ಮಾಲಿನ್ಯದಿಂದ ಜೋಕಟ್ಟೆ ಗ್ರಾಮಸ್ಥರಿಗೆ ನಿತ್ಯ ನರಕಯಾತನೆ
Team Udayavani, Sep 2, 2021, 3:50 AM IST
ಜೋಕಟ್ಟೆ ಗ್ರಾಮದ ಸುತ್ತಮುತ್ತ ಹಲವು ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಕಂಪೆನಿಗಳ ಹೊರಸೂಸುವ ಮಾಲಿನ್ಯದಿಂದ ಸ್ಥಳೀಯರು ವ್ಯಥೆಪಡುವಂತಾಗಿದೆ. ಇದಕ್ಕೆ ಪರಿಹಾರ ಕ್ರಮ ಅಗತ್ಯ. ಗ್ರಾಮದಲ್ಲಿ ಮೂಲಸೌಲಭ್ಯಗಳನ್ನು ಒದಗಿಸುವುದು ಅಗತ್ಯವಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಸೆಳೆಯಲು ಉದಯವಾಣಿ ಸುದಿನದ “ಒಂದು ಊರು-ಹಲವು ದೂರು’ ಅಭಿಯಾನದ ಮೂಲಕ ಪ್ರಯತ್ನಿಸಲಾಗಿದೆ.
ಸುರತ್ಕಲ್: 62ನೇ ತೋಕೂರು ಗ್ರಾ.ಪಂ. ಪಾಲಿಕೆ ಗಡಿಭಾಗದಲ್ಲಿರುವ ಗ್ರಾಮವಾಗಿದೆ. ಕಂಪೆನಿಗಳ ಮಾಲಿನ್ಯವು ಇಲ್ಲಿನ ಸುತ್ತಮುತ್ತ ಇರುವ ಕುಟುಂಬದವರ ಜೀವನಕ್ಕೆ ಕುತ್ತಾಗಿ ಪರಿಣಮಿಸಿದೆ.
ಜೋಕಟ್ಟೆ ಮತ್ತು ಬಾಳ ಪಂಚಾಯತ್ನಲ್ಲಿ ವಿಶೇಷ ಆರ್ಥಿಕ ವಲಯ ಮತ್ತು ಬೃಹತ್ ಕಂಪೆನಿಗಳಿವೆ. ಈ ಕಂಪೆನಿಗಳಿಂದ ಭಾರೀ ಶಬ್ದ, ಹೊಗೆ, ಧೂಳಿನ ಕಣಗಳು ಸ್ಥಳೀಯರ ನಿತ್ಯ ಜೀವನಕ್ಕೆ ಸಮಸ್ಯೆ ತಂದೊಡ್ಡಿವೆ. ರಾಜ್ಯದ 2ನೇ ಅತೀ ದೊಡ್ಡ ಕೈಗಾರಿಕೆ ಪ್ರಾಂಗಣ ಇಲ್ಲಿದೆ.
ಇದುವರೆಗೂ ಇಲ್ಲಿ ಹಸುರು ವಲಯ ನಿರ್ಮಾಣ ವಾಗಿಲ್ಲ. ಕಂಪೆನಿಯ ಗೋಡೆಗಳಿಗೆ ತಾಗಿಗೊಂಡು ಹಲವಾರು ವಾಸದ ಮನೆಗಳಿವೆ. ಇವರ ಜೀವನ ನಿತ್ಯ ನರಕವಾಗಿದೆ. ಧೂಳಿನ ಕಣಗಳು ನೀರು, ಮಾಡುವ ಊಟಕ್ಕೂ ಸೇರಿಕೊಂಡು ಸಮಸ್ಯೆ ಎದುರಿಸುವಂತಾಗಿದೆ. ಸ್ಥಳೀಯರನ್ನು ಒಕ್ಕಲೆಬ್ಬಿಸಿ ಬೇರೆಡೆ ಸುಸಜ್ಜಿತ ಸ್ಥಳಾವಕಾಶ ನೀಡಿ ಎಂದು ಜನರ ಆಗ್ರಹವಿದ್ದರೂ ಇದುವರೆಗೂ ಅನುಷ್ಠಾನಕ್ಕೆ ಬಂದಿಲ್ಲ.
ಕುಡಿಯುವ ನೀರಿನ ಮೂಲವೂ ಮಲೀನಗೊಂಡು ಪೈಪ್ಲೈನ್ ಮೂಲಕ ನೀರಿಗೆ ಆಶ್ರಯಿಸಬೇಕಿದೆ.
ಇತರ ಸಮಸ್ಯೆಗಳೇನು? :
- ತ್ಯಾಜ್ಯ ನಿರ್ವಹಣೆಗೆ ಬೇಕಾದ ಸೌಕರ್ಯ ಇದುವರೆಗೂ ಮರೀಚಿಕೆಯಾಗಿದೆ. ರಸ್ತೆಯುದ್ದಕ್ಕೂ ತ್ಯಾಜ್ಯ ರಾಶಿ ಕಂಡು ಬರುತ್ತದೆ.
- ನೀರಿನ ಮೂಲ ಅಂತರ್ಜಲವಾಗಿದ್ದರೂ ಕಲುಷಿತಗೊಂಡು ಕುಡಿಯಲು ಬಳಕೆಯಾಗುತ್ತಿಲ್ಲ.
- ಪೈಪ್ಲೈನ್, ಟ್ಯಾಂಕರ್ ಮೂಲಕ ಪೂರೈಕೆ ಹಲವೆಡೆ ಅನಿವಾರ್ಯವಾಗಿದೆ.
- ಹಕ್ಕುಪತ್ರ ಜಾಗದಲ್ಲಿ ವಾಸಿಸುವ ಹಲವಾರು ಕುಟುಂಬಗಳು ಕಂಪೆನಿ ಸಮೀಪ ವಾಸವಿದ್ದು ಮಾಲಿನ್ಯ ಕಾರಣ ಸ್ಥಳಾಂತರವಾಗಬೇಕಿದೆ.
- ಪಂಚಾಯತ್ ನಡುವಣ ಹಾದು ಹೋಗಿರುವ ಜೋಕಟ್ಟೆ ರಸ್ತೆ ವಿಸ್ತರಣೆ ಅಗತ್ಯವಿದೆ. ಇದರಿಂದ ಬಜಪೆ ಪಟ್ಟಣ ಸಂಪರ್ಕ ಸುಗಮವಾಗಲಿದೆ.
- ಸುತ್ತಮುತ್ತಲಿನ ಕಂಪೆನಿಗಳ ನೀರು ಸಂಸ್ಕರಣೆಗೊಂಡರೂ ನದಿ ತೊರೆಗಳಿಗೆ ಚರಂಡಿ ನೀರು ಸೇರುತ್ತಿದೆ. ಇದು ಮತ್ಸ್ಯ ಸಂಪತ್ತಿಗೆ ಕಂಟಕವಾಗಿದೆ. ಸೂಕ್ತ ಸಂಸ್ಕರಣೆ ಘಟಕ ಈ ಭಾಗದಲ್ಲಿ ಅಗತ್ಯವಿದೆ.
- ಬೃಹತ್ ಕಂಪೆನಿಗಳು ಇರುವುದರಿಂದ ಅಗ್ನಿಶಾಮಕ ಘಟಕದ ಆವಶ್ಯಕತೆಯಿದೆ.
-ಲಕ್ಷ್ಮೀ ನಾರಾಯಣ ರಾವ್