100 ದಿನಗಳಲ್ಲಿ 110 ಕೆರೆಗಳಿಗೆ ಪುನಶ್ಚೇತನ ಭಾಗ್ಯ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
Team Udayavani, Apr 6, 2022, 6:35 AM IST
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಂತೆ ನಿರ್ಲಕ್ಷ್ಯಕ್ಕೊಳಗಾದ ಕೆರೆಗಳಿಗೆ ಕಾಯಕಲ್ಪ ನೀಡಲಾಗುತ್ತಿದ್ದು, ಪ್ರಸಕ್ತ ವರ್ಷ ಕೇವಲ 100 ದಿನಗಳಲ್ಲಿ ರಾಜ್ಯದ 110 ಕೆರೆಗಳಿಗೆ ಪುನಶ್ಚೇತನ ನೀಡಲಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಾವಿರಾರು ಕೆರೆಗಳಿದ್ದರೂ ನಿರ್ವಹಣೆಯಿಲ್ಲದೆ ಹೂಳು ತುಂಬಿವೆ. ಕೆಲವೆಡೆ ಮರಳು, ಮಣ್ಣಿಗಾಗಿ ಕೆರೆಯ ಒಡಲನ್ನು ಅಗೆಯುವುದು, ಒತ್ತುವರಿ ಮೊದಲಾದ ಕಾರಣಗಳಿಂದ ಇಡೀ ಗ್ರಾಮಕ್ಕೆ ನೀರುಣಿಸುತ್ತಿದ್ದ ಕೆರೆಗಳು ಹನಿ ನೀರಿಲ್ಲದೆ ಬತ್ತಿ ಹೋಗಿವೆ. ಹನಿ ನೀರಿಗಾಗಿ ಪರದಾಡುತ್ತಿರುವ ರೈತರು, ಮಹಿಳೆಯರ ಸಂಕಷ್ಟ ಗಮನಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀ. ಹೆಗ್ಗಡೆಯವರು ಪಾರಂಪರಿಕ ಕೆರೆಗಳ ಪುನಶ್ಚೇತನಕ್ಕಾಗಿಯೇ “ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮವನ್ನು 2016ರಲ್ಲಿ ಪ್ರಾರಂಭಿಸಿದ್ದಾರೆ.
ವರ್ಷದ ಕೊನೆಯ ವರೆಗೂ ಸುರಿದ ಮಳೆಯಿಂದಾಗಿ ಕಳೆದ ಡಿಸೆಂಬರ್ ಮಧ್ಯಭಾಗದಲ್ಲಿ ಕೆರೆಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು, 9 ಎಂಜಿನಿಯರ್ಗಳು, 130 ನೋಡೆಲ್ ಅಧಿಕಾರಿಗಳು ಹಾಗೂ 550ಕ್ಕೂ ಹೆಚ್ಚು ಕೆರೆ ಸಮಿತಿ ಪದಾಧಿಕಾರಿಗಳ ತಂಡ ಜಲಯೋಧರಾಗಿ ದುಡಿದು ಯಶಸ್ಸಿಗೆ ಕಾರಣರಾಗಿದ್ದಾರೆ. 340 ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳು, 2,450ಕ್ಕೂ ಅಧಿಕ ಟ್ರಾಕ್ಟರ್/ಟಿಪ್ಪರ್ಗಳನ್ನು ಬಳಸಿಕೊಳ್ಳಲಾಗಿದೆ. ಮಳೆ ನೀರನ್ನು ಹಿಡಿದಿಟ್ಟುಕೊಂಡು ಪರಿಸರದ ಅಂತರ್ಜಲ ಮಟ್ಟ ಹೆಚ್ಚಿಸಿ, ಜನ-ಜಾನುವಾರುಗಳ ನೀರಿನ ಬವಣೆಯನ್ನು ಈ ಕೆರೆಗಳು ನೀಗಿಸಲಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಡಾ| ಪ್ರಭಾಕರ ಭಟ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು
ದುರಸ್ತಿಗೊಂಡ ಕೆರೆಗಳ ವೈಶಿಷ್ಟ್ಯ
ಹೂಳು ತುಂಬಿ ಸ್ವರೂಪವನ್ನೇ ಕಳಕೊಂಡಿದ್ದ ನಾಡಪ್ರಭು ಕೆಂಪೇಗೌಡರು ರಾಮನಗರದ ಸಾವನದುರ್ಗ ಕೋಟೆಯಲ್ಲಿ ಯುದೊœàಪಕರಣಗಳನ್ನು ತಯಾರಿಸುತ್ತಿದ್ದ ಸೈನಿಕರಿಗಾಗಿ ನಿರ್ಮಿಸಿದ ಮೇಲೆಹಳ್ಳಿ ಕೆರೆ, ಕೆಳದಿ ಚೆನ್ನಮ್ಮನ ಆಳ್ವಿಕೆಯಲ್ಲಿ ನಿರ್ಮಾಣವಾಗಿದ್ದ ಹೊಸನಗರ ತಾಲೂಕಿನ ಒಟ್ಟೂರು ಕೆರೆಗಳು ಪುನಶ್ಚೇತನಗೊಂಡಿವೆ. ಸಂಡೂರು ಮಹಾರಾಣಿಗಾಗಿ ನಿರ್ಮಾಣವಾಗಿದ್ದ ಬೊಮ್ಮನಹಳ್ಳಿ ಕೆರೆ, ಮಕ್ಕಳಿಲ್ಲದ ಮಲ್ಲಕ್ಕ ಊರಿಗೆ ಕೊಡುಗೆಯಾಗಿ ನಿರ್ಮಿಸಿದ ಕಿತ್ತೂರು ಮಲ್ಲಕ್ಕನಕೆರೆ ಮೊದಲಾದ ಕೆರೆಗಳು ಜಲಸಂಗ್ರಹಕ್ಕೆ ಅಣಿಯಾಗಿವೆ.
ಪುನಶ್ಚೇತನಗೊಂಡ ಕೆರೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಕೆರೆ ಸಮಿತಿ ಹಾಗೂ ಗ್ರಾ.ಪಂ.ಗಳಿಗೆ ವಹಿಸಲಾಗುತ್ತಿದೆ. ಪ್ರದೇಶವಾರು ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಕೆರೆಯ ಸುತ್ತ ನೆಡಲಾಗುವುದು. ಕಾಮಗಾರಿ ಸಂದರ್ಭ ಸ್ವಾಮೀಜಿಗಳು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು, ವಿವಿಧ ಇಲಾಖಾಧಿಕಾರಿಗಳು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದ್ದಾರೆ ಎಂದು ಡಾ| ಮಂಜುನಾಥ್ ತಿಳಿಸಿದ್ದಾರೆ.
ಇದುವರೆಗಿನ ಸಾಧನೆ
-ಪುನಶ್ಚೇತನಗೊಂಡ ಒಟ್ಟು ಕೆರೆಗಳು: 452
-ತೆಗೆದ ಹೂಳಿನ ಪ್ರಮಾಣ(ಕ್ಯೂ.ಮೀ): 11.86 ಕೋಟಿ
-ಹೆಚ್ಚಳವಾಗಿರುವ ನೀರಿನ ಸಂಗ್ರಹ ಸಾಮರ್ಥ್ಯ: 887.83 ಕೋಟಿ ಗ್ಯಾಲನ್
-ಪ್ರಯೋಜನ ಪಡೆಯುವ ಕೃಷಿಭೂಮಿ: 1.14 ಲಕ್ಷ ಎಕರೆ
-ಪ್ರಯೋಜನ ಪಡೆದ ಕುಟುಂಬಗಳು: 2.03 ಲಕ್ಷ
-ಸಂಸ್ಥೆಯಿಂದ ನೀಡಿದ ಅನುದಾನ:30.58 ಕೋ.ರೂ.
-ಸ್ಥಳೀಯರ ಪಾಲು (ಹೂಳು ಸಾಗಾಟ): 33.29 ಕೋ.ರೂ.