ದುಬಾೖಯಿಂದ ಇಂದು ಎರಡನೇ ವಿಮಾನ
35 ಗರ್ಭಿಣಿಯರ ಸಹಿತ 173 ಮಂದಿ ಮಂಗಳೂರಿಗೆ ಆಗಮನ
Team Udayavani, May 18, 2020, 6:45 AM IST
ಮಂಗಳೂರು: ಕೇಂದ್ರ ಸರಕಾರದ “ವಂದೇ ಭಾರತ’ ಕಾರ್ಯಾಚರಣೆಯಂತೆ ದುಬಾೖಯಿಂದ ಎರಡನೇ ವಿಮಾನ ಮೇ 18ರಂದು ಸಂಜೆ 6.30ಕ್ಕೆ ಮಂಗಳೂರಿಗೆ ಆಗಮಿಸಲಿದೆ.
ಲಾಕ್ಡೌನ್ನಿಂದಾಗಿ ದುಬಾೖಯಲ್ಲಿ ಸಿಲುಕಿ ಕೊಂಡಿರುವ 35 ಗರ್ಭಿಣಿಯರ ಸಹಿತ 173 ಮಂದಿ ಪ್ರಯಾಣಿಕರನ್ನು ಈ ವಿಮಾನ ಕರೆತರಲಿದೆ.
ಮೇ 12ರಂದು ದುಬಾೖಯಿಂದ ಮಂಗಳೂರಿಗೆ 177 ಪ್ರಯಾಣಿಕರಿರುವ ಮೊದಲ ವಿಮಾನ ಆಗಮಿಸಿತ್ತು. ಮಂಗಳೂರಿನಿಂದ ಸೋಮ ವಾರ ಬೆಳಗ್ಗೆ ದುಬಾೖಗೆ ತೆರಳುವ ಏರ್ ಇಂಡಿಯಾ ವಿಮಾನವು ಅಪರಾಹ್ನ 3ರ ಸುಮಾರಿಗೆ 95 ಪುರುಷರು ಹಾಗೂ 78 ಮಹಿಳಾ ಪ್ರಯಾಣಿಕರೊಂದಿಗೆ ಹೊರಡಲಿದೆ.
ಪೂರ್ವ ತಯಾರಿ
ಮೇ 12ರಂದು ದುಬಾೖಯಿಂದ ಆಗ ಮಿಸಿದ ಪ್ರಯಾಣಿಕರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತದಿಂದ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಶನಿವಾರ ಖುದ್ದು ನಿಲ್ದಾಣಕ್ಕೆ ತೆರಳಿ ಸೋಮವಾರ ಆಗಮಿಸುವ ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜತೆಗೆ ಸಂಸದ ನಳಿನ್ ಕುಮಾರ್ ಕಟೀಲು ಅವರು ರವಿವಾರ ಸಂಜೆ ಮಂಗಳೂರಿನಲ್ಲಿ ಜಿಲ್ಲಾಡಳಿತದ ಜತೆಗೆ ಸಭೆ ನಡೆಸಿ ಎಲ್ಲ ಸಿದ್ಧತೆ ನಡೆಸುವಂತೆ ಸೂಚಿಸಿದ್ದಾರೆ.
ಪ್ರಯಾಣಿಕರ ಪೈಕಿ ದ.ಕ. ಜಿಲ್ಲೆಯವರಿಗೆ ಮಂಗಳೂರಿನಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದ್ದು, ಉಡುಪಿ ಹಾಗೂ ಇತರ ಜಿಲ್ಲೆಗಳ ಪ್ರಯಾಣಿಕರಿಗೆ ಆಯಾಯ ಜಿಲ್ಲೆಗಳಲ್ಲಿ ಕ್ವಾರಂಟೈನ್ ಮಾಡಲು ಆಯಾ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಲಿದೆ.
10 ಹೊಟೇಲ್ ನಿಗದಿ
ಹಣ ಪಾವತಿಸುವ ಷರತ್ತಿಗೊಳಪಟ್ಟು ಹೊಟೇಲುಗಳಲ್ಲಿ ಕ್ವಾರಂಟೈನ್ ಆಗಲು ಒಪ್ಪಿಗೆ ಪತ್ರ (ಅಂಡರ್ಟೇಕಿಂಗ್) ನೀಡಿರುವವರಿಗಾಗಿ ನಗರದಲ್ಲಿ 10 ಹೊಟೇಲ್ ಗಳನ್ನು ಜಿಲ್ಲಾಡಳಿತ ಕಾದಿರಿಸಿದೆ. ದಿನಕ್ಕೆ ಕನಿಷ್ಠ 1,000 ರೂ.ಗಳಿಂದ ಗರಿಷ್ಠ 5,400 ರೂ. ವರೆಗಿನ ಬಾಡಿಗೆ ಇರುವ ಕೊಠಡಿಗಳು ಇರಲಿವೆ. ಅವುಗಳಿಗೆ ನೋಡೆಲ್ ಅಧಿಕಾರಿ ಗಳನ್ನು ನಿಯೋಜಿಸಲಾಗಿದೆ. ಹೊಟೇಲ್ ವಾಸ್ತವ್ಯಕ್ಕೆ ಒಪ್ಪಿಗೆ ಇಲ್ಲದವರನ್ನು ಸರಕಾರಿ ವಸತಿ ನಿಲಯಗಳಲ್ಲಿ ಕ್ವಾರಂಟೈನ್ಗೆ ಅವಕಾಶ ಮಾಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಆನ್ಲೈನ್ ಬುಕ್ಕಿಂಗ್, ಊಟೋಪಚಾರ
ಪ್ರಯಾಣಿಕರ ವಿವರಗಳನ್ನು ಮೊದಲೇ ಪಡೆದಿರುವ ಜಿಲ್ಲಾಡಳಿತ ಆನ್ಲೈನ್ ಮೂಲಕ ಹೊಟೇಲ್ ಬುಕ್ಕಿಂಗ್ಗೆ ಅವಕಾಶ ಕಲ್ಪಿಸಿದೆ. ಹಿಂದಿನ ಸಲದಂತೆ ಪ್ರಯಾಣಿಕರು ನಿಲ್ದಾಣದಲ್ಲಿ ಕಾಯಬೇಕಾದ ಪ್ರಮೇಯ ಕಡಿಮೆ. ವಿಮಾನ ಬಂದ ತತ್ಕ್ಷಣ ಎಲ್ಲ ಪ್ರಯಾಣಿಕರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯ ತಪಾಸಣೆಯ ಬಳಿಕ ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಕಲ್ಪಿಸಲಾಗಿದೆ. ಏರ್ಪೋರ್ಟ್, ಏರ್ಲೈನ್ಸ್ ಹಾಗೂ ಭದ್ರತಾ ಪಡೆಯವರ ಹೆಚ್ಚುವರಿ ಕೌಂಟರ್ಗಳನ್ನು ತೆರೆಯಲಾಗುತ್ತದೆ.
2 ಮಾದರಿ ಕ್ವಾರಂಟೈನ್
ಪ್ರಯಾಣಿಕರನ್ನು “ಎ’ ಮತ್ತು “ಬಿ’ ಎಂದು 2 ವಿಭಾಗ ಮಾಡಲಾಗಿದೆ. ಕೆಮ್ಮು, ಜ್ವರ, ನೆಗಡಿ ಇರುವವರು “ಎ’ ವಿಭಾಗದವರಾಗಿದ್ದು (ಇತರ ಜಿಲ್ಲೆಯವರು ಸೇರಿದಂತೆ) ಅವರನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆಯೊಂದಿಗೆ 14 ದಿನಗಳ ಕ್ವಾರಂಟೈನ್ ಮಾಡಲಾಗುತ್ತದೆ. ಯಾವುದೇ ರೋಗ ಲಕ್ಷಣ ಇಲ್ಲದವರು “ಬಿ’ ವಿಭಾಗದವರಾಗಿದ್ದು ಅಂಥವರನ್ನು ಆಯಾಯ ಜಿಲ್ಲೆಗೆ ಜಿಲ್ಲಾಡಳಿತದ ವತಿಯಿಂದಲೇ ಕಳುಹಿಸಿ 14 ದಿನಗಳ ಕ್ವಾರಂಟೈನ್ ಮಾಡಲಾಗುತ್ತದೆ.
ಲಗೇಜ್ಗೆ ಪ್ರತ್ಯೇಕ ತಂಡ?
ವಿದೇಶದಿಂದ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಹಾಗೂ ವ್ಯವಸ್ಥೆಗಳ ಪರಿಶೀಲನೆಗಾಗಿ ನಿಲ್ದಾಣದಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ಮಾಡಲಾಗಿದೆ. ಸಾರ್ವಜನಿಕರು/ಪ್ರಯಾಣಿಕರ ಕುಟುಂಬಸ್ಥ ರಿಗೆ ನಿಲ್ದಾಣಕ್ಕಾಗಲೀ ಕ್ವಾರಂಟೈನ್ ಕೇಂದ್ರಗಳಿ ಗಾಗಲೀ ಬರಲು ಅವಕಾಶ ಇಲ್ಲ. ಲಗೇಜ್ಗಳನ್ನು ಕೊಂಡೊಯ್ಯಲು ಜಿಲ್ಲಾಡ ಳಿತದ ವತಿಯಿಂದ ಕೆಲವರನ್ನು ಆರೋಗ್ಯ ಸುರಕ್ಷಾ ಕವಚದೊಂದಿಗೆ ನೇಮಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಕ್ವಾರಂಟೈನ್ ಕೇಂದ್ರಗಳಿಗೆ ಕರೆದೊಯ್ಯಲು ಬಸ್ ವ್ಯವಸ್ಥೆ ಮಾಡಲಾಗಿದೆ.
ದುಬಾೖಯಿಂದ ಸೋಮವಾರ ವಿಮಾನ ಆಗಮಿಸಲಿದೆ. ಮುಂದಿನ ಎಲ್ಲ ಪ್ರಕ್ರಿಯೆಗಳನ್ನು ತ್ವರಿತವಾಗಿ ಮುಗಿಸುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಯಾಣಿಕರ ವಿವರಗಳನ್ನು ಈಗಾಗಲೇ ಪಡೆದುಕೊಂಡಿದ್ದೇವೆ. ಕ್ವಾರಂಟೈನ್ಗೆ ಆನ್ಲೈನ್ ಬುಕ್ಕಿಂಗ್ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ವಿಮಾನ ನಿಲ್ದಾಣದಲ್ಲಿ ಮಾಡಲಾಗಿದೆ.
– ಸಿಂಧೂ ಬಿ. ರೂಪೇಶ್, ಜಿಲ್ಲಾಧಿಕಾರಿ, ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು