ತಾಲೂಕಿಗೊಂದು ಶೀತಲೀಕರಣ ಘಟಕ: ನಳಿನ್
Team Udayavani, Feb 24, 2019, 5:21 AM IST
ಪುತ್ತೂರು: ಶೀತಲೀಕರಣ ಘಟಕದ ಅಭಾವದಿಂದ ಬೆಳೆಗಳು ಹಾಳಾಗುತ್ತಿವೆ. ಆದ್ದರಿಂದ ಪ್ರತಿ ತಾಲೂಕಿಗೊಂದರಂತೆ ಶೀಥಲೀಕರಣ ಘಟಕ ನೀಡುವ ಯೋಜನೆ ಕೇಂದ್ರದ ಮುಂದಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.
ವಿವೇಕಾನಂದ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಪಾಲಿಟೆಕ್ನಿಕ್ ಕಾಲೇಜು, ಕ್ಯಾಂಪ್ಕೋ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಹಯೋಗದಲ್ಲಿ ಫೆ. 23ರಂದು ಉದ್ಘಾಟನೆಗೊಂಡ ಕೃಷಿ ಯಂತ್ರ ಮೇಳ-2019 ವನ್ನು ಕಳಸೆ ಮೇಲಿದ್ದ ಭತ್ತವನ್ನು ಬಿಡಿಸಿ, ಹಾಲೆರೆದು ಉದ್ಘಾಟಿಸಿ ಅವರು ಮಾತನಾಡಿದರು.
ಶೀತಲೀಕರಣದ ಕೊರತೆಯಿಂದ ಬೆಳೆದ ತರಕಾರಿಗಳನ್ನು ಹೆಚ್ಚು ದಿನ ತೆಗೆದಿಡುವುದು ಅಸಾಧ್ಯವಾಗಿದೆ. ನಿರೀಕ್ಷಿತ ಬೆಲೆ ಸಿಗದೆ ತರಕಾರಿಯನ್ನು ರಸ್ತೆಗೆ ಎಸೆಯುವುದನ್ನು ನೋಡಿದ್ದೇವೆ. ಇದನ್ನು ತಪ್ಪಿಸುವ ಉದ್ದೇಶದಿಂದ ನೀಲಿ ಕ್ರಾಂತಿ ಯೋಜನೆಯಡಿ ಶೀತಲೀಕರಣ ಘಟಕ ನೀಡುವ ಯೋಜನೆ ಆರಂಭಿಸಲಾಗಿತ್ತು. ಇದೀಗ ಇದನ್ನು ಪ್ರತಿ ತಾಲೂಕಿಗೆ ವಿಸ್ತರಿಸಲಾಗುವುದು ಎಂದರು.
ಗೋ ಆಯೋಗ: ಚಿಂತನೆ
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಹೈನುಗಾರಿಕೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಗೋ ಆಯೋಗ ರಚನೆಗೆ ಕೇಂದ್ರ ಸರಕಾರ ಮುಂದಾಗಿದೆ. ಈಗಾಗಲೇ ಮೀನುಗಾರಿಕೆಗೆ ಪ್ರತ್ಯೇಕ ಮಂತ್ರಾಲಯ ನಿರ್ಮಾಣ ಮಾಡಿದೆ ಎಂದರು.
ವಿಜ್ಞಾನದಿಂದ ಕೃಷಿಕ ಮರುಜೀವ
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ವಿಜ್ಞಾನಿಗಳು ಸಂಶೋಧನೆಯ ಮುಖಾಂತರ ಎಲ್ಲ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಕೃಷಿಗೆ ವಿಜ್ಞಾನದ ಮೂಲಕ ಜೀವ ಕೊಡುವ ಕಾರ್ಯ ಮಾಡಲಾಗುತ್ತಿದೆ. ನಗರದೆಡೆ ಹೋಗುತ್ತಿರುವ ಕೃಷಿಕರನ್ನು ತಡೆವಲ್ಲಿ ವಿಜ್ಞಾನಿಗಳ ಪಾತ್ರ ಮಹತ್ವದ್ದು. ಕೃಷಿಗೆ ಪೂರಕ ವೈಜ್ಞಾನಿಕ ಯಂತ್ರಗಳ ಮೂಲಕ ಕಠಿನ ಕೆಲಸ ಕಾರ್ಯಗಳನ್ನು ಸುಲಭ ವಾಗಿಸುವ ಅತ್ಯಾಧುನಿಕ ಯಂತ್ರೋಪಕರಣಗಳು ಮಾರುಕಟ್ಟೆಗೆ ಬರಬೇಕು ಎಂದರು.
ಶೀತಲೀಕರಣ ಕೇಂದ್ರ
ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅವರು ಹೈನುಗಾರಿಕೆಯನ್ನು ಉದ್ಘಾಟಿಸಿ, ಉತ್ತಮ ಫಸಲಿಗೆ ಮಣ್ಣಿನಲ್ಲಿರುವ ಕೋಟ್ಯಾಂತರ ಸೂಕ್ಷ್ಮಾಣು ಜೀವಿಗಳು ಕಾರಣ. ಅದಕ್ಕೆ ಚಿನ್ನಕ್ಕಿಂತ ಅನ್ನ ಶ್ರೇಷ್ಠ, ಅನ್ನಕ್ಕಿಂತ ಮಣ್ಣು ಶ್ರೇಷ್ಠ ಎನ್ನುವ ಮಾತು ಪ್ರಚಲಿತಕ್ಕೆ ಬಂದಿದೆ. ಕೆಎಂಎಫ್ ಹೈನುಗಾರಿಕೆಯನ್ನು ಅಭಿವೃದ್ಧಿಪಡಿಸಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನವೀಕೃತ ಶೀಥಲೀಕರಣ ಕೇಂದ್ರ ಹಾಗೂ 4 ಕೋಟಿ ರೂ. ವೆಚ್ಚದಲ್ಲಿ ನವೀಕೃತ ಸುಸಜ್ಜಿತ ಕ್ಯಾಂಪ್ ಆಫೀಸ್ ತೆರೆಯುವ ಯೋಜನೆ ಇದೆ ಎಂದರು.
ಕನಸಿನ ಮನೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಕೃಷಿಕ ನೆಮ್ಮದಿ ಕಾಣಬೇಕಾದರೆ ದೇಶದ ಆರ್ಥಿಕ ಪರಿಸ್ಥಿತಿ ಸುದೃಢ ಆಗಿರಬೇಕು. ಅದಕ್ಕಾಗಿ ಕೃಷಿ ಸಮ್ಮಾನ್, ಫಸಲ್ ಭೀಮಾ ಯೋಜನೆ, ಕೃಷಿ ಸಿಂಚನ್ ಮೊದಲಾದ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮೇಳ ಉದ್ಘಾಟಿಸಿದರು. ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ ವಿಕಸನ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು. ಐಐಎಚ್ ಆರ್ ನಿರ್ದೇಶಕ ಡಾ| ಎಂ.ಆರ್. ದಿನೇಶ್, ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಸತೀಶ್ ರಾವ್ ಪಿ., ಕ್ಯಾಂಪ್ಕೋದ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ್ ಭಂಡಾರಿ, ದ.ಕ. ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ವಿ. ಸತ್ಯನಾರಾಯಣ, ಪೇಸ್ ಅಧ್ಯಕ್ಷ ಕಿಶೋರ್ ಕುಮಾರ್, ವಿವೇಕಾನಂದ ಪದವಿ ಕಾಲೇಜಿನ ಸಂಚಾಲಕ ಎಂ.ಟಿ. ಜಯರಾಮ್ ಭಟ್, ವಿವೇಕಾನಂದ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ರವೀಂದ್ರ ರೈ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಅಧ್ಯಕ್ಷ ಪ್ರಸನ್ನ ಭಟ್, ಇನ್ನಾ ಚಂದ್ರಕಾಂತ ರಾವ್ ಮತ್ತಿತರರು ಉಪಸ್ಥಿತರಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೃಷ್ಣ ಭಟ್ ಪ್ರಸ್ತಾವನೆಗೈದು, ಸ್ವಾಗತಿಸಿದರು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಅಧ್ಯಕ್ಷ ಪ್ರಸನ್ನ ಭಟ್ ವಂದಿಸಿದರು. ವಿವೇಕಾನಂದ ಸ್ನಾತಕೋತ್ತರ ಪದವಿಯ ವಾಣಿಜ್ಯ ವಿಭಾಗದ ಸಂಯೋಜಕಿ ಡಾ| ವಿಜಯಾ ಸರಸ್ವತಿ, ಉಪನ್ಯಾಸಕ ಹರಿಪ್ರಸಾದ್ ದೈಲ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಗಾಡ್ ಪ್ರಾಮಿಸ್ಗೆ ಸ್ಕ್ರಿಪ್ಟ್ ಪೂಜೆ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್ ನಿರೀಕ್ಷೆ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ