ಎರ್ಮೆಮಜಲು-ಒಕ್ಕೆತ್ತೂರು ರಸ್ತೆ ಕಾಮಗಾರಿಗೆ ವೇಗ
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಿಂದ 8.65 ಕೋಟಿ ರೂ. ಅನುದಾನ
Team Udayavani, Apr 8, 2022, 10:11 AM IST
ವಿಟ್ಲ: ಕಲ್ಲಡ್ಕ- ವಿಟ್ಲ- ಸಾರಡ್ಕ- ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ, ಕಲ್ಲಡ್ಕ-ವಿಟ್ಲ ಮಧ್ಯೆ ಎರ್ಮೆಮಜಲುವಿನಿಂದ ವಿಟ್ಲ ಸಮೀಪದ ಒಕ್ಕೆತ್ತೂರುವರೆಗಿನ 6.50 ಕಿ.ಮೀ. ದೂರದ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿ ವೇಗದಿಂದ ನಡೆಯುತ್ತಿದೆ. ಇದಕ್ಕೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಅನುದಾನ 8.65 ಕೋಟಿ ರೂ. ಮಂಜೂರಾಗಿದೆ.
ಓರ್ವ ಗುತ್ತಿಗೆದಾರರು 4.15 ಕೋಟಿ ರೂ. ಅನುದಾನ ಮತ್ತು ಇನ್ನೋರ್ವ ಗುತ್ತಿಗೆ ದಾರರು 4.50 ಕೋಟಿ ರೂ. ಅನುದಾನದ ಕಾಮಗಾರಿಯನ್ನು ಪೂರ್ತಿ ಗೊಳಿಸಬೇಕಾಗಿದೆ.
ವಿಸ್ತರಣೆ ಕಾಮಗಾರಿ
ಹಿಂದಿನ ಅವಧಿಯಲ್ಲಿ ಕಲ್ಲಡ್ಕದಿಂದ ಎರ್ಮೆಮಜಲುವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ 3 ಕೋಟಿ ರೂ. ಅನುದಾನದಲ್ಲಿ ನಡೆಸಲಾಗಿತ್ತು. 1.5 ಕೋಟಿ ರೂ. ಅನುದಾನದಲ್ಲಿ ವೀರಕಂಭದಲ್ಲಿ ರಸ್ತೆಯನ್ನು ವಿಸ್ತರಿಸಲಾಗಿತ್ತು. ಆಗ ಬಿ.ರಮಾನಾಥ ರೈ ಶಾಸಕರಾಗಿದ್ದರು. ಪ್ರಸ್ತುತ 6.5 ಕಿ.ಮೀ. ದೂರದ ಕಾಮಗಾರಿಯಲ್ಲಿ 8 ಮೋರಿ ಅಭಿವೃದ್ಧಿ ಮಾಡಲಾಗುತ್ತಿದೆ. 5 ಹೊಸ ಮೋರಿಗಳನ್ನು, 5 ಡೆಕ್ ಸ್ಲ್ಯಾಬ್ಗಳನ್ನು ನಿರ್ಮಿಸಲಾಗುತ್ತಿದೆ. 5ರಿಂದ 5.50 ಮೀಟರ್ ಅಗಲವಿರುವ ರಸ್ತೆಯನ್ನು 7 ಮೀಟರ್ ಗೆ ವಿಸ್ತರಣೆ ಮಾಡಲಾಗುತ್ತಿದೆ. ಕೆಲವು ತಿರುವುಗಳಲ್ಲಿ 9 ಮೀಟರ್ ಅಗಲದವರೆಗೂ ವಿಸ್ತರಣೆಯಾಗುತ್ತಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಲ್ಲಡ್ಕ-ವಿಟ್ಲ ರಸ್ತೆ ವಿಸ್ತರಣೆ ಕಾಮಗಾರಿ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ ಅವಧಿಯಲ್ಲಿ ಪೂರ್ತಿಯಾದಂತಾಗುತ್ತದೆ. ಮುಂದುವರಿದ ಭಾಗವಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ವ್ಯಾಪ್ತಿಗೂ ಇದೇ ರೀತಿ 5 ಕೋಟಿ ರೂ. ಅನುದಾನ ಪ್ರಸ್ತಾವನೆ ಸಲ್ಲಿಸಲಾಗಿದ್ದು ಬಿಡುಗಡೆಯಾಗುವ ಹಂತ ದಲ್ಲಿದೆ. ಲೋಕೋಪಯೋಗಿ ಇಲಾಖೆಯ ವತಿಯಿಂದ ಅಭಿವೃದ್ಧಿ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಒಕ್ಕೆತ್ತೂರಿನಿಂದ ವಿಟ್ಲ ಪೇಟೆ, ಕಾಶಿಮಠ, ಅಪ್ಪೇರಿಪಾದೆವರೆಗೆ ಸುಮಾರು ಎರಡೂವರೆ ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.
ಪರಿವರ್ತನೆ ಅಗತ್ಯ
ಈ ರಸ್ತೆಯಲ್ಲಿ ಕೆಲವೊಂದು ಕಡೆ ಪರಿವರ್ತನೆ ಮಾಡಬೇಕಾಗಿದೆ. ಕೆಲಿಂಜ ಸಮೀಪದಲ್ಲಿ ಎತ್ತರ ತಗ್ಗು ಪ್ರದೇಶವಿದ್ದು, ತುತ್ತತುದಿಯನ್ನು ತಲುಪುವವರೆಗೂ ಎರಡೂ ಕಡೆಯಿಂದ ಎದುರರಿನನಿಂದ ಆಗಮಿಸುವ ವಾಹನಗಳು ಕಾಣುವುದಿಲ್ಲ. ಇದು ಅಪಾಯಕ್ಕೆ ಕಾರಣವಾಗಿದೆ. ಕೆಲ ತಿರುವುಗಳನ್ನು ಕಡಿತಗೊಳಿಸಿ, ನೇರಗೊಳಿಸಲು ಅವಕಾಶವಿಲ್ಲದಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಇಲ್ಲದೆ ಕೆಲ ತೋಟದ ಮಧ್ಯೆ, ಅಂಗಡಿಗಳ ಮಧ್ಯೆ ರಸ್ತೆ ವಿಸ್ತರಣೆ ಮಾಡಲಾಗುತ್ತಿಲ್ಲ.
ಕಲ್ಲಡ್ಕ-ಸಾರಡ್ಕ ರಸ್ತೆಗೆ ಫಲಕ ಅಳವಡಿಕೆ
ಕಲ್ಲಡ್ಕ-ಸಾರಡ್ಕ ರಸ್ತೆಗೆ ಫಲಕ ಅಳವಡಿಕೆ, ಬಣ್ಣ, ಸ್ಟಡ್ಸ್ ಅಳವಡಿಸುವ ಕಾಮಗಾರಿಗಳಿಗೆ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣ ಕೇಂದ್ರ(ಪ್ರಾಂಸಿ)ವತಿಯಿಂದ ಪ್ರತ್ಯೇಕ 1 ಕೋಟಿ ರೂ. ಅನುದಾನ ಮಂಜೂರಾಗಿದೆ. ಈ ಅನುದಾನದಲ್ಲಿ ಸೋಲಾರ್ ರೋಡ್ ಸ್ಟಡ್ಸ್, ಟ್ರಾನ್ Õಫರ್ ಬಾರ್, ನಾಮಫಲಕ ಅಳವಡಿಕೆ, ರಸ್ತೆಯ ಎರಡೂ ಬದಿಯಲ್ಲಿ ಬಿಳಿ ಬಣ್ಣ, ಸಣ್ಣ ಹಂಪ್ಸ್ ಇರುವಲ್ಲಿ ಹಳದಿ ಬಣ್ಣವನ್ನು ಬಳಿಯಲಾಗಿದೆ. ಸೋಲಾರ್ ರೋಡ್ ಸ್ಟಡ್ಸ್ ಮೂಲಕ ರಸ್ತೆಯಲ್ಲಿ ಕೆಂಪು ದೀಪ ಉರಿಯುವಂತೆ ಮಾಡಲಾಗುತ್ತಿದೆ.
ಪ್ರಸ್ತುತ ಎರ್ಮೆಮಜಲು-ಒಕ್ಕೆತ್ತೂರು ರಸ್ತೆ ಕಾಮಗಾರಿ ಪೂರ್ತಿಯಾದ ಬಳಿಕ ಈ ರಸ್ತೆ ಎಚ್ಚರಿಕೆ ಫಲಕ, ಬಣ್ಣಗಳನ್ನು ಬಳಿಯುವ ಕಾಮಗಾರಿ ನಡೆಯುತ್ತದೆ.
ಜನಸ್ನೇಹಿಯಾಗಿರಬೇಕೆಂಬ ಆಶಯ
ಕಲ್ಲಡ್ಕದಿಂದ ಸಾರಡ್ಕವರೆಗಿನ ರಸ್ತೆ ಸಂಪೂರ್ಣವಾಗಿ ಜನಸ್ನೇಹಿಯಾಗಿರಬೇಕೆಂಬ ಆಶಯ ನಮ್ಮದು. ಭೂ ಸ್ವಾಧೀನ ಪಡಿಸುವ ಪ್ರಕ್ರಿಯೆ ಇಲಾಖೆಯಲ್ಲಿಲ್ಲ. ವಾಹನ ದಟ್ಟಣೆಯಿಲ್ಲದೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ನಿರ್ಧಾರವಾಗಿಲ್ಲ. ಕೆಲವು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಬಹುದು. ಅಲ್ಲಿಯವರೆಗೆ ರಸ್ತೆ ಉತ್ತಮವಾಗಿರಬೇಕು. ಈ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಂಡಿದೆ. –ಪ್ರೀತಮ್, ಎಂಜಿನಿಯರ್, ಲೋಕೋಪಯೋಗಿ ಇಲಾಖೆ.