ಶಿರಾಡಿ ಹೆದ್ದಾರಿಯಲ್ಲಿ ಸಾಗಲು ಸರತಿ ಸಾಲು!
Team Udayavani, Jul 16, 2018, 1:02 PM IST
ನೆಲ್ಯಾಡಿ : ಆರು ತಿಂಗಳುಗಳಿಂದ ಸಂಚಾರ ಸ್ಥಗಿತಗೊಂಡಿದ್ದ ಶಿರಾಡಿ ಘಾಟ್ ರಸ್ತೆ, ರವಿವಾರ ಉದ್ಘಾಟನೆ ಆಗುತ್ತದೆ. ತಕ್ಷಣದಿಂದಲೇ ಹೆದ್ದಾರಿಯಲ್ಲಿ ಸಾಗಲು ಬೆಳಿಗ್ಗೆಯಿಂದಲೇ ಗುಂಡ್ಯ ಆಸುಪಾಸು ವಾಹನಗಳ ಸರತಿ ಸಾಲು ಕಂಡುಬಂದಿತು. ಘನ ವಾಹನಗಳು ಗುಂಡ್ಯ ರಸ್ತೆ ಅಂಚಿನಲ್ಲೇ ಠಿಕಾಣಿ ಹೂಡಿದ್ದವು. ಬೆಂಗಳೂರು ಕಡೆಗೆ ಸಾಗುವ ಯಾತ್ರಾರ್ಥಿಗಳು, ಪ್ರವಾಸಿಗರು ಕಾದು ಕುಳಿತರು. ಆದರೆ ಕಾರ್ಯಕ್ರಮ ಮುಗಿಯದೇ ವಾಹನ ಸಂಚಾರಕ್ಕೆ ಅವಕಾಶ ನೀಡದೇ ಇರುವುದರಿಂದ ಸರತಿ ಸಾಲು ದೊಡ್ಡದಾಗಿ ಬೆಳೆಯುತ್ತಾ ಸಾಗಿತು.
ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಭೇಟಿ ನೀಡುವ ಪ್ರವಾಸಿಗರು ಸ್ವಲ್ಪ ಹೊತ್ತು ಕಾದು ಕುಳಿತು, ಬಳಿಕ ಚಾರ್ಮಾಡಿ ರಸ್ತೆಯಿಂದ ಸಾಗಲು ಮುಂದಾದರು. ಗುಂಡ್ಯ ಜಂಕ್ಷನ್ನಲ್ಲೇ ಕಾರ್ಯಕ್ರಮವಿದ್ದ ಕಾರಣ ತೆವಳುತ್ತಾ ಸಾಗುವುದು ಅನಿವಾರ್ಯ ಆಯಿತು. ಸುಮಾರು ಮೂರು ಗಂಟೆ ಹೊತ್ತಿಗೆ ಸಭಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ, ಶಿರಾಡಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಅಷ್ಟರವರೆಗೆ ಗುಂಡ್ಯ- ಸುಬ್ರಹ್ಮಣ್ಯ ಹಾದಿಯಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳು ಕರಗತೊಡಗಿದವು. 3.45ರ ಹೊತ್ತಿಗೆ ಸಂಚಾರ ವ್ಯವಸ್ಥೆ ಸುಸ್ಥಿತಿಗೆ ಬಂದಿತು.
ತಡವಾಗಿ ಉದ್ಘಾಟನೆ
ಅಪರಾಹ್ನ 11 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಹಾಸನ ಕಡೆಯಿಂದ ಜನಪ್ರತಿನಿಧಿಗಳು ತಡವಾಗಿ ಬಂದಿದ್ದರಿಂದ ಅಪರಾಹ್ನ 12.45ಕ್ಕೆ ಕೆಂಪುಹೊಳೆಯಲ್ಲಿ ರಸ್ತೆ ಉದ್ಘಾಟನೆ ನೆರವೇರಿಸಲಾಯಿತು. ಇದು ಕಾಮಗಾರಿ ಆರಂಭವಾದ ಸ್ಥಳ. 12.38 ಕಿ.ಮೀ. ಕಾಮಗಾರಿ ಕೊನೆಗೊಂಡ ಗುಂಡ್ಯದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು. 1 ಗಂಟೆಗೆ ಆರಂಭಗೊಂಡ ಸಭಾ ಕಾರ್ಯಕ್ರಮ 2.45ರವರೆಗೂ ನಡೆಯಿತು.
ರಸ್ತೆ ಉದ್ಘಾಟನೆ
ಒಟ್ಟು 26 ಕಿ.ಮೀ. ಉದ್ದದ ಶಿರಾಡಿ ರಸ್ತೆಯ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಂತಾಗಿದೆ. ಎರಡನೇ ಹಂತದ ಕಾಮಗಾರಿಯಲ್ಲಿ 74 ಕೋಟಿ ರೂ. ಬಳಸಿಕೊಂಡು 12.38 ಕಿ.ಮೀ. ದೂರ ಕಾಮಗಾರಿ ನಡೆಸಲಾಗಿದೆ. ಈ ಕಾಮಗಾರಿ ಕೆಂಪುಹೊಳೆ ಸೇತುವೆಯಿಂದ ಗುಂಡ್ಯದವರೆಗೆ ನಡೆದಿದೆ. ಇನ್ನು ತಡೆಗೋಡೆ ಹಾಗೂ ಕಾಂಕ್ರೀಟ್ ರಸ್ತೆ ಅಂಚಿಗೆ ಮಣ್ಣು ಹಾಕುವ ಕೆಲಸ ಬಾಕಿ ಇರುವುದರಿಂದ, ವಾಹನ ಸವಾರರು ಜಾಗೃತೆಯಿಂದ ಸಾಗುವುದು ಉತ್ತಮ.