ಬಳಕೆದಾರರ ಬೇಡಿಕೆಗೆ ಮಣಿದ ಮೆಸ್ಕಾಂ
Team Udayavani, May 4, 2018, 11:59 AM IST
ಬೆಳ್ಳಾರೆ: ಬೆಳ್ಳಾರೆಗೆ ಪ್ರತ್ಯೇಕ ಫೀಡರ್ ಅಳವಡಿಸಿ, ಭೂಗತ (ಅಂಡರ್ ಗ್ರೌಂಡ್) ಕೇಬಲ್ ಮೂಲಕ ವಿದ್ಯುತ್ ಪೂರೈಕೆ ಮಾಡುವಾಗ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳುವುದಾಗಿ ಮೆಸ್ಕಾಂ ಅಧಿಕಾರಿ ಗಳು ಬೆಳ್ಳಾರೆಯ ವರ್ತಕ ಸಂಘ ಹಾಗೂ ಬಳಕೆದಾರರಿಗೆ ಭರವಸೆ ನೀಡಿದ್ದಾರೆ. ವರ್ತಕರು, ಬಳಕೆದಾರರೊಂದಿಗೆ ಸ್ಥಳೀಯ ಗ್ರಾಮ ಪಂಚಾಯತ್
ಸಭಾಭವನದದಲ್ಲಿ ನಡೆದ ಮುಖಾಮುಖಿ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಈ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ಬೆಳ್ಳಾರೆಯ ಮುಖ್ಯ ರಸ್ತೆಯ ಬದಿಯಲ್ಲಿ ಚರಂಡಿಯನ್ನು ತೋಡಿ ಭೂಗತ ಕೇಬಲ್ ಮುಖಾಂತರ 33 ಕೆ.ವಿ. ವಿದ್ಯುತ್ ಸರಬರಾಜು ಮಾಡುವುದಕ್ಕಾಗಿ ಚರಂಡಿ ತೋಡುವ ಕಾಮಗಾರಿಯನ್ನು ಮೆಸ್ಕಾಂ ಪ್ರಾರಂಭಿಸಿತ್ತು. ಯಾವ ಕಾಮಗಾರಿಗೆ ಚರಂಡಿ ತೋಡುತ್ತಿದ್ದಾರೆ ಎಂಬುದೇ ವರ್ತಕ ಸಂಘ ಹಾಗೂ ಬಳಕೆದಾರರಿಗೆ ಮೊದಲಿಗೆ ತಿಳಿಯಲಿಲ್ಲ. ಬಳಿಕ, ಇದು ಮೆಸ್ಕಾಂ ಕಾಮಗಾರಿಯಾಗಿದ್ದು, ಭೂಗತ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ ನೀಡಲು ಸಿದ್ಧತೆ ಎಂದು ತಿಳಿದು ಬಂತು.
ಸ್ಥಗಿತಗೊಳಿಸಿದ್ದರು
ಎಚ್ಚೆತ್ತುಕೊಂಡ ವರ್ತಕ ಸಂಘ ಹಾಗೂ ಬಳಕೆದಾರರು, ನೆಲದ ಅಡಿಯಲ್ಲಿ ಕೇಬಲ್ ಅಳವಡಿಸಿ ವಿದ್ಯುತ್ ಸರಬರಾಜು ಮಾಡುವುದು ತುಂಬಾ ಅಪಾಯಕಾರಿ. ಬೆಳ್ಳಾರೆ ಪೇಟೆಯವರಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿದ್ದು, ಬೆಳ್ಳಾರೆ ಪೇಟೆಗೆ ಪ್ರತ್ಯೇಕ ಸಿಟಿ ಫೀಡರ್ ನಿರ್ಮಾಣ ಮಾಡಿಕೊಡುತ್ತೇವೆ ಎಂದು ಮೆಸ್ಕಾಂ ಈ ಹಿಂದೆ ನೀಡಿರುವ ಭರವಸೆಯನ್ನು ಈಡೇರಿಸಬೇಕು. ಅಲ್ಲಿಯ ತನಕ ಕಾಮಗಾರಿ ಮುಂದುವರಿಸಲು ಬಿಡಬಾರದು. ಮುಂದುವರಿಸಿದರೆ ಉಗ್ರವಾಗಿ ಪ್ರತಿಭಟಿಸಲಾಗುವುದು ಎಂದು ಬಳಕೆದಾರರು ಜಿಲ್ಲಾಧಿಕಾರಿಗೆ ಹಾಗೂ ಸ್ಥಳೀಯ ಗ್ರಾ.ಪಂ.ಗೆ ದೂರು ನೀಡಿದ್ದರು.
ಈ ಸಮಸ್ಯೆಯ ಬಗ್ಗೆ ಉದಯವಾಣಿಯ ‘ಸುದಿನ’ದಲ್ಲಿ ವಿವರವಾದ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ತಾ.ಪಂ. ಇಒ ಮಧು ಕುಮಾರ್ ಸ್ಥಳಕ್ಕೆ ಬಂದು, ಕಾಮಗಾರಿ ನಿಲ್ಲಿಸಿದ್ದರು. ಬಳಿಕ ವರ್ತಕರ ಸಂಘ ಮತ್ತು ಬಳಕೆದಾರರೊಂದಿಗೆ ಮಾತುಕತೆ ನಡೆಸುವುದಾಗಿ ಮೆಸ್ಕಾಂ ಹೇಳಿತ್ತು.
ಸಭೆಯಲ್ಲಿ ಬಳಕೆದಾರರ ವೇದಿಕೆ ಸಂಚಾಲಕ ಜಯಪ್ರಸಾದ್ ಜೋಶಿ, ಗ್ರಾ.ಪಂ. ಪಿಡಿಒ ಸುನಂದಾ ರೈ, ಸಂಘದ ಕಾರ್ಯದರ್ಶಿ ವಿನಯಕುಮಾರ್, ಗುತ್ತಿಗಾರಿನ ಮೆಸ್ಕಾಂ ಎಂಜಿನಿಯರ್ ಬೋರಯ್ಯ, ಬೆಳ್ಳಾರೆ ಎಂಜಿನಿಯರ್
ಸತ್ಯನಾರಾಯಣ, ಸುಳ್ಯದ ಎಂಜಿನಿಯರ್ ಪ್ರಸಾದ್ ಕೆ.ವಿ., ಬಳಕೆದಾರು ಉಪಸ್ಥಿತರಿದ್ದರು. ವರ್ತಕ ಸಂಘದ ಗೌರವಾಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿ ಪ್ರಸ್ತಾವಿಸಿ, ಸ್ವಾಗತಿಸಿದರು.
ಪ್ರತ್ಯೇಕ ಫೀಡರ್
ಸಭೆಯಲ್ಲಿ ವರ್ತಕರು ತಮ್ಮ ಬೇಡಿಕೆ ಈಡೇರಿಸುವುದಾಗಿ ಲಿಖಿತವಾಗಿ ಬರೆದು ಕೊಡಬೇಕೆಂದು ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು. ವರ್ತಕರು, ಬಳಕೆದಾರರೊಂದಿಗೆ ಚರ್ಚಿಸಿದ ಮೆಸ್ಕಾಂ, ಭೂಗತ
ಕೇಬಲ್ ಅಳವಡಿಸಿ ವಿದ್ಯುತ್ ಪೂರೈಕೆಗೆ ಸುರಕ್ಷತಾ ಕ್ರಮ ಕೈಗೊಳ್ಳುವುದಾಗಿ ಮತ್ತು ಬೆಳ್ಳಾರೆಗೆ ಪ್ರತ್ಯೇಕ ಸಿಟಿ ಫೀಡರ್ ಅನ್ನು ಮೇ 31ರೊಳಗೆ ಸ್ಥಾಪಿಸುವುದಾಗಿ ಮೆಸ್ಕಾಂ ಎಂಜಿನಿಯರ್ ಹರೀಶ್ ಲಿಖಿತ ಭರವಸೆ ನೀಡಿದರು.