ನಾಗಮಂಡಲೋತ್ಸವ: ಭಕ್ತರಿಗೆ ಮಹಾ ಅನ್ನಸಂತರ್ಪಣೆ
Team Udayavani, Feb 2, 2020, 5:04 AM IST
ಬಜಪೆ: ಕಟೀಲಿನಲ್ಲಿ ಶನಿವಾರ ವಿಜೃಂಭಣೆಯಿಂದ ಜರಗಿದ ನಾಗಮಂಡಲೋತ್ಸವಕ್ಕೆ ಭಕ್ತ ಸಾಗರವೇ ಹರಿದುಬಂತು. ಸುಮಾರು 1.20 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ ಶ್ರೀ ದುರ್ಗಾಪರಮೇಶ್ವರೀ ದೇವಿಯ ದರ್ಶನ ಪಡೆದರು. ನಾಗಮಂಡಲೋತ್ಸವದ ದಿನದಂದು ಭೋಜನ ಶಾಲೆಯಲ್ಲಿ ವಿವಿಧ ರುಚಿ ರುಚಿಯ ಖಾದ್ಯ ಭಕ್ತರ ಬಾಯಿ ರುಚಿಯನ್ನು ಹೆಚ್ಚಿಸಿತು.
ನಾಗಮಂಡಲೋತ್ಸವದ ಪ್ರಯುಕ್ತ ಕ್ಷೇತ್ರದಲ್ಲಿ ನಿರಂತರವಾಗಿ ಮಹಾಅನ್ನ ಸಂತರ್ಪಣೆ ಜರಗಿತು. ಸುಮಾರು 25 ಸಾವಿರ ಭಜಕ್ತರು ಬೆಳಗಿನ ಉಪಾಹಾರವನ್ನು ಸೇವಿಸಿದ್ದಾರೆ. ಬಿಸಿಬೆಳೆ ಬಾತ್, ಕಡ್ಲೆ , ಅವಲಕ್ಕಿ , ಮೊಸರು,ಲಡ್ಡು, ಚಹಾ, ಕಾಫಿ ಜತೆ ನೀಡಲಾಯಿತು.
ಅನಂತರ ನಡೆದ ಮಹಾಅನ್ನಪ್ರಸಾದದಲ್ಲಿ ಸುಮಾರು 1 ಲಕ್ಷಕ್ಕೂ ಆಧಿಕ ಭಕ್ತರು ಪ್ರಸಾದ ಸೇವಿಸಿದರು. ನಾಗಮಂಡಲೋತ್ಸವದ ಪ್ರಯುಕ್ತವಾಗಿ ಸುಮಾರು 2.50 ಲಕ್ಷಕ್ಕೂ ಅಧಿಕ ಲಡ್ಡು ತಯಾರಿಸಿದ್ದು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಯಿತು.
ದುರ್ಗೆಗೆ ಪ್ರಿಯವಾದ ನೈವೇದ್ಯ ಗುಡಾನ್ನ
ದುರ್ಗೆಗೆ ಪ್ರಿಯವಾದ ನೈವೇದ್ಯ ಗುಡಾನ್ನ ಪಾಯಸವನ್ನು ಸುಮಾರು 2ಕ್ವಿಂಟಲ್ ತಯಾರಿಸಲಾಗಿತ್ತು. 80 ಬಾಣಸಿಗರು ಪ್ರಸಾದವನ್ನು ತಯಾರಿಗೆ ಕಾರ್ಯ ನಿರ್ವಹಿಸಿದ್ದಾರೆ.
10 ಅನ್ನ ಪ್ರಸಾದ ಕೌಂಟರ್
ಶನಿವಾರದಂದು ಅನ್ನಪ್ರಸಾದ ಸುವ್ಯವಸ್ಥೆಗಾಗಿ 10 ಕೌಂಟರ್ಗಳಿಗೆ ಹೆಚ್ಚಿಸಲಾಗಿತ್ತು. ಬಾಳೆ ಎಲೆಯಲ್ಲಿ ಅನ್ನಪ್ರಸಾದ ಸ್ವೀಕರಿಸುವ ಕಡೆಯಲ್ಲಿಯೂ 6 ಬದಲು 10 ಕೌಂಟರ್ಗಳನ್ನು ಮಾಡಲಾಯಿತು. ವಿಐಪಿ ಕೌಂಟರ್ಗಳನ್ನು ಕೂಡ ತೆರೆಯಲಾಯಿತು.
11 ದಿನಗಳಲ್ಲಿ ಕೆಎಂಎಫ್ನಿಂದ ಸುಮಾರು 3,000 ಲೀ. ಮೊಸರು, 22,000 ಲೀ. ಹಾಲು, 81,000ಲೀ. ಮಜ್ಜಿಗೆ ಈಗಾಗಲೇ ಬಳಕೆ ಆಗಿದೆ. ಶನಿವಾರ ನಾಗಮಂಡಲೋತ್ಸವಕ್ಕೆ 2,000 ಲೀ., 3,500 ಲೀ. ಹಾಲು, 22,000 ಲೀ. ಮಜ್ಜಿಗೆ ಉಪಯೋಗಿಸಲಾಗಿದೆ. 11 ದಿನಗಳಲ್ಲಿ ಶನಿವಾರವೇ ಅತೀ ಹೆಚ್ಚು ಬಳಕೆಯಾಗಿದೆ.
ಶರಬತ್ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವತಿಯಿಂದ ಶನಿವಾರ ಕೂಡ ಆಯುರ್ವೇದಿಕ್ ಬಿಸಿ ನೀರು ಬಂದ ಭಕ್ತರಿಗೆ ನೀಡಲಾಯಿತು. ಮಜ್ಜಿಗೆ, ಪುನರ್ಪುಳಿ ಜೂಸ್, ಜತೆಗೆ ಲಿಂಬೆ ಪಾನೀಯ (ಶರ್ಬತ್) ನೀಡಲಾಯಿತು.
ಇಂದಿನ ಸಾಂಸ್ಕೃತಿಕ ಕಾರ್ಯಕ್ರಮ
ಕಟೀಲು: ಸಂಜೆ 5 ಸಭಾ ಕಾರ್ಯಕ್ರಮ ರಾತ್ರಿ 7 ರಿಂದ ಪಂಡಿತ್ ಉದಯ ಬಾವಲ್ಕರ್ ಮತ್ತು ಬಳಗ ಪೂನಾ ಇವರಿಂದ ಶಾಸ್ತ್ರೀಯ ಸಂಗೀತ ರಾತ್ರಿ 9 ರಿಂದ ಶ್ರೀ ಕ್ಷೇತ್ರ ಕಟೀಲು ಕಾವ್ಯಚಿತ್ರ ರೂಪಕ ನಡೆಯಲಿದೆ. ಚಿತ್ರ : ನೀರ್ನಳ್ಳಿ ಗಣಪತಿ ಭಟ್, ಹಾಡುಗಾರಿಕೆ : ಬಲಿಪ ಶಿವಶಂಕರ, ಸಿದ್ಧಾರ್ಥ ಬೆಳ್ಮಣ್, ವೈಶ್ವಾನರ, ಚೆಂಡೆ:ಚೈತನ್ಯ, ಮದ್ದಳೆ: ರಾಜೇಶ್, ಹಾರ್ಮೊನಿಯಂ-ಸೂರ್ಯ ಉಪಾಧ್ಯಾಯ, ತಬಲ:ರೂಪಕ ಕಲ್ಲೂರ್ಕರ್, ವಯಲಿನ್: ಜನಾರ್ದನ, ಮೃದಂಗ: ನಾಗೇಂದ್ರ ಪ್ರಸಾದ್, ರಿದಂ: ಪ್ರಸನ್ನ, ನಿರೂಪಣೆ : ಶಂಕರನಾರಾಯಣ ಉಪಾಧ್ಯಾಯ, ಪರಿಕಲ್ಪನೆ : ಲಕ್ಷ್ಮೀನಾರಾಯಣ ಭಟ್.