ಏರಿಕೆಯಾದ ವೇತನ ನೀಡಲು ಒತ್ತಾಯ
Team Udayavani, Jun 3, 2018, 10:23 AM IST
ಮೂಡಬಿದಿರೆ: ಬೀಡಿ ಕಾರ್ಮಿಕರಿಗೆ ಏರಿಕೆಯಾದ ವೇತನ ನೀಡಲು ಒತ್ತಾಯಿಸಿ ಸಿಐಟಿಯು ಮೂಡಬಿದಿರೆ ವಲಯದ ಆಶ್ರಯದಲ್ಲಿ ಶನಿವಾರ ಸೌತ್ ಕೆನರಾ ಹೋಮ್ ಇಂಡಸ್ಟ್ರೀಸ್ ಡಿಪೋ ಎದುರು ಬೀಡಿ ಕಾರ್ಮಿಕರು ಶನಿವಾರ ಪ್ರತಿಭಟನೆ ನಡೆಸಿದರು. ಜಿಲ್ಲಾ ಬೀಡಿ ಫೆಡರೇಶನ್ ಉಪಾಧ್ಯಕ್ಷೆ ಸಿಐಟಿಯು ಮೂಡಬಿದಿರೆ ವಲಯಾಧ್ಯಕ್ಷ ರಮಣಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದರು.
ಸಿಐಟಿಯು. ಸಂಘಟನೆಯು ಕಳೆದ ವರ್ಷ ನಡೆಸಿದ ತೀವ್ರ ಹೋರಾಟದ ಪರಿಣಾಮವಾಗಿ ರಾಜ್ಯ ಸರಕಾರವು ಬೀಡಿ ಕಾರ್ಮಿಕರಿಗೆ ಸಾವಿರ ಬೀಡಿಗೆ 210 ರೂ. ಕನಿಷ್ಠ ಕೂಲಿ, ಪ್ರತಿ ಪಾಯಿಂಟಿಗೆ 0.04 ಪೈಸೆಯಂತೆ 10.52 ಪೈಸೆ ತುಟ್ಟಿ ಭತ್ತೆ ಏರಿಕೆ ಮಾಡಿದೆ. ಬೀಡಿ ಮಾಲಕರು 2018ರ ಎಪ್ರಿಲ್ 1ರಿಂದ ಇದನ್ನು ಒದಗಿಸಬೇಕಾಗಿತ್ತು. ಅಲ್ಲದೇ 2015ರಿಂದ ಪಾವತಿಸಬೇಕಾದ ತುಟ್ಟಿ ಭತ್ತೆಯನ್ನು ಕೂಡ ಸರಕಾರ ಒದಗಿಸಿಲ್ಲ. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಬೀಡಿ ಕಾರ್ಮಿಕರು ಸಂಕಷ್ಟಕ್ಕೆ ಬಿದ್ದಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಬೀಡಿ ಫೆಡರೇಶನ್ ಉಪಾಧ್ಯಕ್ಷ ಸದಾಶಿವ ದಾಸ್, ಮೂಡಬಿದಿರೆ ವಲಯ ಕಟ್ಟಡ ಕಾರ್ಮಿಕರ ಸಂಘದ ಕಾರ್ಯದರ್ಶಿ ಶಂಕರ್, ಸಿಐಟಿಯು ಮುಖಂಡರಾದ ರಾಧಾ, ಗಿರಿಜಾ, ಲಕ್ಷ್ಮೀ, ಬೇಬಿ ಉಪಸ್ಥಿತರಿದ್ದರು. ಪ್ರತಿಭಟನೆಗೂ ಮೊದಲು ಹಳೆ ಪೊಲೀಸ್ ಠಾಣೆ ಬಳಿಯಿರುವ ಸಿಐಟಿಯು ಕಚೇರಿಯಿಂದ ಪ್ರತಿಭಟನಾ ಸ್ಥಳದವರೆಗೆ ಕಾರ್ಮಿಕರ ಜಾಥಾ ನಡೆಯಿತು.
ಮಾತಿಗೆ ತಪ್ಪಿದರೆ ತೀವ್ರ ಹೋರಾಟ
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿ, ಎಲ್ಲ ಏರಿಕೆಯಾದ ವೇತನವನ್ನು ನೀಡಲು ಹದಿನೈದು ದಿನಗಳ ಒಳಗಾಗಿ ನೀಡುವುದಾಗಿ ಜಿಲ್ಲಾ ಬೀಡಿ ಕಂಪೆನಿಗಳ ಮಾಲಕರು ಜೂ.1 ಮತ್ತು 2 ರಂದು ನಡೆದ ಪ್ರತಿಭಟನೆಯಲ್ಲಿ ಭರವಸೆ ನೀಡಿದ್ದಾರೆ. ಮುಂದೆ ಈ ಮಾತನ್ನು ತಪ್ಪಸಿದರೆ ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.