ಪ್ರಧಾನಿ ಆಗಮನಕ್ಕೆ ಪೂರ್ಣಗೊಂಡ ಸಿದ್ಧತೆ
Team Udayavani, Oct 29, 2017, 6:35 AM IST
ಬೆಳ್ತಂಗಡಿ: ಧರ್ಮಸ್ಥಳಕ್ಕೆ ಅ. 29ರಂದು ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.
ಮೋದಿ ಸಾರ್ವಜನಿಕ ಸಭೆಗಾಗಿ 11.45ಕ್ಕೆ ಉಜಿರೆ ರತ್ನವರ್ಮ ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ. ಇದಕ್ಕಾಗಿ ಶನಿವಾರ ತಾಲೀಮು ನಡೆಸಲಾಯಿತು. ಧರ್ಮಸ್ಥಳದಿಂದ ಉಜಿರೆಗೆ ಬರುವ ಇಕ್ಕೆಲಗಳಲ್ಲಿ ಸ್ವಾಗತ ಫಲಕಗಳು ರಾರಾಜಿಸುತ್ತಿವೆ. 50×100 ಅಡಿ ವಿಶಾಲ ಗಾತ್ರದ ವೇದಿಕೆ ಸಜ್ಜುಗೊಂಡಿದ್ದು, ಸರ್ವರಿಗೂ ಕಾಣುವಂತೆ ಎತ್ತರದಲ್ಲಿ ಅತಿಥಿಗಳಿಗೆ ವೇದಿಕೆಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
ಮಳಿಗೆಗಳು
ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಮತ್ತು ವಿಜಯ ಬ್ಯಾಂಕಿನ ಸ್ಟಾಲುಗಳನ್ನು ರಚಿಸಿದ್ದು, ಪ್ರಧಾನ ಮಂತ್ರಿಗಳ ವೀಕ್ಷಣೆಗೆ ಸಜ್ಜುಗೊಂಡಿದೆ. ರತ್ನವರ್ಮ ಕ್ರೀಡಾಂಗಣದ ಎಲ್ಲ ಮೂಲೆ ಮೂಲೆಗಳಲ್ಲಿಯೂ ಕುರ್ಚಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಜನಾರ್ದನ ಸ್ವಾಮಿ ದೇವಸ್ಥಾನದ ಬಳಿಯಲ್ಲಿ ಸದಸ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಎಲ್ಲ ವ್ಯವಸ್ಥೆಗಳು ಪೂರ್ಣಗೊಂಡಿವೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.
ನಗದು ರಹಿತ ಯೋಜನೆಗೆ ಚಾಲನೆ
ರಾಜ್ಯದಲ್ಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ವ್ಯವಹಾರಗಳನ್ನು ಸಂಪೂರ್ಣವಾಗಿ ನಗದು ರಹಿತ ಮಾಡಿ ತಂತ್ರಾಂಶ ಆಧಾರಿತ ವ್ಯವಹಾರವನ್ನು ಪ್ರೇರೇಪಿಸುವ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಡನೆ ಒಪ್ಪಂದ ಮಾಡಿಕೊಳ್ಳುತ್ತಿದ್ದು
ಪ್ರಧಾನಮಂತ್ರಿಗಳ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಅಂಕಿತ ಬೀಳಲಿದೆ. ಇದರಿಂದಾಗಿ ರಾಜ್ಯದಲ್ಲಿ ಪ್ರಧಾನ ಮಂತ್ರಿಗಳ ಕನಸಿನಂತೆ ದುರ್ಬಲ ವರ್ಗದವರ ಎಲ್ಲ ವ್ಯವಹಾರಗಳು ಪರಿಣಾಮಕಾರಿಯಾಗಿ ಬ್ಯಾಂಕುಗಳ ಮುಖೇನ ಆಗುವುದೆಂದು ನಿರೀಕ್ಷಿಸಲಾಗಿದೆ.
ಜತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ಬ್ಯಾಂಕ್ಗಳ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯದ 12 ಲಕ್ಷ ಜನ ಸ್ವಸಹಾಯ ಸಂಘಗಳ ಸದಸ್ಯರಿಗೆ ಪ್ರಧಾನಮಂತ್ರಿ ಜನಧನ ಯೋಜನೆಯನ್ವಯ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು ಈ ಸದಸ್ಯರಿಗೆ ರೂಪೇ ಕಾರ್ಡ್ಗಳನ್ನು ಪ್ರಧಾನಮಂತ್ರಿ ವಿತರಿಸಲಿದ್ದಾರೆ. ಡಾ| ಹೆಗ್ಗಡೆ ಅವರ ನೂತನ ಸಂಕಲ್ಪ ಭೂಮಿತಾಯಿಯನ್ನು ರಕ್ಷಿಸಿ ಮತ್ತು ಮುಂದಿನ ಪೀಳಿಗೆಗೆ ವರ್ಗಾಯಿಸಿ ಅಭಿಯಾನವನ್ನು ಪ್ರಧಾನ ಮಂತ್ರಿಗಳು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, ಅಂಕಿ ಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಸದಾನಂದ ಗೌಡ, ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲು, ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಉಪಸ್ಥಿತರಿರುವರು.
ಐದನೇ ಭೇಟಿ
ವೀರೇಂದ್ರ ಹೆಗ್ಗಡೆ ಅವರಿಗೆ ಮೋದಿ ಅವರ ಜತೆಗೆ ಇದು ಐದನೇ ಭೇಟಿ. ಪದ್ಮವಿಭೂಷಣ ಸ್ವೀಕಾರ ಸಂದರ್ಭ, ದಿಲ್ಲಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಬೆಂಗಳೂರಿನಲ್ಲಿ ಯೋಗ ಕಾರ್ಯಕ್ರಮ, ಖುದ್ದು ಪ್ರಧಾನಿ ಕಾರ್ಯಾಲಯದಲ್ಲಿ ತುಳುಭಾಷೆಗೆ ಮಾನ್ಯತೆ ಹಾಗೂ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಒತ್ತಾಯಿಸಿ ಭೇಟಿ ಮಾಡಿದ್ದರು.
ಭದ್ರತೆಗೆ ನಿಯೋಜಿತರಾದ ಪೊಲೀಸರು
ಕಾರ್ಯಕ್ರಮದ ಭದ್ರತೆಗೆ ನಿಯೋಜಿತರಾದ ಪೊಲೀಸರ ಪಟ್ಟಿ ಇಂತಿದೆ.
9 ಜನ ಎಸ್ಪಿಗಳು, 22 ಡಿವೈಎಸ್ಪಿಗಳು, 43 ಸರ್ಕಲ್ ಇನ್ಸ್ಪೆಕ್ಟರ್ಗಳು, 116 ಎಸ್ಐಗಳು, 78 ಎಎಸ್ಐಗಳು, 1,600 ಹೆಡ್ ಕಾನ್ಸ್ಟೆಬಲ್ ಹಾಗೂ ಸಿಬಂದಿ, 145 ಮಹಿಳಾ ಸಿಬಂದಿ, 110 ಹೋಮ್ ಗಾರ್ಡ್ಗಳು, 8 ಪ್ಲಟೂನ್ ಕೆಎಸ್ಆರ್ಪಿ, 3 ಜಿಲ್ಲಾ ಮೀಸಲು ಪಡೆ, 3 ಆ್ಯಂಬುಲೆನ್ಸ್, 5 ಅಗ್ನಿಶಾಮಕ ದಳ ವಾಹನ, 8 ನಕ್ಸಲ್ ನಿಗ್ರಹ ಪಡೆ, 5 ಬಾಂಬ್ ನಿಷ್ಕ್ರಿಯ ದಳ ನಿಯೋಜಿತವಾಗಿವೆ.
ವಿನಾಯಿತಿ
ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನದ ವರೆಗೆ ಉಜಿರೆ – ಧರ್ಮಸ್ಥಳ ನಡುವೆ ವಾಹನ ಸಂಚಾರಕ್ಕೆ ನಿರ್ಬಂಧ ಇದೆ. ಆದರೆ ಅನಿವಾರ್ಯವಿದ್ದಲ್ಲಿ ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ ಎಂದು ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಪರಿಶೀಲನೆ
ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ತಯಾರಿಯ ಅಂತಿಮ ಹಂತಗಳನ್ನು ಉಜಿರೆ ಹಾಗೂ ಧರ್ಮಸ್ಥಳದಲ್ಲಿ ಶನಿವಾರ ಪರಿಶೀಲಿಸಿದರು. ಡಿ. ಸುರೇಂದ್ರ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಕ್ಯಾ| ಗಣೇಶ್ ಕಾರ್ಣಿಕ್, ಬಿಜೆಪಿ ಉಸ್ತುವಾರಿ ಉದಯ್ ಕುಮಾರ್, ಪ್ರತಾಪಸಿಂಹ ನಾಯಕ್, ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಜಿ. ಗೌಡ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ, ಡಾ| ಬಿ. ಯಶೋವರ್ಮ ಮೊದಲಾದವರಿದ್ದರು.
40 ಲಕ್ಷ ಜನಧನ ಖಾತೆ: ಡಾ| ಹೆಗ್ಗಡೆ
ಬ್ಯಾಂಕ್ ಹಾಗೂ ಜನರ ಔದಾಸೀನ್ಯದಿಂದಾಗಿ ಜನಧನ ಖಾತೆ ಸಮರ್ಪಕವಾಗಿ ಜನರಿಗೆ ಒದಗಿರಲಿಲ್ಲ. ಗ್ರಾಮಾಭಿವೃದ್ಧಿ ಯೋಜನೆ ಈ ನಿಟ್ಟಿನಲ್ಲಿ 12 ಲಕ್ಷ ಜನಧನ ಖಾತೆ ತೆರೆಯಲು ಸಹಕಾರ ಮಾಡಿದೆ. ಇನ್ನೂ 40 ಲಕ್ಷ ಖಾತೆ ತೆರೆಯಲು ಸಹಕರಿಸುವ ಕುರಿತು ರವಿವಾರ ಘೋಷಿಸಲಿದ್ದೇನೆ. ತಂತ್ರಜ್ಞಾನ ಮೂಲಕ ಸ್ವ ಸಹಾಯ ಸಂಘದ ಸದಸ್ಯರು ನೇರವಾಗಿ ಬ್ಯಾಂಕಿನ ಖಾತೆ ನಿರ್ವಹಿಸುವ ಡಿಜಿಟಲ್ ಇಂಡಿಯಾದ ಕಲ್ಪನೆಯ ಆಕಾರ ರೂಪವೂ ಈ ದಿನ ಅನಾವರಣ ವಾಗಲಿದೆ ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಉದಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ