ಬಿಜೆಪಿಯಿಂದ ರಹಸ್ಯ ಕಾರ್ಯಸೂಚಿ: ರಮಾನಾಥ ರೈ
Team Udayavani, Jun 26, 2022, 1:41 AM IST
ಮಂಗಳೂರು: ರಾಜ್ಯ ಬಿಜೆಪಿ ಸರಕಾರವು ಪಠ್ಯ ಪರಿಷ್ಕರಣೆ ನೆಪದಲ್ಲಿ ತನ್ನ ರಾಜಕೀಯದ ಹಿಡನ್ ಅಜೆಂಡಾ ಹೇರುತ್ತಿದ್ದು ಮಕ್ಕಳನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಸರಕಾರ ಮಕ್ಕಳ ಶಿಕ್ಷಣಕ್ಕೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ಶಾಲೆಗಳು ಆರಂಭವಾಗಿದ್ದು, ಶಿಕ್ಷಕರ ಕೊರತೆ ಕಾಡುತ್ತಿದೆ. ಪಠ್ಯಪುಸ್ತಕ, ಸಮವಸ್ತ್ರ ನೀಡಿಲ್ಲ. ಶಿಕ್ಷಕರಿಗೆ ಝೆರಾಕ್ಸ್ ಮಾಡಿ ಪಠ್ಯಪುಸ್ತಕ ನೀಡಲಾಗುತ್ತಿದೆ. ಇಂತಹ ನಿರ್ಲಕ್ಷ್ಯ, ವಿಳಂಬ ನೀತಿ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಶಿಕ್ಷಣ ಇಲಾಖೆಯನ್ನೇ ದುರ್ಬಲಗೊಳಿಸುವ ಪ್ರಯತ್ನವನ್ನು ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಯುಪಿಎ ಅವಧಿಯಲ್ಲಿ ಸರ್ವ ಶಿಕ್ಷಣ ಅಭಿಯಾನ ಜಾರಿಗೆ ತರಲಾಯಿತು. ಸಿದ್ದರಾಮಯ್ಯ “ವಿದ್ಯಾಸಿರಿ’ ಯೋಜನೆ ಜಾರಿಗೊಳಿಸಿ ದರು. ಮಧ್ಯಾಹ್ನದ ಬಿಸಿಯೂಟ ಆರಂಭಿಸಿದ್ದು ಕಾಂಗ್ರೆಸ್. ಆದರೆ ಇದೀಗ ಅದಕ್ಕೂ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ಶಿಕ್ಷಕರಿಗೆ ನೀಡುವ ಕಲಿಕೋಪಕರಣ ಅನುದಾನ ನಿಲ್ಲಿಸಲಾಗಿದೆ. ಶಿಕ್ಷಣದ ಮೂಲ ಅಗತ್ಯಗಳನ್ನೇ ಮೊಟಕುಗೊಳಿಸುವ ಮೂಲಕ ಶೈಕ್ಷಣಿಕ ವ್ಯವಸ್ಥೆಯನ್ನೇ ಹಾಳು ಗೆಡವಲು ಬಿಜೆಪಿ ಸರಕಾರ ಹೊರಟಿದೆ. ಶೇ. 40 ಕಮಿಷನ್ ದೊರೆಯುವ ಕಾರ್ಯಕ್ರಮಕ್ಕೆ ಮಾತ್ರವೇ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದರು.
ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ
ಅಧ್ಯಕ್ಷರ ಮೇಲೆ ಬಹಳ ಆರೋಪ ಗಳಿದ್ದರೂ ಮಂಗಳೂರಿನಲ್ಲಿ ಬಿಜೆಪಿ ನಾಯಕರು ಸಮ್ಮಾನಿಸಲು ಹೊರಟಿರುವುದು ಗಾಯದ ಮೇಲೆ ಉಪ್ಪು ಸವರುವ ಯತ್ನ. ನಾರಾಯಣ ಗುರುಗಳು, ಕಯ್ಯಾರ ಕಿಂಞಣ್ಣ ರೈ ಸೇರಿದಂತೆ ಅನೇಕ ಸಮಾಜ ಸುಧಾರಕರನ್ನು ಪಠ್ಯಪುಸ್ತಕದಲ್ಲಿ ಕೈಬಿಟ್ಟಿರುವುದರಿಂದ ಜನರಿಗೆ ನೋವಾಗಿದೆ. ಪಠ್ಯ ಪರಿಷ್ಕರಣೆ ನೆಪದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ದಾರ್ಶನಿಕರನ್ನು ಅವಗಣಿಸಲಾಗುತ್ತಿದೆ ಎಂದು ಹೇಳಿದರು.
ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ರಕ್ಷಿತ್, ಹರಿನಾಥ್, ಸಲೀಂ, ಪ್ರಕಾಶ್ ಸಾಲಿಯಾನ್, ನವೀನ್ ಡಿ’ಸೋಜಾ, ಮಮತಾ ಗಟ್ಟಿ, ಶುಭೋದಯ ಆಳ್ವ, ಬೇಬಿ ಕುಂದರ್, ಶೇಖರ ಪೂಜಾರಿ, ಶಬ್ಬೀರ್, ನಝೀರ್ ಬಜಾಲ್ ಉಪಸ್ಥಿತರಿದ್ದರು.
ತುಳುನಾಡಿಗೆ ಅವಮಾನ: ಮಿಥುನ್ ರೈ
ಮಂಗಳೂರು: ಕರ್ನಾಟಕ ಏಕೀಕರಣ ಚಳವಳಿಯ ನೇತಾರ ಕಯ್ಯಾರ ಕಿಂಞಣ್ಣ ರೈ ಅವರ ಹೆಸರನ್ನು 7ನೇ ತರಗತಿಯ ಪಾಠದಿಂದ ತೆಗೆದು ಹಾಕಿರುವುದು ಸಮಸ್ತ ತುಳುನಾಡಿಗೆ ಮಾಡಿರುವ ಅವಮಾನ ಮತ್ತು ಅನ್ಯಾಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಅಂದು ಗಣರಾಜ್ಯೋತ್ಸವ ಪರೇಡ್ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ನಿರಾಕರಿಸಿ ಅನ್ಯಾಯ ಮಾಡಲಾಗಿತ್ತು. ಒಟ್ಟಿನಲ್ಲಿ ಬಿಜೆಪಿ ಸರಕಾರ ತುಳುನಾಡಿನ ಅಸ್ತಿತ್ವವನ್ನು ನಾಶಪಡಿಸುವ ಹುನ್ನಾರ ಮಾಡುತ್ತಿದೆ ಎಂದ ಅವರು, ನಾರಾಯಣ ಗುರು,ಕಯ್ಯಾರರ ವಿಚಾರವನ್ನು ಪಠ್ಯದಿಂದ ಬಿಟ್ಟಿರುವ ಬಗ್ಗೆ ಸರಕಾರ ಕ್ಷಮೆ ಯಾಚಿಸಿ ಮತ್ತೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಸಮ್ಮಾನ ಖಂಡನೀಯ
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ನಾರಾಯಣ ಗುರುಗಳು,ಕಿಂಞಣ್ಣ ರೈಗಳಿಗೆ ಅವಮಾನ ಮಾಡಿ ರುವ ರೋಹಿತ್ ಚಕ್ರತೀರ್ಥರಿಗೆ ಬಿಜೆಪಿ ಸಮ್ಮಾನ ಮಾಡಲು ಹೊರಟಿರು ವುದು ಖಂಡನೀಯ ಎಂದರು.
ಮುಖಂಡರಾದ ನೀರಜ್ ಪಾಲ್, ಅನಿಲ್ ಕುಮಾರ್ ಉಪಸ್ಥಿತರಿದ್ದರು.