ಕರಾವಳಿಯಲ್ಲಿ ಸರಳ ಈದ್ ಮಿಲಾದ್
Team Udayavani, Oct 20, 2021, 5:10 AM IST
ಮಂಗಳೂರು/ಉಡುಪಿ:ಪ್ರವಾದಿ ಮುಹಮ್ಮದ್ ಅವರ ಜನ್ಮದಿನವಾದ ಮಿಲಾದುನ್ನಬಿಯನ್ನು ಕರಾವಳಿಯಾದ್ಯಂತ ಮಂಗಳವಾರ ಆಚರಿಸಲಾಯಿತು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯವರ ಸೂಚನೆಯಂತೆ ಸರಳವಾಗಿ ಆಚರಿಸಲಾಯಿತು. ಮಿಲಾದ್ ರ್ಯಾಲಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಿರಲಿಲ್ಲ. ಮುಸಲ್ಮಾನ ಬಾಂಧವರು ಪರಸ್ಪರ ಮಿಲಾದ್ ಶುಭಾಶಯ ಸಲ್ಲಿಸಿದರು.
ಮಂಗಳೂರು ನಗರದ ಬೆಂಗ್ರೆ, ಬಂದರು ಪ್ರದೇಶದಲ್ಲಿ ಮದ್ರಸ ವಿದ್ಯಾರ್ಥಿಗಳಿಂದ ಪ್ರವಾದಿಗಳ ಗುಣಗಾನದೊಂದಿಗೆ ದಫ್ ಮೆರವಣಿಗೆ ನಡೆಯಿತು. ಸಿಹಿತಿಂಡಿ, ಪಾನೀಯ ವಿತರಿಸಲಾಯಿತು.
ಉಡುಪಿ ತಾಲೂಕಿನ ದೊಡ್ಡಣಗುಡ್ಡೆ, ಹೂಡೆ, ನೇಜಾರು, ಕುಂದಾಪುರ, ಶಿರೂರು, ಕೋಡಿ, ಕಾರ್ಕಳ, ಕಾಪು ತಾಲೂಕಿನ ಹೆಜಮಾಡಿ, ಪಡುಬಿದ್ರಿ, ಪಲಿಮಾರು, ಎರ್ಮಾಳು, ಮುದರಂಗಡಿ, ಉಚ್ಚಿಲ, ಮೂಳೂರು, ಕಾಪು, ಕಟಪಾಡಿ, ಮಜೂರು, ಮಲ್ಲಾ ರು, ಶಿರ್ವ, ಮಣಿಪುರ ಮಸೀದಿಗಳಲ್ಲಿ ಮಿಲಾದುನ್ನಬಿಯನ್ನು ಆಚರಿಸಲಾಯಿತು.
ಇದನ್ನೂ ಓದಿ:ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್ ನಾಯಕ ಮಿಲಿಂದ್ ದೇವ್ರಾ!
ಹೆಚ್ಚಿನ ಮಸೀದಿಗಳಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗ್ಗೆ ಮೌಲೂದ್ ನಡೆಯಿತು. ಮದ್ರಸ ವಿದ್ಯಾರ್ಥಿಗಳಿಗೆ ಪ್ರವಾದಿ ಮುಹಮ್ಮದ್ ಅವರ ಜೀವನ, ಸಂದೇಶ ಕುರಿತು ಭಾಷಣ, ಹಾಡುಗಾರಿಕೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪ್ರತಿಭಾನ್ವಿತ ಮದ್ರಸ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.