ಕೊಕ್ಕಡ: ರಸ್ತೆ ಅಪಘಾತ; ಗಾಯಾಳುಗಳನ್ನು ಸಾಗಿಸಲು ಬಂದ ಅಂಬ್ಯುಲೆನ್ಸ್ ಚರಂಡಿಗೆ
ಧರ್ಮಸ್ಥಳ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ನಡೆದ ಘಟನೆ
Team Udayavani, May 6, 2019, 12:12 PM IST
ನೆಲ್ಯಾಡಿ: ಧರ್ಮಸ್ಥಳ – ಸುಬ್ರಹ್ಮಣ್ಯ ನಡುವಿನ ರಾಜ್ಯ ಹೆದ್ದಾರಿಯ ಕೊಕ್ಕಡ ಪರ್ಪಿಕಲ್ಲು ಎಂಬಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಸೋಮವಾರ ಬೆಳಗ್ಗೆ 10.30 ರ ಸುಮಾರಿಗೆ ನಡೆದಿದೆ. ಅಪಘಾತದಲ್ಲಿ ಸುಮಾರು ಎಂಟಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಧರ್ಮಸ್ಥಳದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ಪರ್ಪಿಕಲ್ ಕಾಪಿನಬಾಗಿಲು ಎಂಬಲ್ಲಿ ಅಲಂಕಾರಿನಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಸೆಲಾರಿಯೋ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಸೆಲಾರಿಯೋ ಕಾರಿನಲ್ಲಿದ್ದ ಯಮುನಾ ( 40 ವರ್ಷ), ಧನ್ಯಾ (16 ವರ್ಷ) ಮೋಕ್ಷಿ ( 19 ವರ್ಷ), ಮುತ್ತಪ್ಪ (45 ವರ್ಷ), ಮೋಹಿನಿ (43 ವರ್ಷ) ಎಂದು ಗುರುತಿಸಲಾಗಿದೆ. ಆದರೆ ಧರ್ಮಸ್ಥಳದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿದ್ದವರ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಎಲ್ಲಾ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.
ಅಂಬ್ಯುಲೆನ್ಸ್ ಚರಂಡಿಗೆ: ಈ ನಡುವೆ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬ್ಯಲೆನ್ಸ್ ಕೂಡಾ ಕೊಕ್ಕಡ ದ್ವಾರದ ಸಮೀಪ ಚರಂಡಿಗೆ ಬಿದ್ದಿದ್ದು ಆಂಬ್ಯುಲೆನ್ಸ್ ಚಾಲಕ ನವೀನ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಧಾವಂತದಲ್ಲಿ ವೇಗವಾಗಿ ಸಾಗುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚರಂಡಿಗೆ ಬಿದ್ದಿದೆ. ಈ ವೇಳೆ ಅಲ್ಲೇ ನಿಂತಿದ್ದ ಸ್ಕೂಟರ್ ಸವಾರರೊಬ್ಬರು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ .
ನೆಲ್ಯಾಡಿ ಹೊರಠಾಣಾ ಪೊಲೀಸರು ಮತ್ತು ಹೈವೇ ಪ್ಯಾಟ್ರೋಲ್ ಪೊಲೀಸರು ಅಪಘಾತ ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.