ಪಂಚಾಯತ್ ಸೌಲಭ್ಯ, ಪರಿಸರ ಮಾಹಿತಿ
Team Udayavani, Jul 4, 2017, 3:35 AM IST
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತಿಲ ‘ಎ’ ಮತ್ತು ‘ಬಿ’ ಒಕ್ಕೂಟದ ತ್ರೈಮಾಸಿಕ ಸಭೆಯು ಬಾರ್ಯ ಗ್ರಾಮಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಕರ ಶೆಟ್ಟಿ ಪರಿಸರದ ಬಗ್ಗೆ ಮಾಹಿತಿ ನೀಡಿ ನಮ್ಮ ಸುತ್ತಲಿನ ಪ್ರದೇಶದಲ್ಲಿ ಗಿಡಗಳನ್ನು ನೆಡುವುದು, ಪ್ಲಾಸ್ಟಿಕ್ ಬಳಕೆ ಆದಷ್ಟು ಕಡಿಮೆ ಮಾಡಿ ಭೂಮಿಯನ್ನು ಸೇರದಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ನೀರಿಲ್ಲದ ಬೋರ್ವೆಲ್ಗೆ ನೀರಿಂಗಿಸುವ ಕೆಲಸವನ್ನು ಮಾಡುವುದು, ನಮ್ಮ ಕೃಷಿ ಭೂಮಿಯಲ್ಲಿ ಅಲ್ಲಲ್ಲಿ ಇಂಗು ಗುಂಡಿಗಳನ್ನು ಮಾಡಬೇಕು ಎಂದು ಪರಿಸರದ ಬಗ್ಗೆ ಅನೇಕ ರೀತಿಯ ಮಾಹಿತಿ ನೀಡಿದರು.
ಪಂಚಾಯತ್ ಸೌಲಭ್ಯದ ಬಗ್ಗೆ ಬಾರ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವರಾಜೇಗೌಡ ಅವರು ಮಾತನಾಡಿ ಸರಕಾರದ ಆದೇಶದಂತೆ ನೂರು ಕೆಲಸಗಳು ಪಂಚಾಯತ್ ಮಟ್ಟದಲ್ಲಿ ಆಗುವುದರಿಂದ ಗ್ರಾಮವಾಸಿಗಳಿಗೆ ತುಂಬಾ ಪ್ರಯೋಜನವಾಗಿದೆ ಮತ್ತು ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಸವಿವರವಾದ ಮಾಹಿತಿ ನೀಡಿದರು. ಪುತ್ತಿಲ ‘ಎ’ ಒಕ್ಕೂಟದ ಅಧ್ಯಕ್ಷ ಮೋನಪ್ಪ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೇವಾ ಪ್ರತಿನಿಧಿ ಶಾಂತಾ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಶಿವರಾಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪುತ್ತಿಲ ‘ಬಿ’ ಒಕ್ಕೂಟದ ಅಧ್ಯಕ್ಷೆ ರಾಜೀವಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.