ಎಸ್ಐ, ಮೂವರು ಸಿಬಂದಿ ವಜಾಕ್ಕೆ ಆಗ್ರಹಿಸಿಜು. 2ರಂದು ಸಂಪ್ಯ ಠಾಣೆ ಎದುರು ಪ್ರತಿಭಟನೆ
Team Udayavani, Jul 1, 2019, 5:22 AM IST
ನಗರ : ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯಕ್ಕೆ ಕಾರಣವಾಗಿರುವ ಠಾಣೆಯ ಎಸ್ಐ ಹಾಗೂ ಮೂವರು ಪೊಲೀಸ್ ಸಿಬಂದಿಯನ್ನು ಕೆಲಸದಿಂದ ವಜಾಗೊಳಿಸಬೇಕು ಹಾಗೂ ಬಾಲಕಿಗೆ ನ್ಯಾಯ ನೀಡುವಂತೆ ಆಗ್ರಹಿಸಿ ಜು. 2ರಂದು ಎಲ್ಲ ದಲಿತ ಸಂಘಟನೆಗಳ ವತಿಯಿಂದ ಸಂಪ್ಯ ಪೊಲೀಸ್ ಠಾಣೆಯ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಹೇಳಿದ್ದಾರೆ.
ಕೌಡಿಚ್ಚಾರ್ನ ಅಪ್ರಾಪ್ತ ಬಾಲಕಿಗೆ ಸಂಪ್ಯ ಠಾಣೆಯ ಪೊಲೀಸರು ಚಿತ್ರಹಿಂಸೆ ನೀಡಿದ ಘಟನೆಗೆ ಸಂಬಂಧಿಸಿ ನ್ಯಾಯಕ್ಕಾಗಿ ಆಗ್ರಹಿಸಿ ರವಿವಾರ ಪುತ್ತೂರು ಸರಕಾರಿ ಆಸ್ಪತ್ರೆಯ ಎದುರು ವಿವಿಧ ದಲಿತ ಸಂಘಟನೆಗಳ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಯಿತು.
ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರುವ, ಶೋಷಣೆಗೆ ಒಳಗಾಗಿರುವ ಆ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕು. ಜಿಲ್ಲಾಧಿಕಾರಿಗಳು ಕೂಡಲೇ ಅವರಿಗೆ ಮನೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಶಕ್ತಿ ತೋರಿಸುತ್ತೇವೆ
ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಬಳ್ಳಾಲ್ಬಾಗ್ ಮಾತನಾಡಿ, ಅಪ್ರಾಪ್ತ ಬಾಲಕಿಗೆ ವಿಚಾರಣೆ ಮಾಡದೆ ಚಿತ್ರಹಿಂಸೆ ನೀಡಿದ್ದಾರೆ. ಆಕೆಯ ತಂದೆ, ತಾಯಿಗೂ ಹಲ್ಲೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಆದಿದ್ರಾವಿಡ ಸಮುದಾಯದ 5 ಲಕ್ಷ ಮಂದಿ ಇದ್ದಾರೆ. ಇವರೆಲ್ಲರೂ ಸೇರಿಕೊಂಡು ಶಕ್ತಿ ತೋರಿಸಲಿದ್ದೇವೆ ಎಂದರು. ಘಟನೆಯ ಕುರಿತು ಮುಖ್ಯಂತ್ರಿಗಳ ಗಮನಕ್ಕೂ ತಂದಿದ್ದೇವೆ. ನ್ಯಾಯ ಸಿಗದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಎದುರು ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದರು.
ಕೇಸು ದಾಖಲಿಸಿ
ದಲಿತ್ ಸೇವಾ ಸಮಿತಿಯ ತಾಲೂಕು ಅಧ್ಯಕ್ಷ ರಾಜು ಹೊಸ್ಮಠ ಮಾತನಾಡಿ, ದಲಿತ ಸಂಘಟನೆಯಿಂದ ಏನಾಗುತ್ತದೆ ಎಂದು ಸಂಪ್ಯ ಠಾಣೆಯ ಸಿಬಂದಿ ದಿನೇಶ್ ಪ್ರಶ್ನಿಸಿದ್ದಾರೆ.
ಅಪ್ರಾಪ್ತ ಬಾಲಕಿಗೆ ಚಿತ್ರಹಿಂಸೆ ನೀಡಿದ ಎಸ್ಐ ಹಾಗೂ ಮೂವರು ಪೊಲೀಸರನ್ನು ಕೆಲಸ ದಿಂದ ವಜಾಗೊಳಿಸಿ ಅವರ ವಿರುದ್ದ ದಲಿತ ದೌರ್ಜನ್ಯ ಕಾಯಿದೆಯಡಿ ಕೇಸು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಆನಂದ್, ಶಿವಪ್ಪ ಅಟ್ಟೋಳೆ, ಮನೋಹರ್ ಕೋಡಿಜಾಲು, ಗಣೇಶ್ ಸೂಟರ್ಪೇಟೆ, ಪ್ರಸಾದ್ ಬೊಳ್ಮಾರು, ಗಣೇಶ್ ಕಾರೆಕ್ಕಾಡು, ಲಲಿತಾ ನಾಯ್ಕ ಮೊಟ್ಟೆತ್ತಡ್ಕ, ನಿಶಾಂತ್ ಮುಂಡೋಡಿ, ಈಶು ಮುಲ್ಕಿ, ಮಣಿ, ನಾಗೇಶ್ ಮಂಗಳೂರು, ಸುಂದರ ಸಿದ್ಯಾಳ, ಕೇಶವ್ ಪಡೀಲು, ಸಂಜೀವ ಕೋಟ್ಯಾನ್, ಆನಂದ್ ದರ್ಬೆ, ಕೇಶವ್ ಕುಪ್ಲಾಜೆ, ಸುರೇಶ್ ತೋಟಂತಿಲ, ಅಣ್ಣಪ್ಪ ಕಾರೆಕ್ಕಾಡು, ದೇವಪ್ಪ, ಮನೋಹರ್ ಕಾರೆಕ್ಕಾಡು, ಗುರುವಪ್ಪ, ಮೋಹನ್ ನೆಲ್ಲಿಗುಂಡಿ, ರೋಹಿತ್ ಅಮ್ಚಿನಡ್ಕ, ಗುರುವಪ್ಪ ಪುರುಷರಕಟ್ಟೆ ಪಾಲ್ಗೊಂಡರು.