ಕರಾವಳಿಯಲ್ಲಿ ಇಳಿದ ಮಳೆಯ ಅಬ್ಬರ : ಉಡುಪಿಯಲ್ಲಿ ಮುಂದುವರಿದ ಮಳೆ
Team Udayavani, Aug 9, 2022, 8:14 AM IST
ಮಂಗಳೂರು/ಉಡುಪಿ : ಹಲವು ದಿನಗಳಿಂದ ಕರಾವಳಿಯ ವಿವಿಧೆಡೆ ಎಡೆಬಿಡದೆ ಸುರಿದ ಮಳೆಯ ಅಬ್ಬರ ಸೋಮವಾರ ಪೂರ್ಣ ಇಳಿದಿದೆ. ಬೆಳಗ್ಗೆಯಿಂದಲೇ ಮಂಗಳೂರು, ಹೊರವಲಯ ಸಹಿತ ಹಲವೆಡೆಗಳಲ್ಲಿ ಹಗುರವಾದ ಮಳೆಯಾಗಿದೆ. ಮಧ್ಯಾಹ್ನ ಅನಂತರ ಮೋಡ ಕವಿದ ವಾತಾವರಣವಿತ್ತು. ಬೆಳ್ತಂಗಡಿಯಲ್ಲಿ ದಿನವಿಡೀ ಭಾರೀ ಮಳೆಯಾಗಿದ್ದರೆ ಉಳಿದ ಕಡೆ ಸಾಧಾರಣ ಮಳೆ ಸುರಿದಿದೆ. ಬಂಟ್ವಾಳ, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯದಲ್ಲಿ ಆಗಾಗ್ಗೆ ಮಳೆಯಾಗಿದೆ.
ಆದರೆ ಇನ್ನೂ ಒಂದು ದಿನ ಆರೆಂಜ್ ಹಾಗೂ ಒಂದು ದಿನ ಯೆಲ್ಲೊ ಅಲರ್ಟ್ ಇದ್ದು ಕರಾವಳಿಯಲ್ಲಿ ಉತ್ತಮ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಉಡುಪಿ: ಮುಂದುವರಿದ ಮಳೆ
ಉಡುಪಿ: ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ರವಿವಾರ ತಡರಾತ್ರಿ, ಸೋಮವಾರ ಧಾರಾಕಾರ ಮಳೆ ಸುರಿದಿದೆ. ಮಲ್ಪೆ, ಮಣಿಪಾಲ, ಪೆರ್ಡೂರು, ಕಾಪು, ಬ್ರಹ್ಮಾವರ ಭಾಗದಲ್ಲಿ ಬಿಟ್ಟುಬಿಟ್ಟು ಮಳೆಯಾಗಿದೆ. ಕೃಷಿ ಭೂಮಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ, ನೆರೆ ಇಳಿಮುಖವಾಗಿಲ್ಲ. ಕಡಲತೀರದಲ್ಲಿ ಪ್ರಕ್ಷುಬ್ದ ವಾತಾವರಣ ಮುಂದುವರಿದಿದೆ. ಸೋಮವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ ಕಾಲ ಉಡುಪಿ 27.1, ಬ್ರಹ್ಮಾವರ 22.9, ಕಾಪು 34.9, ಕುಂದಾಪುರ 51.8, ಬೈಂದೂರು 43.2, ಕಾರ್ಕಳ 62.2, ಹೆಬ್ರಿ 51.0 ಮಿ .ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ 46.0 ಮಿ . ಮೀ. ಸರಾಸರಿ ಮಳೆಯಾಗಿದೆ.
ಇದನ್ನೂ ಓದಿ : ಭಾರೀ ಮಳೆ : ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು, ಎಳನೀರು – ದಿಡುಪೆ ಸಂಪರ್ಕ ಕಡಿತ