ನರಿಕೊಂಬು: ಪೊಯಿತ್ತಾಜೆ-ಕಲ್ಯಾರು ಸಂಪರ್ಕ ರಸ್ತೆ ಕಾಯಕಲ್ಪ ಅಗತ್ಯ
Team Udayavani, May 20, 2018, 12:55 PM IST
ಬಂಟ್ವಾಳ : ನರಿಕೊಂಬು ಗ್ರಾಮದ ಪೊಯಿತ್ತಾಜೆ – ಕಲ್ಯಾರು ಸಂಪರ್ಕ ರಸ್ತೆಗೆ 2 ದಶಕಗಳ ಹಿಂದೆ ಡಾಮರು ಹಾಕಲಾಗಿತ್ತು. ಪ್ರಸ್ತುತ ರಸ್ತೆ ಸ್ಥಿತಿ ಶೋಚನೀಯವಾಗಿದ್ದು, ಸೂಕ್ತ ಕಾಯಕಲ್ಪ ಬೇಕಾಗಿದೆ.ಸುಮಾರು 3 ಕಿ.ಮೀ. ಉದ್ದದ ರಸ್ತೆಗೆ ಅಂದು ಹಾಕಿದ್ದ ಡಾಮರು ಎದ್ದು ಹೋಗಿದ್ದು, ಅಲ್ಲಲ್ಲಿ ಹೊಂಡ ಉಂಟಾಗಿ ವಾಹನ ಸಂಚಾರ ಜತೆಗೆ ನಡೆದು ಹೋಗುವುದಕ್ಕೂ ಸಮಸ್ಯೆ ಉಂಟಾಗಿದೆ. ಸ್ಥಳೀಯರು ಅನೇಕ ಸಂದರ್ಭಗಳಲ್ಲಿ ಮಣ್ಣು ಹಾಕಿ ದುರಸ್ತಿ ಮಾಡಿದ್ದಾರೆ.
ಇಲ್ಲಿ ಸೀಮಿತ ವಾಹನಗಳ ಓಡಾಟ ಇರುವುದರಿಂದ ಮತ್ತು ಕೆಲವೇ ಲಘು ವಾಹನ ಹಾಗೂ ದ್ವಿಚಕ್ರ ವಾಹನಗಳು ಓಡಾಡುವುದರಿಂದ ರಸ್ತೆಯನ್ನು ಒಮ್ಮೆ ದುರಸ್ತಿ ಮಾಡಿದರೆ ಮುಂದಕ್ಕೆ ದೀರ್ಘ ಅವಧಿಗೆ ಸಮಸ್ಯೆ ಉಂಟಾಗುವುದಿಲ್ಲ. ಕಳೆದ ಜನವರಿಯಲ್ಲಿ ಕರ್ಬೆಟ್ಟು, ಅಂತರ, ಬಿಕ್ರೋಡಿ, ಬೋಳಂತೂರು, ಕೇದಿಗೆ, ಸಜಂಕ್ಪಲ್ಕೆ, ನಾಟಿಯಾಗಿ 6 ಕೋಟಿ ರೂ. ವೆಚ್ಚದ ಕಾಮಗಾರಿಯು ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರ ಸುಪರ್ದಿಯಲ್ಲಿ ನಡೆದಿತ್ತು. ಸುಮಾರು 6.5 ಕಿ.ಮೀ. ರಸ್ತೆಯ ಸಂಪೂರ್ಣ ಡಾಮರು ಕಾಮಗಾರಿ ಜತೆಗೆ ವಿಸ್ತರಣೆಯ ಕೆಲಸವೂ ಆಗಿತ್ತು.
ಇದೇ ರಸ್ತೆಯ ಕವಲು ದಾರಿ ಪೊಯಿತ್ತಾಜೆ-ಕಲ್ಯಾರು ಸಂಪರ್ಕ ರಸ್ತೆಗೆ ಅನುದಾನ ನೀಡುವ ಭರವಸೆ ಮಾತ್ರವಲ್ಲ ಕಾಮಗಾರಿ ಆಗುವ ಹಂತದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಕಾರಣಕ್ಕೆ ಸದ್ರಿ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ವಂಚಿತ ಆಯಿತು.
ಸರ್ವಋತು ರಸ್ತೆಯಾಗಲಿ
ಈ ರಸ್ತೆ ಸಂಪರ್ಕದಲ್ಲಿ 67 ಮನೆಗಳು, 180 ಜನಸಂಖ್ಯೆ ಹೊಂದಿದೆ. ಅಡಿಕೆ, ತೆಂಗು, ಬಾಳೆ, ತರಕಾರಿ ಕೃಷಿಕರಿಗೆ
ಸಂಪರ್ಕ ರಸ್ತೆ ಇದಾಗಿದೆ. ನೂತನ ಶಾಸಕರು ಈ ರಸ್ತೆ ಬಗ್ಗೆ ಗಮನ ಹರಿಸುವಂತಾಗಬೇಕು. ಸರ್ವ ಋತು ರಸ್ತೆಯಾಗಿ ಅಭಿವೃದ್ಧಿ ಮಾಡಬೇಕು. ಕೃಷಿಕರು ವಾಸ್ತವ್ಯ ಹೊಂದಿರುವ ಈ ಪ್ರದೇಶಕ್ಕೆ ಆದ್ಯತೆ ಸಿಗುವಂತಾಗಬೇಕು.
ಶೀಘ್ರ ಕ್ರಮ
ರಸ್ತೆ ಸಮಸ್ಯೆ ನಮ್ಮ ಗಮನದಲ್ಲಿದೆ. ಅದರ ಅಭಿವೃದ್ಧಿಗೆ ಸೂಕ್ತ ಕಾರ್ಯ ಯೋಜನೆಯನ್ನೂ ರೂಪಿಸಲಾಗುತ್ತಿದೆ. ನರಿಕೊಂಬು
ಗ್ರಾಮದ ಪೊಯಿತ್ತಾಜೆ- ಕಲ್ಯಾರು ಸಂಪರ್ಕ ರಸ್ತೆಗೆ ಗ್ರಾಮ ಪಂಚಾಯತ್ ಉದ್ಯೋಗ ಖಾತರಿ ಯೋಜನೆಯಲ್ಲಿ ನಿರ್ದಿಷ್ಟ ಉದ್ದಕ್ಕೆ ಕಾಮಗಾರಿ ನಿರ್ವಹಿಸಲು ಅವಕಾಶವಿದೆ. ಅದನ್ನು ಇಲ್ಲಿನ ರಸ್ತೆಯನ್ನು ಈ ಯೋಜನೆಯಲ್ಲಿ ಅಳವಡಿಸಲು ಕ್ರಮ ಮಾಡಲಾಗುವುದು.
– ಯಶೋಧರ ಕರ್ಬೆಟ್ಟು
ಅಧ್ಯಕ್ಷರು, ನರಿಕೊಂಬು ಗ್ರಾ.ಪಂ.