“ಮನೆ ಮನೆಗೆ ಮಳೆಕೊಯ್ಲು’ ಉದಯವಾಣಿ ಅಭಿಯಾನ
ಜೂ. 19: ಮಂಗಳೂರಿನಲ್ಲಿ ಕಾರ್ಯಾಗಾರ
Team Udayavani, Jun 17, 2019, 9:59 AM IST
ಮಂಗಳೂರು: ಮಳೆಕೊಯ್ಲು ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು “ಉದಯವಾಣಿ’ ಹಮ್ಮಿಕೊಂಡಿರುವ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದ ಎರಡನೇ ಹಂತವಾಗಿ ಜೂ. 19ರಂದು ಬೆಳಗ್ಗೆ 10 ಗಂಟೆಗೆ ಉರ್ವಸ್ಟೋರ್ನಲ್ಲಿರುವ ದ.ಕ. ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಮಳೆಕೊಯ್ಲು ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ.
ದ.ಕ.ಜಿ.ಪಂ. ಸಹಯೋಗದಲ್ಲಿ ನಡೆಯ ಲಿರುವ ಈ ಕಾರ್ಯಾಗಾರವನ್ನು ಉಸ್ತುವಾರಿ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಖ್ಯಾತ ಜಲತಜ್ಞ ಶ್ರೀಪಡ್ರೆ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶಾಸಕ ವೇದವ್ಯಾಸ ಕಾಮತ್, ದ.ಕ. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ಜಿ.ಪಂ. ಸಿಇಒ ಡಾ| ಆರ್. ಸೆಲ್ವಮಣಿ, ಮಂಗಳೂರು ಪಾಲಿಕೆ ಆಯುಕ್ತ ನಾರಾಯಣಪ್ಪ, ಕ್ರೆಡೈ ಮಂಗಳೂರು ಅಧ್ಯಕ್ಷ ನವೀನ್ ಕಾಡೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉದಯವಾಣಿ “ಸುದಿನ’ವು ಮಂಗಳೂರು ನಗರ ವ್ಯಾಪ್ತಿಯಲ್ಲಿ ಒಂದು ವಾರದಿಂದ “ಮನೆ ಮನೆಗೆ ಮಳೆಕೊಯ್ಲು’ ಎನ್ನುವ ಜಾಗೃತಿ ಅಭಿಯಾನ ಆಯೋಜಿಸಿದ್ದು, ಅದಕ್ಕೆ ಓದುಗರು ಮತ್ತು ಅಧಿಕಾರಿ ವರ್ಗದಿಂದ ಉತ್ತಮ ಸ್ಪಂದನೆ-ಪ್ರತಿಕ್ರಿಯೆ ವ್ಯಕ್ತ ವಾಗುತ್ತಿದೆ. ಅನೇಕರು ಮಳೆಕೊಯ್ಲು ಅಳವಡಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಹೀಗಾಗಿ ಸಾರ್ವಜನಿಕರಿಗೆ ಮಳೆಕೊಯ್ಲು ಅಳವಡಿಸುವ ವಿಧಾನ, ಖರ್ಚು-ವೆಚ್ಚ, ಮಳೆಕೊಯ್ಲಿನ ವಿವಿಧ ಮಾದರಿಗಳು ಮತ್ತು ಸರಕಾರದ ಸವಲತ್ತುಗಳ ಬಗ್ಗೆ ಮಾಹಿತಿ ಒದಗಿಸುವುದಕ್ಕಾಗಿ ಈ ಕಾರ್ಯಾಗಾರ ಏರ್ಪಡಿಸಲಾಗಿದೆ.
ಉಚಿತವಾಗಿ ನೋಂದಾಯಿಸಿಕೊಳ್ಳಿ
ಕಾರ್ಯಾಗಾರ ಸಂದರ್ಭ ಮಂಗಳೂರಿನ ನಿರ್ಮಿತಿ ಕೇಂದ್ರದ ವತಿಯಿಂದ “ಮಳೆ ಕೊಯ್ಲು’ ಅಳವಡಿಕೆ ವಿಧಾನದ ಬಗ್ಗೆ ಸಾರ್ವಜನಿಕರಿಗೆ ಉಚಿತ ತಾಂತ್ರಿಕ ಮಾಹಿತಿ ಒದಗಿಸಲಾಗುತ್ತದೆ. ಮಳೆ ಕೊಯ್ಲು ಪ್ರಾತ್ಯಕ್ಷಿಕೆಯೂ ಇರುತ್ತದೆ. ಕಾರ್ಯಾ ಗಾರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು “ಉದಯವಾಣಿ’ಯ 9900567000 ವಾಟ್ಸಾಪ್ ನಂಬರ್ಗೆ ಮುಂಚಿತವೇ ತಮ್ಮ ಹೆಸರನ್ನು ಉಚಿತವಾಗಿ ನೋಂದಾಯಿಸಿ ಕೊಳ್ಳಬಹುದು.