ಭೂಮಿಯ ಸನಿಹ ಬಂದ ಗುರು ಗ್ರಹ; ಮಂಗಳೂರಿನಲ್ಲಿ ವೀಕ್ಷಣೆ
Team Udayavani, May 11, 2018, 10:17 AM IST
ಮಹಾನಗರ: ಬುಧವಾರ ರಾತ್ರಿ ಭೂಮಿಯ ಸನಿಹ ಗುರು ಗ್ರಹ ಬಂದ ಅಪೂರ್ವ ಸನ್ನಿವೇಶದ ವೀಕ್ಷಣೆಯನ್ನು ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಈ ವಿದ್ಯಮಾನವು 399 ದಿನಗಳಿಗೊಮ್ಮೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಗುರುಗ್ರಹ ಪ್ರಕಾಶಮಾನವಾಗಿ ಕಂಡುಬರುತ್ತದೆ. ವಿಜ್ಞಾನ ಕೇಂದ್ರದ ದೂರದರ್ಶಕದ ಮೂಲಕ ಗುರು ಗ್ರಹ, ಅದರ ಪಟ್ಟೆಗಳು, ಕೆಂಪು ಮಚ್ಚೆ ಹಾಗೂ ಅದರ ಉಪಗ್ರಹಗಳಾದ ಅಯೋ, ಯುರೋಪಾ, ಗೆನಿಮೀಡ್ ಮತ್ತು ಕೆಲಿಸ್ಟೋಗಳನ್ನು ವೀಕ್ಷಕರಿಗೆ ತೋರಿಸಿ ಜತೆಗೆ ಇತರ ನಕ್ಷತ್ರಗಳನ್ನು ಕೂಡ ಪರಿಚಯಿಸಲಾಯಿತು.
ವಿಜ್ಞಾನ ಕೇಂದ್ರದ ಕ್ಯುರೇಟರ್ ಜಗನ್ನಾಥ ವಿದ್ಯಮಾನದ ಕುರಿತು ಮಾಹಿತಿ ನೀಡಿದರು. ಶೈಕ್ಷಣಿಕ ಸಹಾಯಕ ಶರಣಯ್ಯ ಅವರು ಬರೀಗಣ್ಣಿನಿಂದ ಆಕಾಶ ಕಾಯಗಳ ವೀಕ್ಷಣೆ ಕುರಿತು ಮಾಹಿತಿ ನೀಡಿದರು. ಹವ್ಯಾಸಿ ಖಗೋಳ ಶಾಸ್ತ್ರಜ್ಞ ನವೀನಚಂದ್ರ, ಗೌರವ ಮೊದಲಾದವರು ಉಪಸ್ಥಿತರಿದ್ದರು.