ಜೋಡುಪಾಲದಲ್ಲಿ ಮಾನವ ಅಸ್ಥಿಪಂಜರ ಪತ್ತೆ
Team Udayavani, Sep 28, 2018, 11:18 AM IST
ಮಡಿಕೇರಿ: ಭೂ ಕುಸಿತ ಮತ್ತು ಜಲ ಪ್ರಳಯಕ್ಕೆ ತುತ್ತಾಗಿದ್ದ ಜೋಡುಪಾಲದ ಬಳಿ ಮಾನವ ಅಸ್ಥಿಪಂಜರವೊಂದು ಪತ್ತೆಯಾಗಿದೆ. ಆಗಸ್ಟ್ 16ರಂದು ಭೂ ಕುಸಿತ ಮತ್ತು ನದಿ ಪ್ರವಾಹಕ್ಕೆ ಸಿಲುಕಿ ಕಣ್ಮರೆಯಾಗಿದ್ದ ಮಂಜುಳಾ (15) ಅವರ ಕಳೇಬರ ಇದಾಗಿರಬಹುದೆಂದು ಶಂಕಿಸಲಾಗಿದೆ.
ಆದರೆ ಅಸ್ಥಿಪಂಜರ ಮಂಜುಳಾ ಅವರದ್ದೇ ಎಂದು ಗುರುತಿಸಬಹುದಾದ ಯಾವುದೇ ವಸ್ತುಗಳು ಪತ್ತೆಯಾಗದ್ದರಿಂದ ಪೋಷಕರು ಇದನ್ನು ಖಾತರಿಪಡಿಸಲು ಸಾಧ್ಯವಾಗಿಲ್ಲ. ವೈದ್ಯಕೀಯ ಮೂಲಗಳು ಮತ್ತು ಪೊಲೀಸರು ಕೂಡ ದೃಢಪಡಿಸಿಲ್ಲ.
ನಾಪತ್ತೆಯಾದಂದಿನಿಂದ ಪೋಷಕರು ಮತ್ತು ಕುಟುಂಬಸ್ಥರು ಜೋಡುಪಾಲ ವ್ಯಾಪ್ತಿಯಲ್ಲಿ ಮಂಜುಳಾಗೆ ನಿರಂತರ ಶೋಧ ನಡೆಸುತ್ತಿದ್ದು, ಗುರುವಾರ ಬೆಳಗ್ಗೆ ಆಕೆ ವಾಸವಿದ್ದ ಮನೆಯ 1 ಕಿ.ಮೀ. ದೂರದಲ್ಲಿ ಮಾನವನ ಅಸ್ಥಿಪಂಜರ ಪತ್ತೆಯಾಗಿತ್ತು.
ಮಡಿಕೇರಿ ಗ್ರಾಮಾಂತರ ಪೊಲೀಸರು ಅತ್ತ ತೆರಳಿ ಪರಿಶೀಲನೆ ನಡೆಸಿ, ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯ ವೈದ್ಯರಿಗೆ ಸೂಚಿಸಿದರು. ಅಸ್ಥಿಪಂಜರವನ್ನು ಪರೀಕ್ಷಿಸಿದ ವೈದ್ಯರು ಮೂಳೆಗಳು ಮನುಷ್ಯರದ್ದೆ ಎಂಬುದನ್ನು ಮಾತ್ರ ಖಚಿತ ಪಡಿಸಿದರು. ಹೆಚ್ಚಿನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸದೆ ಇದು ಮಂಜುಳಾ ಅವರ ಕಳೇಬರ ಎಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.