ಹರಿದಾಸ ಪರಂಪರೆಯಿಂದ ಸಂಸ್ಕೃತಿಯ ಸಂರಕ್ಷಣೆ: ಡಾ| ಡಿ. ವೀರೇಂದ್ರ ಹೆಗ್ಗಡೆ
Team Udayavani, Jun 5, 2019, 6:00 AM IST
ಬೆಳ್ತಂಗಡಿ: ಹರಿದಾಸ ಪರಂಪರೆಯು ಅಪಾರ ಜ್ಞಾನದ ಆಗರವಾಗಿದ್ದು, ಸಾರ್ಥಕ ಬದುಕಿಗೆ ಮಾರ್ಗದರ್ಶಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳ ವಸಂತಮಹಲ್ನಲ್ಲಿ ರವಿವಾರ ಕಾಸರಗೋಡಿನ ಹರಿದಾಸ ಜಯಾನಂದ ಕುಮಾರರ ಅರುವತ್ತು ಕ್ಷೇತ್ರಗಳಲ್ಲಿ ಹರಿಕಥಾ ಕೀರ್ತನೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಬಹುಭಾಷಾ ಪರಿಣತರಾದ ಜಯಾನಂದ ಕುಮಾರರ ಸೇವೆ-ಸಾಧ ನೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಹರಿಕೀರ್ತನೆಯೊಂದಿಗೆ ಭಜನ ಸಂಸ್ಕೃತಿಯನ್ನೂ ಅವರು ಜನಪ್ರಿಯ ಗೊಳಿಸುತ್ತಿರುವುದು ಸ್ತುತ್ಯರ್ಹ ವಾಗಿದೆ ಎಂದು ಅವರು ಹೇಳಿದರು.
ಉತ್ತಮ ಸಂಸ್ಕಾರ
ಒಡಿಯೂರು ಗುರುದೇವಾನಂದ ಸ್ವಾಮೀಜಿ ಆಶೀರ್ವಚಿಸಿ, ಭಜನೆಗೆ ಹೊಸ ಆಯಾಮ ನೀಡಿದ ಕೀರ್ತಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ. ಭಜನೆ ಸಾರ್ಥಕ ಬದುಕಿಗೆ ಪ್ರೇರಕವಾಗಿದೆ. ಇಹ-ಪರ ಹಾಗೂ ಜೀವ-ದೇವನ ನಡುವೆ ಸಂಪರ್ಕ ಕೊಂಡಿ ಭಜನೆ ಆಗಿದ್ದು, ಭಜನೆಯಿಂದ ಉತ್ತಮ ಸಂಸ್ಕಾರ ಮೂಡಿ ಬರುತ್ತದೆ ಎಂದು ಅಭಿಪ್ರಾಯಪಟ್ಟರು. ಮಾಣಿಲದ ಮೋಹನದಾಸ ಸ್ವಾಮೀಜಿ ಅವರು, ಭಾವನೆ ಮತ್ತು ಭಾವುಕತೆ ಮಾಯವಾಗುತ್ತಿರುವ ಇಂದಿನ ಕಾಲದಲ್ಲಿ ದಾಸ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಬದಿಯಡ್ಕದ ಬಿ. ವಸಂತ ಪೈ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಎಂ.ಬಿ. ಪುರಾಣಿಕ್, ಕನ್ನಡ ಸಾಹಿತ್ಯ ಪರಿಷತ್ ಘಟಕದ ಜಿಲ್ಲಾಧ್ಯಕ್ಷ ಕೆ. ಪ್ರದೀಪ್ ಕುಮಾರ್ ಕಲ್ಕೂರ, ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮಹಾಬಲ ಶೆಟ್ಟಿ ಶುಭಾಶಂಸನೆ ಮಾಡಿದರು. ರವಿ ಕಾಸರಗೋಡು ಸ್ವಾಗತಿಸಿದರು. ಮೀರಾ ಆಳ್ವ ನಿರೂಪಿಸಿ, ವಂದಿಸಿದರು.
ಜ್ಞಾನ ಸುಧೆಯ ಹರಿವು
ಹರಿದಾಸ ಪರಂಪರೆಯಲ್ಲಿ ಜ್ಞಾನ ಸುಧೆಯ ಹರಿವಿದೆ. ಎಲ್ಲ ಧರ್ಮ, ಶಾಸ್ತ್ರ, ಪುರಾಣಗಳ ಸಾರವಿದೆ. ಧರ್ಮ, ಸಂಸ್ಕೃತಿ ರಕ್ಷಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಕಳೆದ ಐವತ್ತು ವರ್ಷಗಳಲ್ಲಿ ಹರಿಕಥಾ ಕೀರ್ತನೆ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಆದುದರಿಂದ ಅದಕ್ಕೆ ಕಾಯಕಲ್ಪ ನೀಡಿ ಪರಂಪರೆಯನ್ನು ಮುಂದುವರಿಸಬೇಕು ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸಲಹೆ ನೀಡಿದರು.
ಅಭಿಯಾನ
ಯುವ ಜನತೆಗೆ ಹರಿದಾಸ ಸಾಹಿತ್ಯದ ಸಾರ ತಿಳಿಸಬೇಕು. ಬೆಳ್ತಂಗಡಿ ತಾಲೂಕಿನಲ್ಲಿ ಹರಿಕಥಾ ಕೀರ್ತನೆಯ ಅಭಿಯಾನ ಆಯೋಜಿಸಲಾಗುವುದು.
- ಹರೀಶ್ ಪೂಂಜ, ಶಾಸಕರು