ದೈವಗಳ ನರ್ತನಕ್ಕೆ ಸಾಹೇಬರ ವಾದ್ಯ!
Team Udayavani, Mar 16, 2019, 5:58 AM IST
ಆಲಂಕಾರು : ಪರಶುರಾಮನ ಸೃಷ್ಟಿಯ ನಾಡೆಂದು ಪ್ರಸಿದ್ಧಿ ಪಡೆದ ಕರಾವಳಿ ದೈವಾರಾಧನೆ, ನಾಗಾರಾಧನೆಯ ಪ್ರಮುಖ ಧಾರ್ಮಿಕ ಕೇಂದ್ರ. ಸಾಮರಸ್ಯದ ಬದುಕು ಕರಾವಳಿ ಜನರ ಉನ್ನತ ಆದರ್ಶವೂ ಆಗಿದೆ. ಅದಕ್ಕೆ ಪೂರಕವೆನ್ನುವಂತೆ ಹಿಂದೂಗಳ ದೈವಗಳ ನೇಮಕ್ಕೆ ಪೆರಾಬೆ ಗ್ರಾಮದ ಚಾಮೆತ್ತಡ್ಕ ಪಿ.ಆರ್. ಮಹಮ್ಮದ್ ಸಾಹೇಬ್ (61) ಕುಟುಂಬ ನಾಲ್ಕೂವರೆ ದಶಕಗಳಿಂದ ವಾದ್ಯ, ಬ್ಯಾಂಡ್, ವಾಲಗ ನುಡಿಸುತ್ತಿದೆ.
ಚಾಮೆತ್ತಡ್ಕ ಪಿ.ಆರ್. ಮಹಮ್ಮದ್ ಸಾಹೇಬ್ ನೇತೃತ್ವದ ವಾದ್ಯ ತಂಡ ಜನಪ್ರಿಯವಾಗಿದೆ. ಹಿಂದೂಗಳ ದೈವಾರಾಧನೆಯ ಕುರಿತು ವಿಸ್ತಾರವಾದ ಮಾಹಿತಿ ಅವರಿಗಿದೆ. ಸರ್ವ ಧರ್ಮಗಳ ಪ್ರೀತಿಯ ವ್ಯಕ್ತಿ ಅವರು. ತಮ್ಮ ಸಹೋದರರನ್ನು ಸೇರಿಸಿಕೊಂಡೇ ಬ್ಯಾಂಡ್ ವಾಲಗದ ತಂಡವನ್ನು ಆರಂಭಿಸಿದ್ದರು. ಇತ್ತೀಚಿನ ದಿನಗಳಲ್ಲಿ ಸಹೋದರರು ಬದಲಿ ಉದ್ಯೋಗದ ಮೊರೆ ಹೋಗಿರುವ ಕಾರಣ ಬೇರೆಯವರೊಂದಿಗೆ ಸೇರಿಸಿಕೊಂಡು ಪಿ.ಆರ್. ಮಹಮ್ಮದ್ ವಾಲಗ ನುಡಿಸುತ್ತಿದ್ದಾರೆ.
ಲಕ್ಷದೀಪೋತ್ಸವ ದಾರಿದೀಪ
45 ವರ್ಷಗಳಿಂದ ವಾದ್ಯ ಸೇವೆ ನೀಡುತ್ತಿರುವ ಪಿ.ಆರ್. ಮಹಮ್ಮದ್ ಸಾಹೇಬ್ ಅವರಿಗೆ ಧರ್ಮಸ್ಥಳದ ಲಕ್ಷದೀಪೋತ್ಸವ ದಾರಿದೀಪವಾಗಿದೆ. ಸಾಹೇಬರು ತಮ್ಮ 6ನೇ ವಯಸ್ಸಿನಿಂದ ವಾದ್ಯದ ಬಗ್ಗೆ ಒಲವು ಮೂಡಿಸಿಕೊಂಡಿದ್ದರು. ಬಡತನದ ನಡುವೆಯೂ 6ನೇ ತರಗತಿ ವಿದ್ಯಾಭ್ಯಾಸ ಪಡೆದಿದ್ದ ಸಾಹೇಬರಿಗೆ ಆನಂತರದಲ್ಲಿ ವಾದ್ಯವೇ ಸರ್ವಸ್ವವಾಯಿತು. ಚಿಕ್ಕಂದಿನಿಂದಲೇ ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ವರ್ಷಂಪ್ರತಿ ತನ್ನ ಸಂಬಂಧಿಕರೊಂದಿಗೆ ಭೇಟಿ ನೀಡುತ್ತಿದ್ದ ಸಾಹೇಬರಿಗೆ ಅಲ್ಲಿ ವಾದ್ಯಗಾರರು ನುಡಿಸುವ ಸ್ವರಗಳೇ ಪ್ರೇರಣೆಯಾದವು. ಮುಂದಿನ ದಿನಗಳಲ್ಲಿ ತನ್ನ ಸಂಬಂಧಿಕರೊಂದಿಗೆ ವಾದ್ಯ ನುಡಿಸುವುದನ್ನು ಕಲಿತು, ಅದನ್ನೇ ಜೀವನೋಪಾಯವಾಗಿಯೂ ಮಾಡಿಕೊಂಡರು.
ಸೇವೆಯಲ್ಲಿ ಸಾರ್ಥಕತೆ ಇದೆ
ದೈವಗಳ ನರ್ತನೋತ್ಸವ ಸ್ಥಳದಲ್ಲಿ ದೈವದ ಕೆಲಸದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದನ್ನು ಅವರಿಗೆ ತಿಳಿಸುತ್ತೇನೆ. ತಪ್ಪಾದ ಬಗ್ಗೆ ಮಾಹಿತಿ ನೀಡಿ, ಹಿಂದೂ ಸಂಪ್ರದಾಯದಂತೆ ದೈವಗಳ ನರ್ತನೋತ್ಸವ ಹೇಗೆ ನಡೆಯಬೇಕೋ ಅದರ ಬಗ್ಗೆ ತಿಳಿಹೇಳುತ್ತೇನೆ. ನನ್ನ ಸಮುದಾಯದ ಬಗ್ಗೆ ಯಾರೂ ಹೀಯಾಳಿಸಿ ಮಾತನಾಡಿಲ್ಲ. ಸಹೋದರತೆಯಿಂದ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುತ್ತೇನೆ. ಹಿಂದೆ ಸಂಬಳ ಕಡಿಮೆ ಇತ್ತು. ಇಂದು ಕೈತುಂಬ ಕೊಡುತ್ತಾರೆ. ಪಡೆದ ಸಂಬಳಕ್ಕೆ ಗೌರವಯುತ ಸೇವೆಯನ್ನು ನೀಡಿದ್ದೇನೆ ಎನ್ನುವ ಸಾರ್ಥಕತೆ ನನಗಿದೆ.
– ಪಿ.ಆರ್. ಮಹಮ್ಮದ್ ಸಾಹೇಬ್,
ವಾದ್ಯಗಾರ
ಬರಲಿದೆಯೇ ಡಿಜಿಟಲ್ ವಾದ್ಯ!?
ವಾದ್ಯ ನುಡಿಸುವ ವೃತ್ತಿಯನ್ನು ಮುಂದುವರಿಸಲು ಯಾವ ಸಮುದಾಯವೂ ಮುಂದಾಗುತ್ತಿಲ್ಲ. ಜನತೆ ದೈವ – ದೈವರ ಆರಾಧನೆ ಮಾಡುತ್ತಾರೆ. ಈ ಹಿಂದೆ ಮನೆ ಮಂದಿಯೇ ಸೇರಿಕೊಂಡು ದೈವಗಳ ನರ್ತನ ಸೇವೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಈಗ ದೈವಗಳ ಆಭರಣದಿಂದ ಹಿಡಿದು ಪಾತ್ರಿಗಳ ವರೆಗೆ, ದೈವಗಳ ನರ್ತನ ಸೇವೆಗೆ ಬೇಕಾದ ಎಲ್ಲ ಪರಿಕರಗಳ ಸಂಗ್ರಹದ ಜವಾಬ್ದಾರಿಯನ್ನು ದುಬಾರಿ ಮೊತ್ತಕ್ಕೆ ವಹಿಸಿಕೊಡುತ್ತಾರೆ. ಸಮಯಕ್ಕೆ ಸರಿಯಾಗಿ ನರ್ತನ ಸೇವೆಗೆ ಕುಟುಂಬಸ್ಥರು ಹಾಜರಾಗುತ್ತಿದ್ದಾರೆ. ಇನ್ನು ದೈವಾರಾಧನೆಗೂ ಡಿಜಿಟಲ್ ವಾದ್ಯಗಾರಿಕೆ ಬಂದರೂ ಅಚ್ಚರಿ ಅಲ್ಲ ಎಂದು ಆತಂಕದಿಂದಲೇ ಹೇಳುತ್ತಾರೆ, ಮಹಮ್ಮದ್ ಸಾಹೇಬ್.
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ