30 ರೂ.ಚೂರಿ: ತರಗತಿಯೊಳಗೇ ಕೊಲೆಗೆ ಸ್ಕೆಚ್!
Team Udayavani, Feb 22, 2018, 9:01 AM IST
ಸುಳ್ಯ: ಸುಳ್ಯದ ರಥಬೀದಿ ಯಲ್ಲಿ ಮಂಗಳವಾರ ಹಾಡಹಗಲೇ ಚೂರಿಯಿಂದ ತಿವಿದು ಸಹಪಾಠಿ ವಿದ್ಯಾರ್ಥಿನಿ ಅಕ್ಷತಾಳನ್ನು ಬರ್ಬರ ವಾಗಿ ಕೊಲೆ ಮಾಡಿದ ಕಾರ್ತಿಕ್ ಅದಕ್ಕಾಗಿ ಬೆಳಗ್ಗಿನಿಂದಲೇ ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.
ಬೆಳಗ್ಗಿನಿಂದಲೇ ಪೂರ್ವಸಿದ್ಧತೆ
ಮಂಗಳವಾರ ಬೆಳಗ್ಗಿನಿಂದಲೇ ಕಾರ್ತಿಕ್ ಕೊಲೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದ. ಮಧ್ಯಾಹ್ನ ರಥಬೀದಿಯ ಅಂಗಡಿಯಿಂದ 30 ರೂ. ಕೊಟ್ಟು ಚಾಕು ಖರೀದಿಸಿ ಅದನ್ನು ಸಮೀಪದ ಬಡಗಿಯಿಂದ ಚೂಪು ಮಾಡಿಸಿದ್ದ. ಅನಂತರ ಕಾಲೇಜಿಗೆ ಬಂದಿದ್ದ ಈತ ತರಗತಿಯಲ್ಲಿಯೇ ಆಕೆಗೆ ಇರಿಯಲು ಸ್ಕೆಚ್ ರೂಪಿಸಿದ್ದ. ಸೂಕ್ತ ಸಂದರ್ಭ ಸಿಗದ ಕಾರಣ ಅದು ಸಾಧ್ಯವಾಗಿರಲಿಲ್ಲ. ಸಂಜೆ ಆಕೆ ಕಾಲೇಜಿನಿಂದ ಬೇಗನೆ ಹೊರಟುದನ್ನು ಗಮನಿಸಿ ಆಕೆಗಿಂತ ಮೊದಲೇ ತೆರಳಿ ದಾರಿಯಲ್ಲಿ ಕಾದು ಕುಳಿತಿದ್ದ.
ಪ್ರೀತಿಸದಿದ್ದರೆ ಕೊಲ್ಲುವೆನೆಂದಿದ್ದ!
ನಾಲ್ಕು ತಿಂಗಳಿನಿಂದ ಅಕ್ಷತಾಳನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಕಾರ್ತಿಕ್ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಆಕೆಯನ್ನು ಬಲವಂತ ಮಾಡುತ್ತಿದ್ದ. ವಾಟ್ಸಪ್ ಸಂದೇಶ ರವಾನಿಸಿ ಎಚ್ಚರಿಕೆ ನೀಡಿದ್ದ ಹಾಗೂ ಕಳೆದ ರವಿವಾರ 200ಕ್ಕೂ ಅಧಿಕ ಸಂದೇಶ ಕಳುಹಿಸಿದ್ದ ಎನ್ನಲಾಗಿದೆ. ಪ್ರೀತಿಯನ್ನು ಒಪ್ಪದಿ ದ್ದಲ್ಲಿ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದ ಆತ ಈ ಬಗ್ಗೆ ಕೆಲವರ ಬಳಿ ಹೇಳಿ ಕೊಂಡಿರುವುದಾಗಿಯೂ ಮಾಹಿತಿ ಲಭಿಸಿದೆ. ಅಕ್ಷತಾ ಈತನ ಪ್ರೇಮ ನಿವೇದನೆಗೆ ಸ್ಪಂದಿಸಲಿಲ್ಲ ಹಾಗೂ ಈತನ ಪ್ರೀತಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಪದೇಪದೇ ಪ್ರೀತಿಸಲು ಸಂದೇಶ ರವಾನಿಸುತ್ತಿದ್ದ ಆತನನ್ನು, ಈ ಬಗ್ಗೆ ತಾನು ಉಪನ್ಯಾಸಕರು ಹಾಗೂ ಮನೆ ಯವರಿಗೆ ದೂರು ನೀಡುತ್ತೇನೆ ಎಂದು ಹೆದರಿಸಿದ್ದಳು. ಇದೇ ಕಾರಣಕ್ಕಾಗಿ ಆಕೆಗೆ ಇರಿದಿರುವುದಾಗಿ ವಿಚಾರಣೆ ಸಂದರ್ಭ ತಿಳಿಸಿದ್ದಾನೆ ಎನ್ನಲಾಗಿದೆ.
ಬುಧವಾರ ಅಂತ್ಯಕ್ರಿಯೆ
ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಅನಂತರ ಮಂಗಳವಾರ ರಾತ್ರಿ ಶವ ವನ್ನು ಮುಳ್ಳೇರಿಯ ಶಾಂತಿ ನಗರದ ಕರಣಿಯ ಮನೆಗೆ ಕೊಂಡೊಯ್ಯ ಲಾಯಿತು. ಅಕ್ಷತಾಳ ಸಹೋದರಿ ಬೆಂಗಳೂರಿನಲ್ಲಿದ್ದ ಕಾರಣ, ಅವರು ಆಗಮಿಸಿದ ಬಳಿಕ ಬುಧವಾರ ಬೆಳಗ್ಗೆ ಅಂತ್ಯಕ್ರಿಯೆ ನಡೆಸಲಾಯಿತು.
ನ್ಯಾಯಾಂಗ ಬಂಧನ
ಬುಧವಾರ ಬೆಳಗ್ಗೆ ಸ್ಥಳ ಮಹಜರು ನಡೆಸಿದ ಅನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾ ಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಶ್ರದ್ಧಾಂಜಲಿ ಸಭೆ
ಬುಧವಾರ ನೆಹರೂ ಮೆಮೋರಿ ಯಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಬಳಿಕ ಕಾಲೇಜಿಗೆ ರಜೆ ಸಾರಲಾಯಿತು.
ಮೋಂಬತ್ತಿ ಮೆರವಣಿಗೆ
ಕೊಲೆ ಖಂಡಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದಲ್ಲಿ ಮೋಂಬತ್ತಿ ಮೆರವಣಿಗೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶ್ರೀ ಚೆನ್ನಕೇಶವ ದೇವಾಲಯದ ಬಳಿಯಿಂದ ಕೆವಿಜಿ ಸರ್ಕಲ್ ತನಕ ಮೆರವಣಿಗೆ ಸಾಗಿತು.