ಕಡಿಮೆಯಾದ ಮಳೆ ದ.ಕ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ
Team Udayavani, Aug 13, 2019, 5:01 AM IST
ಮಂಗಳೂರು/ಉಡುಪಿ: ಉಭಯ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಅವಾಂತರ ಸೃಷ್ಟಿಸಿದ್ದ ಮಳೆ ಸದ್ಯ ಶಾಂತವಾಗಿದೆ. ದ.ಕ. ಜಿಲ್ಲೆಯಲ್ಲಿ ಮಂಗಳವಾರವೂ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಂಗಳವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಸೋಮವಾರ ದ.ಕ. ಜಿಲ್ಲೆಯ ವಿವಿಧೆಡೆ ಆಗಾಗ ಮಳೆಯಾಗಿದೆ. ಮಂಗಳೂರಿನಲ್ಲಿ ಬಿಟ್ಟೂಬಿಟ್ಟು ಸಾಧಾರಣ ಮಳೆಯಾಗಿದೆ. ರಾತ್ರಿ ಭಾರೀ ಮಳೆ ಸುರಿದಿದೆ. ಮೂಡುಬಿದಿರೆಯಲ್ಲಿ ಹಗಲಿನಲ್ಲಿ ವಿರಳ ಮಳೆಯಾಗಿದ್ದು, ಸಂಜೆ ಸಾಧಾರಣ ಸುರಿದಿದೆ. ಬಂಟ್ವಾಳ, ಬೆಳ್ತಂಗಡಿಯಲ್ಲಿ ಕಡಿಮೆ ಮಳೆಯಾಗಿದೆ. ಪುತ್ತೂರಿನಲ್ಲಿ ರಾತ್ರಿ ಗಾಳಿ ಸಹಿತ ಭಾರೀ ಮಳೆಯಾಗಿದೆ. ವೇಣೂರಿನಲ್ಲಿ ಸಂಜೆ ಉತ್ತಮ ಮಳೆಯಾದರೆ, ಸುರತ್ಕಲ್, ಕಿನ್ನಿಗೋಳಿಯಲ್ಲಿ ಸ್ವಲ್ಪ ಮಳೆ ಬಂದಿದೆ.
ಉಡುಪಿ: ರಾತ್ರಿ ಉತ್ತಮ ಮಳೆ
ಉಡುಪಿ ಜಿಲ್ಲೆಯ ಹಲವೆಡೆ ಸೋಮವಾರ ಉತ್ತಮ ಮಳೆಯಾಗಿದೆ. ಬೆಳ್ಮಣ್, ಶಿರ್ವ, ಕಾಪು, ಪಡುಬಿದ್ರಿ, ಬ್ರಹ್ಮಾವರ, ಕೋಟೇಶ್ವರ, ಕೊಲ್ಲೂರು, ಕುಂದಾಪುರ ಭಾಗಗಳಲ್ಲಿ ಉತ್ತಮ ಮಳೆ ಸುರಿದಿದೆ. ಉಡುಪಿ ನಗರದಲ್ಲಿ ಮಧ್ಯಾಹ್ನದವರೆಗೆ ಬಿಸಿಲಿನ ವಾತಾವರಣ ಇತ್ತು. ಮಧ್ಯಾಹ್ನದ ಅನಂತರ ಮಳೆ ಸುರಿಯಲು ಆರಂಭಿಸಿತು. ರಾತ್ರಿ ಸುಮಾರು ಅರ್ಧ ತಾಸು ವರ್ಷಧಾರೆಯಾಗಿದೆ.
ಇಂದು ರಜೆ ಇಲ್ಲ
ನಿರಂತರ ಮಳೆಯಿಂದಾಗಿ ಕಳೆದ ಬುಧವಾರದಿಂದ ಐದು ದಿನಗಳ ಕಾಲ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಮಂಗಳವಾರ ರಜೆ ಇಲ್ಲ ಎಂದು ಉಭಯ ಜಿಲ್ಲಾಡಳಿತಗಳು ತಿಳಿಸಿವೆ.