಂಬವರ ಜಮೀನಿನ ಅಂಚಿನಲ್ಲಿ ಕಲ್ಲಿನಿಂದ ಕಟ್ಟಿದ ಬಹಳ ಹಿಂದಿನ ತಡೆಗೋಡೆ ಸುಮಾರು 20 ಮೀಟರ್ ನಷ್ಟು ಕುಸಿದಿತ್ತು. ಬಸ್ ಸಹಿತ ಘನ ವಾಹನಗಳು ರಸ್ತೆ ಅಂಚಿಗೆ ಬಂದಲ್ಲಿ ಕಂದಕಕ್ಕೆ ಉರುಳುವ ಸಾಧ್ಯತೆ ಎದುರಾಗಿತ್ತು.
ಅನೇಕ ವಾಹನಗಳು ಈ ಸ್ಥಳದಲ್ಲಿ ಅಪಘಾತಕ್ಕೆ ಒಳಗಾಗಿದ್ದುದರಿಂದ 30 ವರ್ಷಗಳ ಹಿಂದೆ ಜಾಗದ ಮಾಲಕರು ತಡೆಗೋಡೆ ರಚಿಸಿದ್ದರು. ಕಳೆದ ಕೆಲವು ವರ್ಷಗಳ ಹಿಂದೆ ಮುಖ್ಯ ರಸ್ತೆ ನಿರ್ಮಾಣದ ಬಳಿಕ ಇಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸದೆ ಇದ್ದುದರಿಂದ ಅಪಾಯ ಎದು ರಾಗಿತ್ತು ಎಂದು ಸ್ಥಳೀಯರಾದ ಸುಧೀರ್ ಕುಮಾರ್ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ಉದಯವಾಣಿ ಸುದಿನದಲ್ಲಿ ವರದಿ ಪ್ರಕಟಿಸಲಾಗಿತ್ತು.
ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಂಕ್ರೀಟ್ ತಡೆಗೋಡೆಗೆ ಅಂದಾಜು ಪಟ್ಟಿ ಸಿದ್ಧಪಡಿಸಿದ್ದರು. ಬಳಿಕ ಟೆಂಡರ್ ಕರೆದು ಸ್ಥಳೀಯ ಗುತ್ತಿಗೆದಾರರು ಕಾಮಗಾರಿ ಪಡೆದಿದ್ದರು. 15 ಲಕ್ಷ ರೂ. ವೆಚ್ಚದಲ್ಲಿ ಸುಮಾರು 20 ಮೀಟರ್ ಉದ್ದ 15 ಅಡಿ ಎತ್ತರದ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿದೆ.
ಸಾರ್ವಜನಿಕ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ
ತಡೆಗೋಡೆ ಕುಸಿತಗೊಂಡಲ್ಲಿ ತೀರ ತಿರುವು ರಸ್ತೆಯಾಗಿದ್ದು ರಸ್ತೆ ಅಂಚಿಗೆ ವಾಹನಗಳು ಬಂದಾಗ ಅಪಘಾತ ಸಂಭವಿಸುವ ಸಾಧ್ಯತೆ ಎದುರಾಗಿತ್ತು. ಈ ಕುರಿತು ಉದಯವಾಣಿ ಪತ್ರಿಕೆ ಸಕಾಲದಲ್ಲಿ ವರದಿ ಪ್ರಕಟಿಸಿ ಸಂಬಂಧ ಪಟ್ಟ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿತ್ತು. ಅಧಿಕಾರಗಳು ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. – ಸುಧೀರ್ ಕುಮಾರ್, ಹಲೇಜಿ, ಸ್ಥಳೀಯರು.
ಕಾಂಕ್ರೀಟ್ ತಡೆಗೋಡೆ
ರಸ್ತೆ ಅಂಚು ಕುಸಿತಗೊಂಡಿರುವ ಕುರಿತು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಸುರಕ್ಷಿತ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿದೆ. – ಶಿವಪ್ರಸಾದ್, ಎಇಇ, ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು