ಅಂಗನವಾಡಿ ಕೇಂದ್ರದ ಆವರಣಗೋಡೆ ನಿರ್ಮಾಣಕ್ಕೆ ಅನುದಾನ ನೀಡಿ:ಗ್ರಾಮಸ್ಥರು
Team Udayavani, Aug 10, 2018, 10:13 AM IST
ಪಡುಪಣಂಬೂರು: ಗ್ರಾಮದಲ್ಲಿನ ಪ್ರತೀ ಅಂಗನವಾಡಿ ಕೇಂದ್ರಕ್ಕೆ ಆವರಣ ಗೋಡೆ ನಿರ್ಮಿಸಲು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಅನುದಾನ ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ಪಡುಪಣಂಬೂರು ಗ್ರಾಮ ಪಂಚಾಯತ್ ಪ್ರಥಮ ಹಂತದ ನರೇಗಾ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.
ಗ್ರಾ. ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರು ಈ ಬಗ್ಗೆ ಪ್ರತಿಕ್ರಿಯಿಸಿ, ಅಂಗನವಾಡಿ ಕೇಂದ್ರಕ್ಕೆ ಮೂಲ ಸೌಕರ್ಯ ನೀಡಲು ಪಂ.ಗೆ ಅನುದಾನದ ಕೊರತೆ ಇದ್ದಲ್ಲಿ ಕನಿಷ್ಟ ನರೇಗಾ ಯೋಜನೆಯಲ್ಲಾದರೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದಾಗ ಪಂಚಾಯತ್ ಸದಸ್ಯರು ಬೆಂಬಲಿಸಿದರು. ಈ ಬಗ್ಗೆ ಸಾರ್ವತ್ರಿಕ ನಿರ್ಣಯ ಕೈಗೊಳ್ಳಲಾಯಿತು.
ಯೋಜನೆಯಲ್ಲಿನ ಕೂಲಿ ಇನ್ನಷ್ಟು ಹೆಚ್ಚಿಸಬೇಕು. ಕುಡಿಯುವ ನೀರಿನ ಬಾವಿಯ ದುರಸ್ಥಿ ಕಾರ್ಯಕ್ಕೆ ಅನುದಾನ, ಕಾಮಗಾರಿ ನಡೆಸುವಾಗ ಸಾಮಗ್ರಿಗಳ ಖರೀದಿಗೆ ವಿಳಂಬವಾಗುತ್ತದೆ ಎಂಬ ದೂರುಗಳು ಕೇಳಿ ಬಂತು. ಗ್ರಾಮಸ್ಥರಾದ ಸಾಹುಲ್ ಹಮೀದ್ ಕದಿಕೆ, ಸವಿತಾ ಶರತ್ ಬೆಳ್ಳಾಯರು, ಅಶೋಕ್ ಭಟ್ ಮಾತನಾಡಿದರು.
ಪಂಚಾಯತ್ ಅಧ್ಯಕ್ಷ ಮೋಹನ್ ದಾಸ್ ಮಾತನಾಡಿ, ಯೋಜನೆಯಲ್ಲಿರುವ ಈಗಿನ ಕೆಲವೊಂದು ಕಾಮಗಾರಿಗಳಿಗೆ ಅನುದಾನ ಸಾಕಾಗುವುದಿಲ್ಲ. ದನದ ಹಟ್ಟಿಗೆ ಹೆಚ್ಚುವರಿಯಾಗಿ ಹಾಗೂ ಯೋಜನೆಯ ನಾಮಫಲಕಕ್ಕೆ ಪ್ರತ್ಯೇಕ ಅನುದಾನ ನೀಡಬೇಕು. ಶ್ಮಶಾನ ಅಭಿವೃದ್ಧಿಗೆ ಇದರಿಂದ ಅನುದಾನ ನೀಡಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಶ್ಯಾಮಲಾ ಅಧ್ಯಕ್ಷತೆ ವಹಿಸಿ, ಸಭಾ ಕಲಾಪ ನಡೆಸಿಕೊಟ್ಟರು.
ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಸದಸ್ಯರಾದ ಉಮೇಶ್ ಪೂಜಾರಿ, ಹೇಮನಾಥ ಅಮೀನ್, ದಿನೇಶ್ ಕುಲಾಲ್, ಮಂಜುಳಾ, ಸಂಪಾವತಿ, ಪುಷ್ಪಾವತಿ, ಶ್ವೇತಾ, ಯೋಜನೆಯ ಎಂಜಿನಿಯರ್ ಅಜಿತ್, ರೇಖಾಮಣಿ ಉಪಸ್ಥಿತರಿದ್ದರು. ಪಂ.ಅಭಿವೃದ್ಧಿ ಅಧಿಕಾರಿ ಅನಿತಾ ಕ್ಯಾಥರಿನ್ ಸ್ವಾಗತಿಸಿ, ವರದಿ ವಾಚಿಸಿದರು. ಯೋಜನೆಯ ಅಶ್ವಿತಾ ನಿರೂಪಿಸಿದರು.
ಆಡಳಿತ ಉತ್ತಮ
ಗ್ರಾ.ಪಂ. ನರೇಗಾ ಯೋಜನೆಯ ಕಡತ ನಿರ್ವಹಣೆಯಲ್ಲಿ ಉತ್ತಮವಾಗಿದೆ. ಯೋಜನೆಗಳ ಬಗ್ಗೆ ಎಲ್ಲ ವಿಧದಲ್ಲೂ ಸ್ಪಷ್ಟವಾದ ದಾಖಲೆ ಇಟ್ಟುಕೊಂಡಿದೆ. ಒಂದೆರಡು ಯೋಜನೆಗಳ ಪೂರಕ ಮಾಹಿತಿಯ ಅಗತ್ಯತೆ ಇದೆ. ಒಟ್ಟು 19 ಲಕ್ಷ ರೂ. ಗಳ ಯೋಜನೆ ಈ ವರ್ಷದಲ್ಲಿ ನಡೆದಿದೆ.
– ಧನಲಕ್ಷ್ಮೀ, ಯೋಜನೆಯ
ತಾಲೂಕು ಸಂಯೋಜನಾಧಿಕಾರಿ