ವಿರಾಟ್ ಮೂರ್ತಿಯ ಮಹಾಮಜ್ಜನಕ್ಕೆ ರತ್ನಗಿರಿ ಸಿದ್ಧ
Team Udayavani, Jan 25, 2019, 12:50 AM IST
ಬೆಳ್ತಂಗಡಿ: ಸತ್ಕಾರ್ಯಗಳ ಮೂಲಕ ಸದಾ ಪುಣ್ಯಕ್ಷೇತ್ರವಾಗಿ ಗುರುತಿಸಲ್ಪಟ್ಟಿರುವ ಧರ್ಮಸ್ಥಳ ಕ್ಷೇತ್ರದಲ್ಲಿ ಮತ್ತೂಂದು ಐತಿಹಾಸಿಕ ಕಾರ್ಯಕ್ರಮಕ್ಕೆ ದಿನಗಣನೆ ಆರಂಭಗೊಂಡಿದೆ. ಕ್ಷೇತ್ರದ ಭಗವಾನ್ ಶ್ರೀ ಬಾಹುಬಲಿಯ ಚತುರ್ಥ ಮಹಾಮಸ್ತಕಾಭಿಷೇಕ ಫೆ. 9ರಿಂದ 18ರ ವರೆಗೆ ಅತ್ಯಂತ ವೈಭವೋಪೇತವಾಗಿ ನಡೆಯುವುದಕ್ಕೆ ಸಿದ್ಧತೆ ವೇಗವಾಗಿ ಸಾಗಿದೆ.ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗ ದರ್ಶನದಲ್ಲಿ ನಡೆಯುವ ಈ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳುವುದಕ್ಕೆ ಭಕ್ತಜನ ಕಾತರದಿಂದ ಕಾಯುತ್ತಿದ್ದಾರೆ. ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲರೂ ಆಗಮಿಸುವ ಅಸಂಖ್ಯಾತ ಭಕ್ತ ವರ್ಗವನ್ನು ಸ್ವಾಗತಿಸುವುದಕ್ಕೆ ಕಾತರರಾಗಿದ್ದಾರೆ.
1982 ಪ್ರಥಮ ಮಹಾಮಸ್ತಕಾಭಿಷೇಕ
ಧರ್ಮಸ್ಥಳದ ರತ್ನಗಿರಿಯಲ್ಲಿ ಪ್ರತಿಷ್ಠಾಪಿಸಿರುವ 39 ಅಡಿ ಎತ್ತರದ ಭಗವಾನ್ ಬಾಹುಬಲಿಯ ವಿರಾಟ್ ಮೂರ್ತಿ ದಿ| ರತ್ನವರ್ಮ ಹೆಗ್ಗಡೆ ಹಾಗೂ ರತ್ನಮ್ಮ ಹೆಗ್ಗಡೆ ಅವರ ಸಂಕಲ್ಪದ ಪ್ರತೀಕ. ಕಾರ್ಕಳದ ಮಂಗಲಪಾದೆಯಲ್ಲಿ ವಿಗ್ರಹವನ್ನು ರೆಂಜಾಳ ಗೋಪಾಲಕೃಷ್ಣ ಶೆಣೈ ಅವರು ಕೆತ್ತಿದ್ದು, ಬಳಿಕ ಅದನ್ನು ವಿಶೇಷ ಟ್ರಾಲಿಯ ಮೂಲಕ ಕ್ಷೇತ್ರಕ್ಕೆ ತರಲಾಗಿತ್ತು.
1975ರಲ್ಲಿ ಪ್ರತಿಷ್ಠಾಪನೆ ಕಾರ್ಯ ಪ್ರಾರಂಭಗೊಂಡಿದ್ದು, 1982ರ ಫೆ. 4ರಂದು 108ನೇ ಆಚಾರ್ಯ ಶ್ರೀ ವಿದ್ಯಾನಂದ ಮಹಾರಾಜ್ ಮತ್ತು 108ನೇ ಆಚಾರ್ಯ ವಿಮಲ ಸಾಗರ ಮಹಾರಾಜರ ನೇತೃತ್ವದಲ್ಲಿ ಪ್ರಥಮ ಮಹಾಮಸ್ತಕಾಭಿಷೇಕ ನಡೆದಿತ್ತು. 1995ರ ಫೆ. 5ರಿಂದ 10ರ ವರೆಗೆ 108ನೇ ಆಚಾರ್ಯ ಶ್ರೀ ವರ್ಧಮಾನ ಸಾಗರ್ ಜೀ ಮಹಾರಾಜರ ನೇತೃತ್ವದಲ್ಲಿ ದ್ವಿತೀಯ ಮಹಾಮಸ್ತಕಾಭಿಷೇಕ, 2007ರ ಜ. 28ರಿಂದ ಫೆ. 2ರ ವರೆಗೆ 108ನೇ ಆಚಾರ್ಯ ಶ್ರೀ ವರ್ಧಮಾನ ಸಾಗರ್ ಜೀ ಮಹಾರಾಜರ ನೇತೃತ್ವ ದಲ್ಲಿ ತೃತೀಯ ಹಾಗೂ ಈಗಿನದು 4ನೇ ಮಹಾಮಸ್ತಕಾಭಿಷೇಕದ ಸಂಭ್ರಮ.
ವಿನೂತನ ಕಾರ್ಯ
ಸಾಂಪ್ರದಾಯಿಕವಾಗಿ ತೀರ್ಥಂಕರರ ಪಂಚಕಲ್ಯಾಣ ಕಾರ್ಯಕ್ರಮ ನಡೆಸಿ ಬಳಿಕ ಬಾಹುಬಲಿಗೆ ಮಸ್ತಕಾಭಿಷೇಕ ನಡೆಯುತ್ತದೆ. ಆದರೆ ಕ್ಷೇತ್ರದಲ್ಲಿ ವಿನೂತನವಾಗಿ ಆಚಾರ್ಯ ಶ್ರೀಗಳು ಮತ್ತು ಭಟ್ಟಾರಕರ ಅನುಮತಿ ಪಡೆದು ಶ್ರೀ ಭಗವಾನ್ ಬಾಹುಬಲಿಯ ಪಂಚ ಮಹಾವೈಭವದ ಮೂಲಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದು ಬಾಹುಬಲಿಗೆ ಪ್ರಾಮುಖ್ಯ ಕೊಡುವ ಹೊಸ ಪರಿವರ್ತನೆ ಎಂದು ಪೂಜ್ಯರು ಈಗಾಗಲೇ ತಿಳಿಸಿದ್ದಾರೆ. ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದ ಹಿಂಬದಿಯಲ್ಲಿ ಪಂಚಮಹಾವೈಭವಕ್ಕಾಗಿ ವಿಶಾಲ ಸಭಾಂಗಣ ನಿರ್ಮಾಣಗೊಳ್ಳುತ್ತಿದೆ.
ಭರದಿಂದ ಸಾಗಿದೆ ಕಾಮಗಾರಿ
ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಶಾಶ್ವತ ಕೊಡುಗೆಯಾಗಿ ಲೋಕೋಪಯೋಗಿ ಇಲಾಖೆಯಿಂದ ಒಟ್ಟು
23.50 ಕೋ.ರೂ.ಗಳ ರಸ್ತೆ ಕಾಮಗಾರಿ ನಡೆಯುತ್ತಿದೆ. ಒಟ್ಟು 15 ಕೋ.ರೂ.ಗಳಲ್ಲಿ ನೇತ್ರಾವತಿ ಸ್ನಾನಘಟ್ಟ ದಿಂದ ಧರ್ಮಸ್ಥಳದ ಮುಖ್ಯದ್ವಾರದ ವರೆಗಿನ 2 ಕಿ.ಮೀ. ಚತುಷ್ಪಥ ರಸ್ತೆ ನಿರ್ಮಾಣ, 7.5 ಕೋ.ರೂ.ಗಳಲ್ಲಿ ಗಂಗೋತ್ರಿ ಕಟ್ಟಡದಿಂದ ಸ್ನಾನಘಟ್ಟವರೆಗಿನ 4 ಕಿ.ಮೀ.ರಸ್ತೆಯನ್ನು 7 ಮೀ. ಅಗಲಗೊಳಿಸುವುದು, ಬಸ್ ಡಿಪೋ ರಸ್ತೆ ವಿಸ್ತರಿಸುವುದು, 1 ಕೋ.ರೂ. ವೆಚ್ಚದಲ್ಲಿ ರತ್ನಗಿರಿ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.
ಮಹೋತ್ಸವ ಸಮಿತಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀ. ಹೆಗ್ಗಡೆ ಅವರ ನೇತೃತ್ವದಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಮಹೋತ್ಸವ ಸಮಿತಿಯ ಪ್ರಧಾನ ಸಂಚಾಲಕ ರಾಗಿ ಡಿ. ಸುರೇಂದ್ರ ಕುಮಾರ್ ಮತ್ತು ಸಂಚಾಲಕರಾಗಿ ಡಿ. ಹಷೇìಂದ್ರ ಕುಮಾರ್ ಕರ್ತವ್ಯ ದಲ್ಲಿ ತೊಡಗಿದ್ದಾರೆ. ರಾಜ್ಯ ಮಟ್ಟದ ಸಂಪರ್ಕ ಸಮಿತಿ, ಅಟ್ಟಳಿಗೆ ನಿರ್ಮಾಣ ಸಮಿತಿ, ಆರ್ಥಿಕ ಸಮಿತಿ, ಅಭಿಷೇಕ ಮತ್ತು ಅಟ್ಟಳಿಗೆ ಸಮಿತಿ, ಪೂಜಾ ಸಮಿತಿ, ಪಂಚಕಲ್ಯಾಣ ಸಮಿತಿ, ಸಾಂಸ್ಕೃತಿಕ ಸಮಿತಿ, ತ್ಯಾಗಿ ಸೇವಾ ಸಮಿತಿ, ಚಪ್ಪರ ಸಮಿತಿ, ಆಹಾರ ಸಮಿತಿ ಹೀಗೆ 26 ಸಮಿತಿಗಳನ್ನು ರಚಿಸಲಾಗಿದೆ..ರಾಜ್ಯ, ರಾಷ್ಟ್ರಮಟ್ಟದ ಗಣ್ಯರು ಪಾಲ್ಗೊಳ್ಳಲಿದ್ದು, ಅವರ ಕಾರ್ಯಕ್ರಮ ಜೋಡಣೆ, ಸ್ವಾಗತದ ಕುರಿತು ಈಗಾಗಲೇ ಹಲವು ಸುತ್ತಿನ ಚರ್ಚೆಗಳು ನಡೆದಿವೆ. ರಾಜ್ಯಾದ್ಯಂತ ವಿವಿಧ ಸಭೆ ನಡೆಸಿ, ಮಹಾ ಮಸ್ತಕಾಭಿಷೇಕ ಯಶಸ್ವಿಯಾಗಿ ನಡೆಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್