ಬಂಟ್ವಾಳ: ಅಸಹಾಯಕ ವೃದ್ಧನಿಗೆ ಸಾರ್ವಜನಿಕರ ನೆರವು
Team Udayavani, Aug 4, 2018, 11:54 AM IST
ಬಂಟ್ವಾಳ: ಬಿ.ಸಿ. ರೋಡ್ ಸರ್ವಿಸ್ ರಸ್ತೆಯ ಕಾಂಕ್ರೀಟ್ ಸ್ಲಾಬ್ ನಲ್ಲಿ ಅನಾಥವಾಗಿ ಬಿದ್ದುಕೊಂಡಿದ್ದ ವ್ಯಕ್ತಿಯೊಬ್ಬರನ್ನು ಸಾಮಾಜಿಕ ಸೇವಾಕರ್ತ, ಗ್ರಾ.ಪಂ. ಸದಸ್ಯ ನಾರಾಯಣ ಪೂಜಾರಿ ಸಾಲೆತ್ತೂರು ಮತ್ತು ಟ್ರಾಫಿಕ್ ಸಹಾಯಕ ರಹಿಮಾನ್ ಪಾಟೀಲ್, ಸಂಚಾರ ಠಾಣಾ ಸಿಬಂದಿ ಒಬ್ಬರು ಉಪಚರಿಸಿ ವಿಳಾಸ ತಿಳಿದು ಅವರನ್ನು ಬಳಿಕ ಮನೆಗೆ ಮುಟ್ಟಿಸಿದ ಘಟನೆ ನಡೆದಿದೆ.
ಮೂಲತಃ ಮೇರಮಜಲು ಗ್ರಾಮದ ಅಬ್ಬೆಟ್ಟು ನಿವಾಸಿಯಾಗಿದ್ದ ಶೀನ ಯಾನೆ ಕೃಷ್ಣಪ್ಪ ಪೂಜಾರಿ (80) ಅವರು ಮನೆ ಬಿಟ್ಟು ಬಂದಿದ್ದು ಬಿ.ಸಿ.ರೋಡಿನಲ್ಲಿ ನಡೆಯಲಾಗದೆ ರಸ್ತೆ ಬದಿ ಬಿದ್ದು ಕೊಂಡಿದ್ದರು. ಮೈಯಲ್ಲಿ ಕೆಸರು ಆಗಿ ಅಸಹಾಯಕ ಪರಿಸ್ಥಿತಿಯಲ್ಲಿದ್ದರು. ಅವರಿಗೆ ಲುಂಗಿ ಮತ್ತು ಅಂಗಿಯನ್ನು ಕೊಟ್ಟು ಉಪಚರಿಸಿ ಕಳುಹಿಸಿದ ಘಟನೆಗೆ ಸಾರ್ವಜನಿಕ ಶ್ಲಾಘನೆ ವ್ಯಕ್ತವಾಗಿದೆ.
ಸಾರ್ವಜನಿಕರು ಇವರನ್ನು ವೀಕ್ಷಿಸಿ ಮೊಬೈಲ್ನಲ್ಲಿ ಫೋಟೊ ಕ್ಲಿಕ್ಕಿಸಿದ್ದರೇ ಹೊರತು ಅವರನ್ನು ಯಾರೂ ಆಸ್ಪತ್ರೆಗೆ ಸಾಗಿಸುವ ಅಥವಾ ಪ್ರಾಥಮಿಕ ಉಪಚಾರ ಮಾಡಲು ಕೂಡ ಮುಂದಾಗಿರಲಿಲ್ಲ. ಸ್ಥಳದಲ್ಲಿದ್ದ ರಿಕ್ಷಾ ಚಾಲಕ ಒಬ್ಬರನ್ನು ಗೊತ್ತುಪಡಿಸಿ ಅವರಿಗೆ 200 ರೂ. ನೀಡಿ ಬಳಿಕ ಮನೆಗೆ ತಲುಪಿಸುವ ವ್ಯವಸ್ಥೆ ಯನ್ನು ಸಾಮಾಜಿಕ ಸೇವಾಕರ್ತರು ಮಾಡಿದ್ದರು.