ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ : ಚುನಾವಣೆ ಅಕ್ರಮಗಳಿಗೆ ಬ್ರೇಕ್
Team Udayavani, May 4, 2018, 8:00 AM IST
ಮಡಂತ್ಯಾರು: ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ತಿಂಗಳ ಹಿಂದೆಯೇ ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಗೆ ಒಳಪಟ್ಟು ಸಬರಬೈಲು, ನಾರಾವಿ, ಕೊಕ್ಕಡ, ಚಾರ್ಮಾಡಿಗಳಲ್ಲಿ ಚೆಕ್ಪೋಸ್ಟ್ ಹಾಕ ಲಾಗಿದೆ. ಎಲ್ಲ ವಾಹನಗಳನ್ನು ತಪಾಸಣೆ ಮಾಡುವ ಆದೇಶದಂತೆ ಹಾಲಿನ ವಾಹನ, ಆ್ಯಂಬುಲೆನ್ಸ್, ಚುನಾವಣ ಕರ್ತವ್ಯದ ನಾಮ ಫಲಕ ಹಾಕಿಕೊಂಡು ಹೋಗುವ ವಾಹನಗಳನ್ನೂ ತಪಾಸಣೆ ಮಾಡಲಾಗುತ್ತಿದೆ.
ಚುನಾವಣೆ ಕರ್ತವ್ಯದ ವಾಹನವೂ ತಪಾಸಣೆ
ಮತದಾರರ ಮನವೊಲಿಸಲು ವಾಮ ಮಾರ್ಗ ಬಳಸುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಚುನಾವಣೆ ಕರ್ತವ್ಯದ ವಾಹನಗಳನ್ನೂ ತಪಾಸಣೆ ಮಾಡಲಾಗುತ್ತಿದೆ. ವಾಹನದ ಹಿಂದೆ ಮುಂದೆ ‘ಚುನಾವಣೆ ಕರ್ತವ್ಯದಲ್ಲಿ’ ಎಂಬ ಫಲಕವನ್ನು ಅಂಟಿಸಿ ಅಕ್ರಮ ನಡೆಸುವ ಸಾಧ್ಯತೆ ಇರುವುದರಿಂದ ಚುನಾವಣೆ ಕರ್ತವ್ಯದ ವಾಹನಗಳನ್ನೂ ತಪಾಸಣೆ ಮಾಡಲು ಬೆಳ್ತಂಗಡಿ ವೃತ್ತ ನಿರೀಕ್ಷಕರು ಆದೇಶ ನೀಡಿದ್ದಾರೆ.
ಭದ್ರತೆಗೆ ಕ್ರಮ
ಶಾಂತಿಯುತ ಮತದಾನ ನಡೆಯಲು ವಿವಿಧ ರೀತಿಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಭದ್ರತೆಗಾಗಿ ತಾಲೂಕಿಗೆ ಪೊಲೀಸ್, ಪ್ಯಾರಾ ಮಿಲಿಟರಿ ಫೋರ್ಸ್, ರೆವಿನ್ಯೂ ತಂಡ ಆಗಮಿಸಿದ್ದು, ಪ್ಯಾಡರ್ ಸೆಕ್ಯೂರಿಟಿ 85 ಮಂದಿ, ಸೀಮಾ ಸುರಕ್ಷಾ ಬಲದ 92 ಮಂದಿ ತಾಲೂಕಿನಲ್ಲಿ ಬೀಡು ಬಿಟ್ಟಿದ್ದು, ಹೆಚ್ಚಿನ ಭದ್ರತೆಗಾಗಿ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ನ 70 ಜನ ಬರಲಿದ್ದಾರೆ.
ಎಲ್ಲ ವಾಹನ ತಪಾಸಣೆ
ತಾ|ನ 4 ಕಡೆಗಳಲ್ಲಿ ಚೆಕ್ಪೋಸ್ಟ್ ಹಾಕಲಾಗಿದ್ದು, ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಶಿರಾಡಿ ಘಾಟಿ ಸಂಚಾರ ಬಂದ್ ಆದ ಕಾರಣ ಹೆಚ್ಚಿನ ವಾಹನಗಳು ಚಾರ್ಮಾಡಿ ಮೂಲಕ ಹೋಗುತ್ತಿದ್ದು, ವಾಹನ ಸಂಚಾರ ಹೆಚ್ಚಾಗಿದೆ. ಭದ್ರತೆ ದೃಷ್ಟಿಯಿಂದ ಎಲೆಕ್ಷನ್ ಡ್ಯೂಟಿ ವಾಹನಗಳನ್ನೂ ತಪಾಸಣೆ ಮಾಡಲು ಆದೇಶಿಸಲಾಗಿದೆ.
– ಸಂದೇಶ್ ಪಿ.ಜಿ. ವೃತ್ತ ನಿರೀಕ್ಷಕರು, ಬೆಳ್ತಂಗಡಿ