ರಾ.ಹೆ. 169 ಕುಲಶೇಖರ-ಸಾಣೂರು ಚತುಷ್ಪಥ ಕಾಮಗಾರಿ: ಮರಗಳ ಜಂಟಿ ಸಮೀಕ್ಷೆಗೆ ಆಗ್ರಹ
Team Udayavani, Jun 16, 2022, 6:35 AM IST
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ಕುಲಶೇಖರ-ಸಾಣೂರು ನಡುವೆ ಚತುಷ್ಪಥ ಕಾಮಗಾರಿ ಹಿನ್ನೆಲೆಯಲ್ಲಿ ಬಿಕರ್ನಕಟ್ಟೆಯಿಂದ ಮಿಜಾರು ವರೆಗಿನ ಮರಗಳನ್ನು ಕಡಿಯುವ ಮೊದಲುಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಗಳು ಮತ್ತು ಪರಿಸರಾಸಕ್ತರ ಪಾಲ್ಗೊಳ್ಳುವಿಕೆಯಲ್ಲಿ ಸಮೀಕ್ಷೆ ನಡೆಸಬೇಕು ಎಂದು ಪರಿಸರಾಸಕ್ತರು ಆಗ್ರಹಿಸಿದ್ದಾರೆ.
ಮರ ಕಡಿಯುವ ಪೂರ್ವಭಾವಿಯಾಗಿ ಬುಧವಾರ ಹೊಗೆಬಜಾರ್ನ ಮಂಗಳೂರು ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಈ ಬಗ್ಗೆ ಒತ್ತಾಯಿಸಲಾಯಿತು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ. ಸುಬ್ರಹ್ಮಣ್ಯ ಮಾತನಾಡಿ, ಕುಲ ಶೇಖರ- ಸಾಣೂರು ನಡುವಿನ ಹೆದ್ದಾರಿ
ಯಲ್ಲಿ ಬಿಕರ್ನಕಟ್ಟೆಯಿಂದ ಮಿಜಾರು ನಡುವಿನ ಪ್ರದೇಶ ಮಂಗಳೂರು ವಲಯ ಅರಣ್ಯಾಧಿ ಕಾರಿಗಳ ವ್ಯಾಪ್ತಿಯಲ್ಲಿದೆ. ಈ ಭಾಗದ 18.5 ಕಿ.ಮೀ ಸರಕಾರಿ ಜಾಗದಲ್ಲಿ 2,660 ಮರಗಳನ್ನು ಗುರುತಿಸಲಾಗಿದೆ. ಖಾಸಗಿ ಜಾಗದ ಮರಗಳನ್ನು ಇನ್ನಷ್ಟೇ ಗುರುತಿಸಬೇಕಾಗಿದೆ. 50ಕ್ಕಿಂತ ಹೆಚ್ಚು ಮರಗಳನ್ನು ಕಡಿಯುವ ಮೊದಲು ಸಾರ್ವಜನಿಕ ಅಹವಾಲು ಸಭೆ ನಡೆಸು ವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದೆ. ಎಲ್ಲ ಅಗತ್ಯ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ಸಾರ್ವಜನಿಕರ ಸಹಕಾರ ದೊಂದಿಗೆ ನಡೆಸಲಾಗುತ್ತಿದೆ ಎಂದರು.
ಅನಿತಾ ಭಂಡಾರ್ಕರ್ ಮತ್ತು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ (ಎನ್ಸಿಇಎಫ್) ಇತರ ಕೆಲವು ಸದಸ್ಯರು ಮಾತನಾಡಿ, ರಸ್ತೆ ವಿಸ್ತರಣೆ ಸೇರಿದಂತೆ ವಿವಿಧ ಕಾಮಗಾರಿಗಳ ನೆಪದಲ್ಲಿ ಮರ ಗಳ ನಾಶ ನಡೆಯುತ್ತಲೇ ಇದೆ. ಈಗ ಬಿಕರ್ನಕಟ್ಟೆ-ಮಿಜಾರು ನಡುವಿನ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ಗುರುತಿಸಿ ರುವ ಮರಗಳ ಸಂಖ್ಯೆಯ ಬಗ್ಗೆ ಸಂದೇಹ ವಿದೆ. ಈ ಅಹವಾಲು ಸಭೆಯನ್ನು ತರಾತುರಿ ಯಲ್ಲಿ ಕರೆಯಲಾಗಿದೆ. ಸಾರ್ವ ಜನಿಕರಿಗೆ ಸಮರ್ಪಕವಾಗಿ ಮಾಹಿತಿ ನೀಡಿಲ್ಲ. ಅಲ್ಲದೆ ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕಂದಾಯ ಇಲಾಖೆ, ನಗರ ಅರಣ್ಯ ಸಮಿತಿಯವರನ್ನು ಸೇರಿಸಿಕೊಂಡು ಸಮೀಕ್ಷೆ ನಡೆಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದಅಧಿಕಾರಿಗಳು, ಈಗಾಗಲೇ ಸಮೀಕ್ಷೆನಡೆಸಲಾಗಿದ್ದು ಪ್ರಸ್ತುತ ಈ ಬಗ್ಗೆ ಪರಿಸರಾಸಕ್ತರು ಪರಿಶೀಲನೆ ನಡೆಸಬಹು ದಾಗಿದೆ ಎಂದು ತಿಳಿಸಿದರು.
ಮರಗಳ ಸ್ಥಳಾಂತರಕ್ಕೆ ನಿರ್ಧಾರ
ಪರಿಸರ ಪ್ರೇಮಿ ಜೀತ್ಮಿಲನ್ ರೋಚ್ ಮಾತನಾಡಿ, ಅಭಿವೃದ್ಧಿ ಕಾಮಗಾರಿಗಳಿಗೆ ನಮ್ಮ ವಿರೋಧವಲ್ಲ. ಆದರೆ ಗರಿಷ್ಠ ಮರಗಳನ್ನು ಉಳಿಸಲು ಆದ್ಯತೆ ನೀಡಬೇಕು. ಪಂಪ್ವೆಲ್-ಪಡೀಲ್ ರಸ್ತೆ ಸೇರಿದಂತೆ ಹಲವು ರಸ್ತೆ ಕಾಮಗಾರಿಗಳ ವೇಳೆ ಪರಿಸರ ಪ್ರೇಮಿಗಳ ಮಧ್ಯಪ್ರವೇಶದಿಂದ ನೂರಾರು ಗಿಡಗಳನ್ನು ಉಳಿಸಲು ಸಾಧ್ಯವಾಗಿದೆ. ಬಿಕರ್ನಕಟ್ಟೆ-ಮಿಜಾರು ನಡುವಿನ ರಸ್ತೆ ಕಾಮಗಾರಿ ವೇಳೆಯೂ ಗಿಡಗಳನ್ನು ಉಳಿಸಬಹುದು. ಸಣ್ಣ ಮರಗಳನ್ನು ಸ್ಥಳಾಂತರಿಸಬಹುದು ಎಂದು ಸಲಹೆ ನೀಡಿದರು. ಸಾಧ್ಯವಾದಷ್ಟು ಸಣ್ಣ ಮರಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ವಿಶೇಷ ಭೂಸ್ವಾಧೀನಾಧಿಕಾರಿ ಅರುಣಪ್ರಭ, ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.ಸಭೆಯಲ್ಲಿ 11 ಮಂದಿ ಆಕ್ಷೇಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೂವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಮರಗಳ ರಕ್ಷಣೆಗಾಗಿ 45 ಮೀಟರ್ಗೆ ಸೀಮಿತ
ಮಂಗಳೂರು-ಕಾರ್ಕಳ ಹೆದ್ದಾರಿ ಪ್ರಸ್ತುತ ದ್ವಿಪಥವಿದೆ. ವಾಹನಗಳ ಸಂಖ್ಯೆ ಮಿತಿ ಗಿಂತ ಜಾಸ್ತಿ ಇದೆ. ಹಾಗಾಗಿ ಚತುಷ್ಪಥಗೊಳಿಸಲಾಗುತ್ತಿದೆ. ಹೆದ್ದಾರಿ ಪ್ರಾಧಿಕಾರದ ನಿಯಮ ದಂತೆ 60 ಮೀಟರ್ ಅಗಲಗೊಳಿಸಬೇಕಿದೆ. ಆದರೆ ಮರಗಳನ್ನು ಉಳಿಸಬೇಕೆಂಬ ದೃಷ್ಟಿಯಿಂದ ಅದನ್ನು 45 ಮೀಟರ್ಗೆ ಸೀಮಿತಗೊಳಿಸಲಾಗುತ್ತಿದೆ. ಮಹತ್ವದ ಈ ಕಾಮಗಾರಿಯನ್ನು ಶೀಘ್ರ ಮುಗಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ