ದರೋಡೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
Team Udayavani, Mar 11, 2017, 10:52 AM IST
ಮಂಗಳೂರು: ವ್ಯಕ್ತಿಯೊಬ್ಬರನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 4 ಮಂದಿ ಪ್ರಮುಖ ಆರೋಪಿಗಳನ್ನು ಮಂಗಳೂರು ಸಿಸಿಬಿ ಹಾಗೂ ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಪೆರ್ಡೂರಿನ ತೌಸಿಫ್ ಯಾನೆ ಮುನ್ನ ಯಾನೆ ಶೈಲು(25), ಮಂಜನಾಡಿಯ ಮೊಹಮ್ಮದ್ ಅಬ್ದುಲ್ ಫಯಾನ್(19), ಉಳ್ಳಾಲ ಧರ್ಮನಗರದ ಅಬ್ದುಲ್ ಸಫಾÌನ್(22), ಬಜಾಲ್ಪಡು³ ನಿವಾಸಿ ಮೊಹಮ್ಮದ್ ಅರೀಫ್(31) ಬಂಧಿತರು.
ಆರೋಪಿಗಳನ್ನು ದೇರಳಕಟ್ಟೆ ಬಳಿಯ ನಾಟೆಕಲ್ನಿಂದ ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದರು. ಮಾ. 4ರಂದು ರಾತ್ರಿ ಕುಲಶೇಖರ ಬಳಿಯ ಲಾನ್ಸಿ ಸಿರಿಲ್ ಲೋಬೊ ಅವರು ಕೆಪಿಟಿ ಬಳಿ ತನ್ನ ದ್ವಿಚಕ್ರ ವಾಹನದೊಂದಿಗೆ ನಿಂತಿದ್ದ ಸಂದರ್ಭ ಅಲ್ಲಿಗೆ ಮಾರುತಿ ಆಲ್ಟೋ ಕಾರಿನಲ್ಲಿ ಬಂದ 5 ಮಂದಿ ಹಲ್ಲೆ ನಡೆಸಿ ಅವರ ಮೊಬೈಲ್ ಫೋನ್ ಹಾಗೂ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳೆಲ್ಲ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿ ಯಾಗಿದ್ದು, ಈ ಪೈಕಿ ತೌಸಿಫ್ ವಿರುದ್ಧ 2013ರಲ್ಲಿ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈತ ಕಳೆದ 15 ದಿನಗಳ ಹಿಂದೆಯಷ್ಟೆ ಜಾಮೀನಿನ ಮೇಲೆ ಹೊರಬಂದಿದ್ದ.ಮೊಹಮ್ಮದ್ ಅಬ್ದುಲ್ ಫಯಾನ್ ವಿರುದ್ಧ ಈ ಹಿಂದೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ಹಾಗೂ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅಂಗಡಿಯೊಂದಕ್ಕೆ ಬೆಂಕಿ ಕೊಟ್ಟ ಪ್ರಕರಣ ದಾಖಲಾಗಿದೆ.
ಅಬ್ದುಲ್ ಸಫಾÌನ್ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆ ಯಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ. ಮೊಹಮ್ಮದ್ ಅರೀಫ್ ವಿರುದ್ಧ ಮಂಗಳೂರು ದಕ್ಷಿಣ, ಮಂಗಳೂರು ಪೂರ್ವ, ಬರ್ಕೆ ಪೊಲೀಸ್ ಠಾಣೆಗಳಲ್ಲಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಪಟ್ಟಂತೆ 3 ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಇನ್ಸ್ಪೆಕ್ಟರ್ ಸುನೀಲ್ ವೈ ನಾಯ್ಕ ನೇತೃತ್ವದ ತಂಡ ಮತ್ತು ಮಂಗಳೂರು ಪೂರ್ವ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಮಾರುತಿ ಜಿ ನಾಯಕ್ ನೇತೃತ್ವದ ತಂಡ ಭಾಗವಹಿಸಿತ್ತು.