“ವಿದ್ಯಾರ್ಥಿಗಳಲ್ಲಿರಲಿ ವಿಜ್ಞಾನದ ಆಸಕ್ತಿ’
Team Udayavani, Apr 9, 2019, 6:00 AM IST
ಕಡಬ: ವಿದ್ಯಾರ್ಥಿಗಳು ಕಲಿಕಾ ಅವಧಿಯಲ್ಲಿ ವಿಜ್ಞಾನ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ ಕ್ಲಬ್ ಸ್ಥಾಪನೆಯಾಗಬೇಕು. ಆಗ ಮಾತ್ರ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಬಹುದು. ಇಸ್ರೋ ಸಂಸ್ಥೆ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಮಕ್ಕಳಿಗೆ ಒಂದು ತಿಂಗಳ ಉಚಿತ ತರಬೇತಿ ನೀಡುತ್ತದೆ ಎಂದು ಇಸ್ರೋ ನಿವೃತ್ತ ವಿಜ್ಞಾನಿ ಡಾ| ನರಸಿಂಹ ಪ್ರಸಾದ್ ಹೇಳಿದರು.
ಅವರು ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಹಾಗೂ ಬಿಳಿನೆಲೆಯ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಆಶ್ರಯದಲ್ಲಿ ಆಯ್ದ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಸೋಮವಾರ ಜರಗಿದ ಒಂದು ದಿನದ ವಿಜ್ಞಾನ ಕಾರ್ಯಾಗಾರ ಹಾಗೂ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ಕ್ಷೇತ್ರ ಬಹಳಷ್ಟು ಮುಂದುವರೆದಿದೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿಪುಲ ಅವಕಾಶಗಳಿವೆ. ವಿದ್ಯಾರ್ಥಿಗಳಿಗೆ ಈ ಕ್ಷೇತ್ರ ಹಲವು ಅವಕಾಶಗಳನ್ನು ತೆರೆದಿಟ್ಟಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಬ್ಯಾಂಕ್ ಅಧಿಕಾರಿ ಹೇಮಂತ್ ಭಿಡೆ, ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಸಿಕ್ಕಿದರೆ ಅವರು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ನಡೆಸುತ್ತಾರೆ. ಉತ್ತಮ ವಿಜ್ಞಾನಿಯಾಗಿ ದೇಶಕ್ಕೆ ಕೊಡುಗೆ ನೀಡುತ್ತಾರೆ ಎಂದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಮಂಜುನಾಥ ನಾಯಕ್, ರಾಮಕುಂಜದ ಶ್ರೀ ರಾಮಕುಂಜೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ| ಸಂಕೀರ್ತ್ ಹೆಬ್ಟಾರ್, ಎಸ್ಡಿಎಂಸಿ ಅಧ್ಯಕ್ಷೆ ಅನಿತಾ ಸಣ್ಣಾರ, ಕಲಾ ಶಿಕ್ಷಕ ವಿಶ್ವನಾಥ ಶೆಟ್ಟಿ ವಿಟ್ಲ ಆಗಮಿಸಿದ್ದರು.
ಮುಖ್ಯ ಶಿಕ್ಷಕ ಕೃಷ್ಣ ಶರ್ಮ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿಕ್ಷಕ ಹಿರಿಯಣ್ಣ ಗೌಡ ನಿರೂಪಿಸಿ, ದುಗ್ಗಪ್ಪ ಕುಳ್ಳಂಪಾಡಿ ವಂದಿಸಿದರು. ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಿಗೆ ವಿಜ್ಞಾನಕ್ಕೆ ಸಂಬಂಧಿಸಿ ರಸಪ್ರಶ್ನೆ ಸ್ಪರ್ಧೆ ನಡೆಯಿತು.
ಉದಯವಾಣಿ ಕೊಡುಗೆ ಇದೆ
ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡುವಲ್ಲಿ ಉದಯವಾಣಿ ದೈನಿಕದ ಕೊಡುಗೆಯೂ ಇದೆ. ನಾನು ವಿಜ್ಞಾನದ ಅಧ್ಯಯನ ನಡೆಸುತ್ತಿದ್ದ ಸಂದರ್ಭ ಕಾಲೇಜಿನಲ್ಲಿ ನಡೆಯುತ್ತಿರುವ ವಿಜ್ಞಾನಕ್ಕೆ ಸಂಬಂಧಿಸಿದ ತರಬೇತಿ, ಕಾರ್ಯಾಗಾರದ ಕುರಿತು ಉದಯವಾಣಿಯಲ್ಲಿ ವರದಿಗಳು ವಿದ್ಯಾರ್ಥಿಗಳ ಹೆಸರುಗಳೊಂದಿಗೆ ಪ್ರಕಟವಾಗುತ್ತಿದ್ದವು. ಆ ವರದಿಗಳು ನಮಗೆ ಉತ್ತೇಜನ ನೀಡುತ್ತಿದ್ದವು. ಅದರಿಂದಾಗಿ ಮತ್ತಷ್ಟು ಆಸಕ್ತಿಯಿಂದ ವಿಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಹುರುಪು ಬಂತು. ಮುಂದೆ ನಾನು ಇಸ್ರೋ ವಿಜ್ಞಾನಿಯಾಗಲು ಸಾಧ್ಯವಾಯಿತು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರೊಫೆಸರ್ ಡಾ| ಸೀತಾರಾಮ ಭಟ್ ಸ್ಮರಿಸಿಕೊಂಡರು.