ಐಎಂಎ ಹಗರಣಕ್ಕೆ ರಾಜ್ಯದ ಅಭಯ
Team Udayavani, Jun 30, 2019, 10:14 AM IST
ಮಂಗಳೂರು: ಐಎಂಎ ಬಹು ಕೋಟಿ ಹಗರಣದ ಹಿಂದೆ ರಾಜ್ಯ ಸರಕಾರದ ಅಭಯಹಸ್ತವಿದೆ. ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಉಡುಪಿ – ಚಿಕ್ಕಮಗಳೂರು ಸಂಸದೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾಕ ಮುಖಂಡರಾದ ಜಮೀರ್ ಖಾನ್, ರೋಷನ್ ಬೇಗ್ ಹಾಗೂ ರೆಹಮಾನ್ ಖಾನ್ ಬಡ ಜನರಿಗೆ ಮೋಸ ಮಾಡಿದ್ದಾರೆ. ಈ ಬಗ್ಗೆ ಸಿಬಿಐ ಮೂಲಕ ಸಮಗ್ರ ತನಿಖೆ ನಡೆಸುವ ಅಗತ್ಯವಿದೆ ಎಂದರು.
ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಕೇವಲ ನಾಟಕ. ಮನವಿ ತೆಗೆದುಕೊಂಡು ಬಂದವರಿಗೆ ಲಾಠೀ ಚಾರ್ಜ್ ಬೆದರಿಕೆ ಒಡ್ಡುತ್ತಿದ್ದಾರೆ. ರಾಜ್ಯಕಂಡ ಕೆಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಾಗಿದ್ದಾರೆ ಎಂದು ಶೋಭಾ ಆರೋಪಿಸಿದರು.
ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಉಸ್ತುವಾರಿ ಸಚಿವ ಯು.ಟಿ. ಖಾದರ್ ಕಾರಣ. ಸಚಿವರ ಕುಮ್ಮಕ್ಕಿನಂತೆ ಗೋ ಅಕ್ರಮ ಸಾಗಾಟ ನಡೆಯುತ್ತಿದೆ. ಸಾಗಾಟಗಾರರನ್ನು ಸಚಿವರು ರಕ್ಷಿಸುತ್ತಿದ್ದಾರೆ ಎಂದರು.
ನಗರದ ನಡು ರಸ್ತೆಯಲ್ಲೆ ಯುವತಿ ಕೊಲೆ ಯತ್ನ ನಡೆದಿದೆ. ಇದು ಪೊಲೀಸ್ ಇಲಾಖೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ. ರಾಜ್ಯ ಸರಕಾರ ಕಾನೂನು ಸುವ್ಯವಸ್ಥೆಯನ್ನು ಸರಿಮಾಡಬೇಕಾಗಿದೆ ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.