ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ಕೇಂದ್ರಗಳಿಗೆ ದಾಳಿ
Team Udayavani, Dec 17, 2018, 11:21 AM IST
ಮಂಗಳೂರು: ನಗರದಲ್ಲಿ ಗ್ಯಾಸ್ ಸಿಲಿಂಡರ್ಗಳಿಗೆ ಅಕ್ರಮವಾಗಿ ರಿಫಿಲ್ಲಿಂಗ್ ಮಾಡುತ್ತಿದ್ದ ಎರಡು ಕೇಂದ್ರಗಳಿಗೆ ಸಿಸಿಬಿ ಮತ್ತು ಪಾಂಡೇಶ್ವರ ಪೊಲೀಸರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳ ಜತೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ 153 ಗ್ಯಾಸ್ ಸಿಲಿಂಡರ್ ಸಹಿತ ಒಟ್ಟು 6,44,400 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ನಗರದ ಬೋಳಾರ ಮಾರಿಗುಡಿ ಭಂಡಾರ ಮನೆಯ ಬಳಿಯ ಪ್ರಶಾಂತ್ (42) ಮತ್ತು ಬಂಟ್ವಾಳದ ಬಿ.ಸಿ. ರೋಡ್ ಕೈಕಂಬ ಬಳಿಯ ಮಡ್ವ ಮನೆಯ ಸದಾಶಿವ ರೈ (47) ಬಂಧಿತರು. ಹರೀಶ್ ಮತ್ತು ಕೂಸಪ್ಪ ದಾಳಿ ಸಂದರ್ಭ ಪರಾರಿಯಾಗಿದ್ದಾರೆ.
ಬೋಳಾರ ಹಾಗೂ ಜಪ್ಪು ಮಾರ್ಕೆಟ್ ಪರಿಸರದಲ್ಲಿ ಸರಕಾರಿ ಸಾಮ್ಯದ ಕಂಪೆನಿಗಳಿಂದ ಪೂರೈಕೆಯಾಗುವ ಗೃಹ ಬಳಕೆಯ ಆಡುಗೆ ಅನಿಲ ಸಿಲಿಂಡರ್ಗಳಿಂದ ಇತರ ಖಾಲಿ ಸಿಲಿಂಡರ್ಗಳಿಗೆ ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಡಿ. 15ರಂದು ದಾಳಿ ನಡೆಸಿದರು.
ವಶಕ್ಕೆ ಪಡೆದ ಸೊತ್ತು ಪಾಂಡೇಶ್ವರ ಪೊಲೀಸರಿಗೆ ಹಸ್ತಾಂತರ
ಎರಡೂ ಕಡೆ ಒಟ್ಟು 17 ಗ್ಯಾಸ್ ತುಂಬಿದ ಸಿಲಿಂಡರ್ ಮತ್ತು 136 ಖಾಲಿ ಸಿಲಿಂಡರ್ಗಳು, ಗ್ಯಾಸ್ ರಿಫಿಲ್ಲಿಂಗ್ ಮಾಡುವ ಪಂಪ್ ಹಾಗೂ ಇತರ ಪರಿಕರಗಳು, ಒಂದು ಪಿಕಪ್ ಜೀಪ್ ಮತ್ತು ಗೂಡ್ಸ್ ಟೆಂಪೋ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ಕ್ರಮಕ್ಕಾಗಿ ಅವುಗಳನ್ನು ಪಾಂಡೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಆಯುಕ್ತ ಟಿ. ಆರ್ ಸುರೇಶ್ ಅವರ ನಿರ್ದೇಶನ ಹಾಗೂ ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಶಾಂತಾರಾಮ, ಪಿಎಸ್ಐಗಳಾದ ಶ್ಯಾಮ್ ಸುಂದರ್ ಮತ್ತು ಕಬ್ಟಾಳ್ ರಾಜ್ ಹಾಗೂ ಸಿಬಂದಿ ಮತ್ತು ಪಾಂಡೇಶ್ವರ ಠಾಣೆಯ ಪಿಎಸ್ಐಗಳಾದ ರಾಜೇಂದ್ರ, ಮಂಜುಳಾ ಮತ್ತು ಸಿಬಂದಿ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಇನ್ಸ್ಪೆಕ್ಟರ್ ಕಮಲಾ ಅವರು ಭಾಗವಹಿಸಿದ್ದರು.