ಸುಳ್ಯ; ವಿಚಾರಣಾಧೀನ ಖೈದಿ ಪರಾರಿ
Team Udayavani, Sep 14, 2018, 4:16 PM IST
ಸುಳ್ಯ: ನ್ಯಾಯಾಲಯಕ್ಕೆ ಹಾಜರಾಗಿ ಮರಳುತ್ತಿದ್ದ ವಿಚಾರಣಾಧೀನ ಖೈದಿಯೋರ್ವ ಪರಾರಿಯಾದ ಘಟನೆ ಶುಕ್ರವಾರ ಸುಳ್ಯ ಬಸ್ ನಿಲ್ದಾಣದಲ್ಲಿ ನಡೆದಿದೆ.
ಪರಾರಿಯಾದ ಖೈದಿಯನ್ನು ಅಜೀಜ್ ಬಿನ್ ಮಹಮ್ಮದ್ (25 ವರ್ಷ) ಎಂದು ಗುರುತಿಸಲಾಗಿದೆ. ಈತ ಇತ್ತೀಚಿಗೆ ಕೇರಳದ ಕಾಸರಗೋಡಿನಲ್ಲಿ ನಡೆದ ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದು, ಹೊಸದುರ್ಗ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾನೆ.
ಶುಕ್ರವಾರ ಹಳೆಯ ಕಳವು ಪ್ರಕರಣವೊಂದರ ವಿಚಾರಣೆಗಾಗಿ ಅಜೀಜ್ ನನ್ನು ಕೇರಳದ ಇಬ್ಬರು ಪೊಲೀಸರು ಸುಳ್ಯ ಜೆಎಮ್ ಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆಯ ನಂತರ ವಾಪಾಸ್ ಕರೆದುಕೊಂಡು ಹೋಗುವ ಸಂದರ್ಭ ಸುಳ್ಯ ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ಆರೋಪಿಯು ಮೂತ್ರ ವಿಸರ್ಜನೆಯ ನೆಪವೊಡ್ಡಿ ಶೌಚಾಲಯಕ್ಕೆ ಹೋದಾಗ ಅಲ್ಲಿ ಪೊಲೀಸ್ ಸಿಬ್ಬಂದಿಯನ್ನು ದೂಡಿ ಪರಾರಿಯಾಗಿದ್ದಾನೆ.