ಮರದ ತುಂಬ ಬಾವಲಿಗಳು: ಸ್ಥಳೀಯರಲ್ಲಿ ‘ನಿಫಾ’ ಆತಂಕ
Team Udayavani, May 27, 2018, 4:16 PM IST
ಸವಣೂರು: ಕೇರಳದಲ್ಲಿ ಬಾವಲಿಗಳಿಂದ ನಿಫಾ ಸೋಂಕು ಹರಡುತ್ತಿರುವ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಬಾವಲಿಗಳು ವಾಸಿಸುವ ಮರಗಳ ಪಕ್ಕದ ನಿವಾಸಿಗಳಲ್ಲಿಯೂ ಆತಂಕ ಶುರುವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ನಿಫಾ ವೈರಸ್ ಬಗ್ಗೆ ನಾನಾ ರೀತಿಯ ವದಂತಿಗಳು ಹರಡುತ್ತಿವೆ. ಫಾರಂ ಕೋಳಿಗಳಿಂದಲೂ ವೈರಸ್ ಬರುತ್ತಿದೆ ಎಂಬ ವದಂತಿ ಹಬ್ಬಿಸಲಾಗುತ್ತಿದೆ. ಮಾಮೂಲಿ ಶೀತ, ಜ್ವರ ಬಂದರೂ ನಿಫಾ ಇರಬಹುದೇ ಎಂಬ ಆತಂಕಕ್ಕೆ ಒಳಗಾಗುವವರೇ ಹೆಚ್ಚು. ಕೇರಳದ ಕಲ್ಲಿಕೋಟೆಯಲ್ಲಿ ಮಾತ್ರ ನಿಫಾ ವೈರಸ್ ಪತ್ತೆಯಾಗಿದೆ. ರಾಜ್ಯದಲ್ಲಿ ಇಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದರೂ ಜನರ ಆತಂಕ ದೂರವಾಗಿಲ್ಲ. ಮಾವು, ಪೇರಳೆ ಹಣ್ಣುಗಳನ್ನು ತಿನ್ನುವವರೂ ಕಮ್ಮಿಯಾಗಿದ್ದಾರೆ. ಆಹಾರ ಪದಾರ್ಥಗಳ ಶುಚಿ-ರುಚಿಯತ್ತ ಗಮನ ನೀಡಬೇಕು. ಹಣ್ಣುಗಳನ್ನಾದರೂ ತೊಳೆದು ತಿನ್ನಬೇಕೆಂದು ವೈದ್ಯರು ಹೇಳುತ್ತಿದ್ದಾರೆ.
ಆತಂಕ ಇದೆ
ಪಾಲ್ತಾಡಿ ಗ್ರಾಮದ ಪರಣೆ ಸಮೀಪದ ಕೊಳಿ ಎಂಬಲ್ಲಿ ಜನವಸತಿ ಪ್ರದೇಶದ ನಡುವೆ ದೊಡ್ಡ ಮರದ ತುಂಬಾ ಸಾವಿರಾರು ಬಾವಲಿಗಳು ವಾಸಿಸುತ್ತಿದ್ದು, ಸ್ಥಳೀಯರು ನಿಫಾ ವೈರಸ್ ಬಗ್ಗೆ ಹೆಚ್ಚು ಭಯಗೊಂಡಿದ್ದಾರೆ. ಆರೋಗ್ಯ ಇಲಾಖೆ ಇಂತಹ ಸ್ಥಳಗಳಲ್ಲಿ ಫಾಗಿಂಗ್ ನಡೆಸುವುದು ಉತ್ತಮ ಎಂದು ಮಂಜುನಾಥನಗರ ಹಿ.ಪ್ರಾ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಜಾರಿಗೆತ್ತಡಿ ಅಭಿಪ್ರಾಯಪಟ್ಟಿದ್ದಾರೆ.