ಮನಪಾ ಮುಂಭಾಗ ಬೀದಿ ಬದಿ ವ್ಯಾಪಾರಸ್ಥರಿಂದ ಪ್ರತಿಭಟನೆ
Team Udayavani, Aug 18, 2017, 7:45 AM IST
ಮಹಾನಗರ: ಬೀದಿಬದಿ ವ್ಯಾಪಾರಸ್ಥರ ಮೇಲೆ ನಿರಂತರವಾಗಿ ಮಹಾನಗರಪಾಲಿಕೆ ದಾಳಿ ನಡೆಸಿ, ತೆರವು ಮಾಡುವುದನ್ನು ಖಂಡಿಸಿ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಪಾಲಿಕೆ ಕಚೇರಿ ಮುಂಭಾಗ ಸಿಐಟಿಯು ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.
ಸಿಐಟಿಯು ಮುಖಂಡ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಮಹಾನಗರ ಪಾಲಿಕೆ ನಿರಂತರವಾಗಿ ಬೀದಿಬದಿ ವ್ಯಾಪಾರಸ್ಥರ ಮೇಲೆ ದಾಳಿ ಯನ್ನು ನಡೆಸುತ್ತಿದ್ದು, ಇದರಿಂದ ಬಡ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ನಡೆಸುತ್ತಿರುವ ಮಾಹಿತಿ ತಿಳಿದು, ಮನಪಾ ಆಯುಕ್ತ ಮಹಮ್ಮದ್ ನಝೀರ್ ಮಾತುಕತೆ ನಡೆಸಿ, ಬೀದಿಬದಿ ವ್ಯಾಪಾರಿಗಳಿಗೆ ಮೀಸಲಿಟ್ಟ ಜಾಗದಲ್ಲಿ ವಾರದೊಳಗೆ ಕ್ರಮ ಸಂಖ್ಯೆ ಅಳವಡಿಸಲಾಗುವುದು. ವ್ಯಾಪಾರಿಗಳು ಬೀದಿಬದಿಯಲ್ಲಿ ಮಾರಾಟ ಮಾಡದೆ, ಮೀಸಲಿಟ್ಟ ಜಾಗವನ್ನೇ ಉಪಯೋಗಿಸಬೇಕು ಎಂದು ಸೂಚಿಸಿದರು.
350 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಒದಗಿಸಲು ಬಾಕಿ ಇದೆ. 150 ಗುರುತಿನ ಚೀಟಿ ಸಿದ್ಧವಾಗಿದೆ. ಉಳಿದ ಕಾರ್ಡ್ಗಳನ್ನು ಮೂರನೇ ಹಂತದಲ್ಲಿ ನೀಡಲಾಗುವುದು ಎಂದು ಆಯುಕ್ತರು ತಿಳಿಸಿರುವುದಾಗಿ ಸುನೀಲ್ ಕುಮಾರ್ ಬಜಾಲ್ ತಿಳಿಸಿದರು.