ತ್ಯಾಜ್ಯ ಎಸೆಯುವವರ ಪತ್ತೆಗೆ ಸಿಸಿ ಕೆಮರಾ ಅಳವಡಿಸಲು ಸಿದ್ಧತೆ
Team Udayavani, Sep 8, 2019, 5:30 AM IST
ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯ ಗಡಿ ಪ್ರದೇಶದಲ್ಲಿ ತ್ಯಾಜ್ಯ ರಾಶಿಯ ಸಮಸ್ಯೆ ಉಲ್ಬಣಿಸು ತ್ತಿದ್ದು, ತ್ಯಾಜ್ಯ ಎಸೆಯುವ ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆ 5 ಕಡೆಗಳಲ್ಲಿ ಸಿಸಿ ಕೆಮರಾಗಳ ಅಳವಡಿಕೆಗೆ ಸಿದ್ಧತೆ ನಡೆಸಿದೆ. 15 ದಿನಗಳೊಳಗೆ ಸಿಸಿ ಕೆಮರಾಗಳು ಅಳವಡಿಕೆ ಯಾಗಲಿದ್ದು, ಸ್ಥಳಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.
ಪಾಣೆಮಂಗಳೂರು ಸೇತುವೆಯ ಬಳಿ, ಅಮಾrಡಿ, ತಲಪಾಡಿ, ಲೊರೆಟ್ಟೋ ಪ್ರದೇಶಗಳಲ್ಲಿ ತ್ಯಾಜ್ಯ ರಾಶಿ ಕಂಡುಬರುತ್ತಿದ್ದು, ಈ ಎಲ್ಲ್ಲ ಪ್ರದೇಶಗಳು ಗ್ರಾ.ಪಂ.ವ್ಯಾಪ್ತಿಗೆ ಬರುತ್ತಿವೆ ಎಂದು ಪುರಸಭಾ ಅಧಿಕಾರಿಗಳು ಹೇಳುತ್ತಾರೆ. ಅದು ತನ್ನ ಗಡಿಪ್ರದೇಶದಲ್ಲಿ ಇರುವ ಕಾರಣ ಪುರಸಭೆಯು ಈಗಾಗಲೇ ಆ ಭಾಗದ ಸಂಬಂಧಪಟ್ಟ ಗ್ರಾ.ಪಂ.ಗಳಿಗೆ ನೋಟಿಸ್ ನೀಡಿದ್ದರೂ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.
ಪುರಸಭೆಯಿಂದ ಆ ಪ್ರದೇಶದಲ್ಲಿ ತ್ಯಾಜ್ಯ ತೆರವು ಗೊಳಿಸಿದರೂ ಕಿಡಿಗೇಡಿಗಳು ಮತ್ತೆ ಮತ್ತೆ ತ್ಯಾಜ್ಯ ತಂದು ಹಾಕುತ್ತಿರುವುದಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ. ಹೀಗಾಗಿ ಕಿಡಿಗೇಡಿಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪುರಸಭೆ ಸಿಸಿ ಕೆಮರಾಗಳ ಅಳವಡಿಕೆಗೆ ಚಿಂತನೆ ನಡೆಸಿ, ಅನುದಾನ ಮೀಸಲಿಟ್ಟಿತ್ತು.
ಸ್ಥಳ ಬಹಿರಂಗವಿಲ್ಲ
ಬಂಟ್ವಾಳ ಪುರಸಭೆಯ ಅನುದಾನ ದಿಂದ ಸಿಸಿ ಕೆಮರಾ ಅಳವಡಿಕೆಯಾಗಲಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣ ಗೊಂಡಿದೆ. ಹೀಗಾಗಿ ಮುಂದಿನ 2 ವಾರ ಗಳೊಳಗೆ 5 ಕಡೆಗಳಲ್ಲಿ ಸಿಸಿ ಕೆಮರಾ ಅಳವಡಿಕೆಯಾಗಲಿದೆ.
ಆದರೆ ಅಳವಡಿಕೆ ಪ್ರದೇಶ ಗಳನ್ನು ಪುರಸಭೆ ಗೌಪ್ಯವಾಗಿರಿಸಿದೆ. ಸಿಸಿ ಕೆಮರಾ ಅಳವಡಿಕೆಯಾಗಿದೆ ಎಂದಾಗ ಕಿಡಿಗೇಡಿಗಳು ಬೇರೆ ಸ್ಥಳ ಹುಡುಕ ಬಹುದೆಂಬ ಕಾರಣಕ್ಕೆ ಸಿಸಿ ಕೆಮರಾ ಅಳವಡಿಕೆ ಸ್ಥಳ ಬಹಿರಂಗಗೊಳಿಸಿಲ್ಲ
ಪುರಸಭೆಯ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹದ ಕುರಿತು ಗೊಂದಲಗಳಿದ್ದರೆ ಪುರಸಭೆಗೆ ತಿಳಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸಮಸ್ಯೆಯಿದ್ದರೆ ಪುರಸಭೆಯ ಗಮನಕ್ಕೆ ಬಂದಾಗ ಅದನ್ನು ಸರಿಪಡಿಸಬಹುದು. ಅದರ ಬದಲು ರಸ್ತೆ ಬದಿಗೆ ತಂದು ಎಸೆದರೆ ಮತ್ತೂಂದು ಸಮಸ್ಯೆ ಉದ್ಭವಿಸುತ್ತದೆ. ಹೀಗಾಗಿ ದೂರವಾಣಿ ಮೂಲಕ ತಿಳಿಸುವಂತೆ ಪುರಸಭೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
– ಕಿರಣ್ ಸರಪಾಡಿ