ಅಶ್ಲೀಲ ದೃಶ್ಯ ಪ್ರಸಾರ ನಿಯಂತ್ರಣಕ್ಕೆ ಆಗ್ರಹ
Team Udayavani, Dec 31, 2019, 6:39 AM IST
ಮಂಗಳೂರು: ಮಹಿಳೆಯರನ್ನು ಪೂಜ್ಯ ಭಾವನೆಯಿಂದ ನೋಡುವ ಹಿಂದೂ ಸಮಾಜದ ಮೌಲ್ಯಗಳ ಮೇಲೆ ಘಾಸಿಯಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಲು ಅಶ್ಲೀಲ ಜಾಲತಾಣಗಳು, ಮಹಿಳೆಯರನ್ನು ಸರಕಾಗಿ ಬಿಂಬಿಸುವ ಸಿನೆಮಾ, ಜಾಹೀರಾತುಗಳು ಕೂಡ ಕಾರಣವಾಗಿದ್ದು ಅವುಗಳ ನಿಯಂತ್ರಣಕ್ಕೆ ಕಠಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರ ವನ್ನು ಆಗ್ರಹಿಸಲು ವಿಶ್ವ ಹಿಂದೂ ಪರಿಷತ್ ನಿರ್ಣಯ ಕೈಗೊಂಡಿದೆ.
ಮಂಗಳೂರಿನ ಸಂಘನಿಕೇತನದಲ್ಲಿ ಜರಗಿದ ವಿಶ್ವಹಿಂದೂ ಪರಿಷತ್ನ ಕೇಂದ್ರೀಯ ವಿಶ್ವಸ್ತ ಮಂಡಳಿ ಮತ್ತು ಪ್ರಬಂಧ ಸಮಿತಿಯ ಸಂಯುಕ್ತ ಬೈಠಕ್ನ ಸಮಾರೋಪದ ಅನಂತರ ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿನ್ ಪರಾಂಡೆ ಅವರು ಬೈಠಕ್ನ ಪ್ರಮುಖ ನಿರ್ಣಯಗಳನ್ನು ತಿಳಿಸಿದರು.
ಮಹಿಳೆಯರನ್ನು ಅಶ್ಲೀಲವಾಗಿ ತೋರಿಸುವ ಜಾಲತಾಣಗಳನ್ನು ಸ್ಥಗಿತಗೊಳಿಸಬೇಕು. ಮಹಿಳೆಯನ್ನು ಮಾರಾಟದ ಸರಕಾಗಿ ಬಿಂಬಿಸುವ ಜಾಹೀರಾತು, ಸಿನೆಮಾ, ಇತರ ಮಾಧ್ಯಮ ಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳ ಬೇಕು. ಈ ಬಗ್ಗೆ ಶೀಘ್ರದಲ್ಲೇ ಕೇಂದ್ರ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗು ವುದು. ಅಲ್ಲದೆ ವಿಎಚ್ಪಿಯ ಕಾರ್ಯಕರ್ತೆಯರ ಮೂಲಕವೂ ಸಮಾಜದಲ್ಲಿ ಜಾಗೃತಿ
ಮೂಡಿಸ ಲಾಗುವುದು ಎಂದು ಪರಾಂಡೆ ಹೇಳಿದರು.
ವಿಎಚ್ಪಿ ಚಟುವಟಿಕೆ ವಿಸ್ತರಣೆ
2024ಕ್ಕೆ ವಿಹಿಂಪ 60 ವರ್ಷಗಳನ್ನು ಪೂರೈಸಲಿದೆ. ಪ್ರಸ್ತುತ ಅಮೆರಿಕ, ಆಸ್ಟೇಲಿಯಾಗಳನ್ನೂ ಒಳಗೊಂಡಂತೆ 29 ದೇಶಗಳಲ್ಲಿ ವಿಹಿಂಪ ಶಾಖೆಗಳಿವೆ. 60 ಸಾವಿರ ಗ್ರಾಮಗಳಲ್ಲಿ ಒಂದು ಲಕ್ಷ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಇದನ್ನು ಮತ್ತಷ್ಟು ಪ್ರದೇಶಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಮತಾಂತರ, ಹಿಂದೂ ಯುವತಿಯರ ಅಪರಹಣ, ಗೋಹತ್ಯೆ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದೆ ಎಂದವರು ವಿವರಿಸಿದರು.
ಪೌರತ್ವ ಕಾಯಿದೆಗೆ ಬೆಂಬಲ
ಪೌರತ್ವ (ತಿದ್ದುಪಡಿ) ಕಾಯಿದೆ ಮುಸ್ಲಿಮರ ವಿರುದ್ಧ ಇಲ್ಲ. ಇದು ಯಾವುದೇ ರೀತಿಯ ತಾರತಮ್ಯ ಮಾಡುವುದಿಲ್ಲ. ಪೌರತ್ವ ಕಾಯಿದೆಯ ಜಾರಿಗಾಗಿ ಕೇಂದ್ರ ಸರಕಾರ ಕೋರುವ ಯಾವುದೇ ಸಹಕಾರ ನೀಡಲು ವಿಹಿಂಪ ಸಿದ್ಧವಿದೆ. ಕಾಯಿದೆ ಕುರಿತು ಅಪಪ್ರಚಾರದಿಂದ ಪ್ರತಿಭಟನೆಗಳು ನಡೆದಿವೆ. ಪ್ರತಿಭಟನೆ ನೆಪದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಗೊಳಿಸಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಆಂಧ್ರ ಸರಕಾರದ ವಿರುದ್ಧ ಪ್ರತಿಭಟನೆ
ದೇವಸ್ಥಾನಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಭೂಮಿಯನ್ನು ಇತರರಿಗೆ ಹಂಚುವುದು, ಹಿಂದೂ ಹಬ್ಬಗಳ ಸಂದರ್ಭ ಬಸ್ ದರದಲ್ಲಿ ಏರಿಕೆ ಮಾಡುವುದು, ಇತರ ಧರ್ಮಗಳ ಹಬ್ಬಗಳ ಸಂದರ್ಭ ಉಚಿತವಾಗಿ ಬಸ್ಗಳನ್ನು ಓಡಿಸುವುದು, ತಿರುಪತಿ ದೇಗುಲದಲ್ಲಿ ನಿಯಮ ಬಾಹಿರವಾಗಿ ಹಿಂದೂಯೇತರ ಅಧಿಕಾರಿ, ಸಿಬಂದಿಯನ್ನು ನೇಮಿಸಿರುವುದು ಮೊದಲಾದ ಹಿಂದೂ ವಿರೋಧಿ ಕ್ರಮಗಳನ್ನು ತೆಗೆದುಕೊಂಡಿರುವ ಆಂಧ್ರಪ್ರದೇಶ ಸರಕಾರದ ವಿರುದ್ಧ ದೇಶದ ವಿವಿಧೆಡೆ ಪ್ರತಿಭಟನೆ ನಡೆಸಲಾಗುವುದು. ಇದಕ್ಕೂ ಮೊದಲು ಈ ಬಗ್ಗೆ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದವರು ತಿಳಿಸಿದರು.
ಗ್ರಾಮಗಳಲ್ಲಿ ರಾಮೋತ್ಸವ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಮುಂದಿನ ರಾಮನವಮಿ ಸಂದರ್ಭ ದೇಶದ ಎಲ್ಲ ಹಳ್ಳಿಗಳಲ್ಲಿಯೂ ರಥಯಾತ್ರೆ ಹಾಗೂ ವಿವಿಧ ಕಾರ್ಯಕ್ರಮಗಳನ್ನೊಳಗೊಂಡ ರಾಮೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ಪರಾಂಡೆ ತಿಳಿಸಿದರು.
ಮುಂದಿನ ಬೈಠಕ್ ಮಧ್ಯಪ್ರದೇಶದಲ್ಲಿ
ಮುಂದಿನ ಬೈಠಕ್ ಜೂನ್ನಲ್ಲಿ ಮಧ್ಯಪ್ರದೇಶದಲ್ಲಿ ನಡೆಯಲಿದೆ ಎಂದು ತಿಳಿಸಿದರು. ವಿಹಿಂಪ ದಕ್ಷಿಣ ಕರ್ನಾಟಕ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ