ಮೂಡುಬಿದಿರೆಯಲ್ಲಿ ಮಳೆಕೊಯ್ಲು ಮಾಹಿತಿ; ಮುಂಡಾಜೆಯಲ್ಲಿ ಜಲಜಾಗೃತಿ
Team Udayavani, Aug 6, 2019, 6:16 AM IST
‘ಉದಯವಾಣಿ’ ಪತ್ರಿಕೆಯಲ್ಲಿ ಶ್ರೀಪಡ್ರೆಯವರ ಲೇಖನಗಳನ್ನು ಹಲವು ವರ್ಷಗಳ ಹಿಂದೆ ಓದಿದಾಗಲೇ ನೀರುಳಿಕೆಗೆ ಯೋಚಿಸಿದ್ದ ಬಿಜೈ ಕಾಪಿಕಾಡ್ ಬಾರೆಬೈಲ್ ನಿವಾಸಿ ಶಶಿಧರ ಅವರು, ಕಳೆದ ವರ್ಷ ಮನೆ ಕಟ್ಟಿಸುವಾಗ ಬಾವಿ ತೋಡಿ, ಅದಕ್ಕೆ ಮಳೆಕೊಯ್ಲು ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ.
ಪೂರ್ತಿ ಛಾವಣಿಯ ನೀರು ಜಲ್ಲಿ ಕಲ್ಲು, ಮರಳು ತುಂಬಿಸಿದ ಹೊಂಡದ ಮೂಲಕ ಹಾದು ಬಾವಿಗೆ ಸೇರುವಂತೆ ಮಾಡಲಾಗಿದೆ. ಮಳೆ ನೀರು ತುಂಬಿದಷ್ಟು ಸ್ವಚ್ಛ ಮತ್ತು ತಿಳಿಯಾದ ನೀರು ಬಾವಿಯಲ್ಲಿದೆ. ಈ ಬಾರಿ ಮಳೆಗೆ ತಡವಾದರೂ, ನೀರಿಗೆ ಕೊರತೆ ಉಂಟಾಗಿಲ್ಲ ಎನ್ನುತ್ತಾರೆ ಶಶಿಧರ್.
ಮಹಾನಗರ, ಆ. 5: ಬೆಳ್ತಂಗಡಿ ತಾಲೂಕಿನ ಮುಂಡಾಜೆ ಜಲ ಸಾಕ್ಷರತಾ ಆಂದೋಲನ ಹಾಗೂ ಉದಯವಾಣಿ ಪತ್ರಿಕೆ ಸಹಯೋಗದಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಮಳೆ ನೀರು ಸಂರಕ್ಷಿಸುವ ಕುರಿತಂತೆ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇದೀಗ ಈ ಜಲ ಸಾಕ್ಷರರ ತಂಡವು ತನ್ನ 5ನೇ ಕಾರ್ಯಕ್ರಮವಾಗಿ ಮುಂಡಾಜೆಯ ಮಜಲು ವಾಳ್ಯ ಪರಿಸರದ ಸುಮಾರು 11 ಮನೆಗಳಿಗೆ ಭೇಟಿ ನೀಡಿ ಜನರಿಗೆ, ಬಾವಿಗೆ ಮಳೆ ನೀರಿನ ಪೂರಣ, ವೃಕ್ಷಾರೋಪಣ, ಇಂಗು ಗುಂಡಿ ರಚನೆ, ನೀರು ಹರಿಯುವ ಕಾಲುವೆಯ ಅಕ್ಕ-ಪಕ್ಕ ಹುತ್ತ ಇದ್ದರೆ ಅದಕ್ಕೆ ಮಳೆನೀರು ಹರಿಯುವಂತೆ ಮಾಡುವುದರ ಲಾಭದ ಬಗ್ಗೆ ಮಾಹಿತಿ ನೀಡಲಾಯಿತು.