ಸಸಿಹಿತ್ಲು ಬೀಚ್ನಲ್ಲಿ ಮುಂದುವರಿದ ನದಿ ಕೊರೆತ
Team Udayavani, Apr 2, 2021, 4:00 AM IST
ಸಸಿಹಿತ್ಲು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದ ಸಸಿಹಿತ್ಲು ಮುಂಡ ಬೀಚ್ನ ಅವ್ಯವಸ್ಥೆ ಮುಂದುವರಿದಿದ್ದು, ಎರಡು ನದಿಗಳ ಸಂಗಮ ಪ್ರದೇಶದಲ್ಲಿ ನದಿ ಕೊರೆತ ಇನ್ನಷ್ಟು ತೀವ್ರಗೊಂಡಿದ್ದು ಎರಡು ಕಟ್ಟಡಗಳು ನೀರು ಪಾಲಾಗುವ ಸಾಧ್ಯತೆಯಿದೆ.
ನಂದಿನಿ ಮತ್ತು ಶಾಂಭವಿ ನದಿಯ ಸಂಗಮ ಪ್ರದೇಶದಲ್ಲಿ ನದಿ ಕೊರೆತ ಹೆಚ್ಚಾಗಿ ಬೀಚ್ನಲ್ಲಿನ ಬೃಹತ್ ಗಾಳಿ ಮರಗಳು ಧರಾಶಾಯಿಯಾಗಿದ್ದು, ನದಿ ಕೊರೆತ ಮುಂದುವರಿದು ಬಾಡಿಗೆ ಅಂಗಡಿಯ ಒಂದು ಭಾಗ ನೀರಿನ ಸೆಳೆತಕ್ಕೊಳಗಾಗಿ ಅದರ ಅಡಿಪಾಯ ಈಗಾಗಲೇ ನೀರಿಗೆ ಸೇರಿದೆ. ಇದೇ ರೀತಿ ನದಿ ಕೊರೆತ ಮುಂದುವರಿದಲ್ಲಿ ಒಂದೆರಡು ದಿನಗಳಲ್ಲಿ ಸಂಪೂರ್ಣವಾಗಿ ಅಂಗಡಿ ಕಟ್ಟಡ ನೇರವಾಗಿ ಸಮುದ್ರಕ್ಕೆ ಸೇರಲಿವೆ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ ಬೀಚ್ ಅಭಿವೃದ್ಧಿ ಸಮಿತಿಯ ಸುಸಜ್ಜಿತ ಕಟ್ಟಡವು ಈ ಹಿಂದೆ ಜೀವರಕ್ಷಕರಿಗೆ ಹಾಗೂ ಬೀಚ್ನ ಸಿಬಂದಿಗೆ ಅಶ್ರಯ ತಾಣವಾಗಿತ್ತು.
ಇದೀಗ ಅದೂ ನೀರಿಗೆ ಬೀಳುವ ಸ್ಥಿತಿಯಲ್ಲಿದೆ. ಈಗಲೂ ಎಚ್ಚರಗೊಳ್ಳದಿದ್ದಲ್ಲಿ ಈಗಾಗಲೇ ಸಮುದ್ರದ ಕೊರೆತಕ್ಕೆ ಹಾಕಿರುವ ಶಾಶ್ವತ ತಡೆಗೋಡೆಯ ಕಲ್ಲುಗಳೇ ಸಮುದ್ರವನ್ನು ಸೇರುವ ಅಪಾಯ ಕಂಡು ಬಂದಿದೆ. ಬೀಚ್ ಅಭಿವೃದ್ಧಿ ಸಮಿತಿ ಮೂಲಕ ನಿರ್ಮಾಣಗೊಂಡಿದ್ದ ಮೂರು ಅಂಗಡಿಗಳಲ್ಲಿ ಈಗಾಗಲೇ ಎರಡು ಅಂಗಡಿಗಳು ನೀರಿನ ಸೆಳೆತಕ್ಕೊಳಗಾಗಿ ನಷ್ಟ ಸಂಭವಿಸಿವೆ.
ಮೂರನೇ ಅಂಗಡಿಯೂ ಅಪಾಯ ದಲ್ಲಿದೆ. ಜತೆಗೆ ಅದರ ಪಕ್ಕದಲ್ಲಿಯೇ ಇರುವ ಸಾರ್ವಜನಿಕ ಶೌಚಾಲಯವು ಸಹ ನೀರಿಗೆ ಸೇರುವ ದಿನ ದೂರವಿಲ್ಲ ಎನ್ನುವ ಅತಂಕವನ್ನು ಸ್ಥಳೀಯ ಮೀನುಗಾರರು ವ್ಯಕ್ತಪಡಿಸುತ್ತಾರೆ.
ಸಾರ್ವಜನಿಕ ಶೌಚಾಲಯ ಬಂದ್ :
ಬೀಚ್ ನಿರ್ಮಾಣವಾದ ಅನಂತರ ಮಂಗಳೂರು ತಾ.ಪಂ.ನ ಅನುದಾನದಲ್ಲಿ ನಿರ್ಮಾಣವಾಗಿರುವ ಸಾರ್ವ ಜನಿಕ ಶೌಚಾಲಯಕ್ಕೆ ವರ್ಷದ ಹಿಂದೆ ಬೀಗ ಹಾಕಲಾಗಿದೆ. ಇದರ ಹೊರಗೆ ಇರುವ ಕೈ ತೊಳೆಯುವ ಬೇಸಿನ್ ಸಹಿತ ಶೌಚಾಲಯದ ಇನ್ನಿತರ ವಸ್ತುಗಳಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದು, ಇದರಿಂದ ಶೌಚಾಲಯವನ್ನು ಬಂದ್ ಮಾಡಲಾಗಿದೆ ಎನ್ನುತ್ತಾರೆ ಅದರ ಸ್ವತ್ಛತೆಯನ್ನು ಮಾಡುತ್ತಿದ್ದ ಸ್ಥಳೀಯ ನಿವಾಸಿ ದೇವಕಿ.
ಮಿನಿಸ್ಟರ್ಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ಬರ್ಪೆರ್.. ಕೋಟಿ ಕೋಟಿ ಯೋಜನೆ ಪರ್.. ಪೋಪೆರ್( ಬರ್ತಾರೆ.. ಹೇಳ್ತಾರೆ.. ಹೋಗ್ತಾರೆ) ಆದರೆ ಯಾರಲ್ಲೂ ಬೀಚ್ನ್ನು ಉಳಿಸುವ ಇಚ್ಛಾ ಶಕ್ತಿಯಿಲ್ಲ, ಇಲ್ಲಿ ಜೀವರಕ್ಷಕ ಪಡೆಗಳಿಲ್ಲ, ಪೊಲೀಸರು, ಹೋಂ ಗಾರ್ಡ್ ಗಳಿಲ್ಲ, ಪ್ರವಾಸಿಗರಿಗೆ ರಕ್ಷಣೆಯಿಲ್ಲ, ಬೀಚ್ನ ಸ್ವತ್ಛತೆ ಮಾ ಡುತ್ತಿರುವ ನನಗೆ 3ತಿಂಗಳಿನಿಂದ ಸಂಬಳವೂ ನೀಡಿಲ್ಲ.
-ದೇವಕಿ, ಸ್ಥಳೀಯ ನಿವಾಸಿ
ಬೀಚ್ನ ಅವ್ಯವಸ್ಥೆಯನ್ನು ಈಗಾಗಲೇ ಶಾಸಕ ಉಮಾನಾಥ ಕೋಟ್ಯಾನ್ ಅವರ ಗಮನಕ್ಕೆ ತರಲಾಗಿದೆ. ಪಕ್ಕದ ಹೆಜಮಾಡಿ ಕೋಡಿಯಲ್ಲಿ ನಿರ್ಮಾಣವಾಗಲಿರುವ ಜೆಟ್ಟಿಯ ಯೋಜನೆಗೆ ಪೂರಕವಾಗಿ ಮರವಂತೆ ಬೀಚ್ನಂತೆ 17 ಕೋಟಿ ರೂ. ವೆಚ್ಚದಲ್ಲಿ ಸಸಿಹಿತ್ಲು ಬೀಚ್ ಅನ್ನು ಅಭಿವೃದ್ಧಿ ಮಾಡಲು ತಾಂತ್ರಿಕ ಅನುಮತಿಯನ್ನು ನಿರೀಕ್ಷಿಸಲಾಗುತ್ತಿದೆ. ಇಲಾಖೆಗಳ ಅಧಿಕಾರಿಗಳಿಗೆ ಇಲ್ಲಿನ ಸ್ಥಿತಿಗತಿಯನ್ನು ತಿಳಿಸುವ ಕೆಲಸ ಮಾಡಲಾಗುವುದು. -ವಿನೋದ್ಕುಮಾರ್ ಬೊಳ್ಳೂರು, ಸದಸ್ಯರು, ದ.ಕ. ಜಿ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ