ಹೊಯಿಗೆಗುಡ್ಡೆ ಹೊಸ ರಸ್ತೆ ಕುಸಿತ; ತಡೆಗೋಡೆಗೆ ಹಾನಿ
Team Udayavani, May 12, 2018, 12:09 PM IST
ಪಡುಪಣಂಬೂರು: ವರ್ಷದ ಹಿಂದೆಯಷ್ಟೇ ನಿರ್ಮಾಣಗೊಂಡ ಪಡುಪಣಂಬೂರು ಗ್ರಾ.ಪಂ. ವ್ಯಾಪ್ತಿಯ ಕದಿಕೆಯಿಂದ ಹೊಗೆಗುಡ್ಡೆ ರಸ್ತೆಯ ಅಂಚು ಕುಸಿತ ಕಂಡು ನದಿಗೆ ಹಾಕಲಾಗಿರುವ ತಡೆಗೋಡೆಗೂ ಹಾನಿಯಾಗಿದೆ.
ಕಳೆದ ಮೂರು ದಿನಗಳಿಂದ ಸುರಿದ ಮಳೆ ನೀರು ನೇರವಾಗಿ ರಸ್ತೆಗೆ ಅಡ್ಡವಾಗಿ ಹಾಕಲಾದ ಕೊಳವೆ ಪೈಪ್ನ ಮೂಲಕ ನದಿಗೆ ಹರಿಯದೇ ರಸ್ತೆಯ ಮೇಲೆ ಹರಿದಿರುವುದರಿಂದ ಹಾಗೂ ಕೊಳವೆ ಪೈಪ್ ಗಳಲ್ಲಿ ಹೂಳು ತುಂಬಿರುವುದರಿಂದ ಮಳೆ ನೀರು ರಸ್ತೆಯ ಅಂಚಿನ ಮಣ್ಣನ್ನು ಕೊಚ್ಚಿಕೊಂಡು ಮೇಲ್ಮುಖವಾಗಿಯೇ ನದಿಗೆ ಸೇರುತ್ತಿರುವುದರಿಂದ ರಸ್ತೆಯ ಅಂಚು ಕುಸಿತ ಕಂಡಿದೆ. ತಡೆಗೋಡೆಯಲ್ಲಿ ಬಿರುಕು ಮೂಡಿದೆ.
ಸಸಿಹಿತ್ಲು, ಪಡುಪಣಂಬೂರು ಗ್ರಾಮಕ್ಕೆ ನೇರವಾಗಿ ಕದಿಕೆ- ಹೊಗೆಗುಡ್ಡೆ ಪ್ರದೇಶದಿಂದ ಸಂಪರ್ಕದ ಏಕೈಕ ರಸ್ತೆಯನ್ನು ಸ್ಥಳೀಯರ ನಿರಂತರ ಹೋರಾಟದಿಂದ ಸುಮಾರು 2.5 ಕೋ. ರೂ. ವೆಚ್ಚದಲ್ಲಿ ಮೀನುಗಾರಿಕಾ ಇಲಾಖೆಯ ವಿಶೇಷ ನಿಧಿಯಲ್ಲಿ ಈ ರಸ್ತೆಯನ್ನು ನಿರ್ಮಿಸಲಾಗಿದೆ. ನಂದಿನಿ ನದಿಯ ಬದಿಯಲ್ಲಿಯೇ ಸಾಗುವ ಈ ರಸ್ತೆಗೆ ಅಡ್ಡಲಾಗಿ ಅಲ್ಲಲ್ಲಿ ಚರಂಡಿಯಂತೆ ಹಾಕಿರುವ ಸುಮಾರು ಐದು ಕೊಳವೆ ಪೈಪ್ ಗಳಲ್ಲಿಯೂ ನೀರು ಹರಿಯದೇ ಪಕ್ಕದ ಗದ್ದೆಯಲ್ಲಿಯೇ ತುಂಬಿದೆ. ಕೂಡಲೇ ಸ್ಪಂದಿಸಬೇಕು ಎಂದು ಸ್ಥಳೀಯರು ಇಲಾಖೆಯನ್ನು ಒತ್ತಾಯಿಸಿದ್ದಾರೆ.