ಹಬ್ಬದ ನೆಪ: ಖಾಸಗಿ ಬಸ್ ಪ್ರಯಾಣ ದರ ದುಪ್ಪಟ್ಟು !
Team Udayavani, Nov 11, 2020, 2:00 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಕೊರೊನಾದಿಂದಾಗಿ ಜನಸಾಮಾನ್ಯರು ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಈ ಸಮಯದಲ್ಲಿಯೂ ಕೆಲವು ಖಾಸಗಿ ಬಸ್ನವರು ಹಳೆ ಪ್ರವೃತ್ತಿ ಮುಂದುವರಿಸಿದ್ದು, ದೀಪಾವಳಿ ಹಬ್ಬದ ನೆಪದಲ್ಲಿ ಪ್ರಯಾಣ ದರವನ್ನು ದುಪ್ಪಟ್ಟು ಮಾಡಿದ್ದಾರೆ.
ನ. 14, 15 ಮತ್ತು 16ರಂದು ಸರಣಿ ರಜೆಯ ಹಿನ್ನೆಲೆಯಲ್ಲಿ ದೂರದ ಊರಿನಲ್ಲಿರುವ ಮಂದಿ ನ. 13ರಂದು ತಮ್ಮ ಊರಿಗೆ ಮರಳುತ್ತಾರೆ. ಖಾಸಗಿ ಬಸ್ನವರು ಅದನ್ನೇ ಅವಕಾಶವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಹಬ್ಬಕ್ಕೆಂದು ದೂರದ ಊರಿನಿಂದ ಕರಾವಳಿಗೆ ಆಗಮಿಸುತ್ತಿರುವ ಮಂದಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೊರೊನಾ ಕಾರಣ ಬಸ್ ಮಾಲಕರು ಸಂಕಷ್ಟ ಅನುಭವಿಸಿರುವುದು ಹೌದು; ಇದೇ ವೇಳೆ ಸಾರ್ವಜನಿಕರು ಕೂಡ ಸಂಕಷ್ಟದಲ್ಲಿದ್ದಾರೆ. ಸಮತೋಲನದಿಂದ ದರ ಏರಿಸ ಬೇಕೇ ವಿನಾ ದುಪ್ಪಟ್ಟು ಮಾಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ವಿಮಾನದಲ್ಲೇ ಹೋಗಬಹುದು!
ಬೆಂಗಳೂರಿನಲ್ಲಿರುವ ಕರಾವಳಿಯ ಆಶೀಷ್ ಪ್ರಕಾರ, “ಕೊರೊನಾ ಕಾರಣ ಕೆಲವು ತಿಂಗಳಿನಿಂದ ಊರಿಗೆ ಆಗಮಿಸಿಲ್ಲ. ದೀಪಾವಳಿಗೆ ಬರುವ ತಯಾರಿಯಲ್ಲಿದ್ದೇನೆ. ಆದರೆ ಖಾಸಗಿ ಬಸ್ಗಳಲ್ಲಿ ಟಿಕೆಟ್ ದರವನ್ನು ಏಕಾಏಕಿ ಏರಿಸಲಾಗಿದೆ. ಕೆಲವು ಬಸ್ಗಳಲ್ಲಿ ಮಂಗಳೂರಿಗೆ 2,000 ರೂ. ಇದೆ. 1 ಸಾವಿರ ರೂ. ಹೆಚ್ಚು ನೀಡಿದರೆ ವಿಮಾನದಲ್ಲಿಯೇ ಹೋಗಬಹುದು’ ಎನ್ನುತ್ತಾರೆ.